Wednesday, July 28, 2010

ತಾಳೀಕೋಟಿ ಇತಿಹಾಸ ಪರಂಪರೆ

ತಾಳಿಕೋಟಿ ಪಟ್ಟಣವು ವಿಜಯನಗರ ಸಾಮ್ರಾಜ್ಯ ಪತನದಿಂದಾಗಿನಿಂದಲೂ ಐತಿಹಾಸಿಕ ಪ್ರಸಿದ್ಧಿ ಪಡೆದು ತನ್ನದೆ ಆದ ವಿಶಿಷ್ಟ  ಸಾಧನೆ ಅಲ್ಲದೆ ಅನೇಕ ಕುರುಹುಗಳನ್ನು ಹೊಂದಿದೆ.



ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪ್ರಮುಖ ಪಟ್ಟಣ ತಾಳಿಕೋಟಿ  ಇದಾಗಿದ್ದು ಈಗ ಪ್ರಮುಖ ವ್ಯಾಪಾರಿ ಸ್ಥಳವಾಗಿದುದ್ದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ತನ್ನದೆ ಆದ ಘನತೆ ಗೌರವದೊಂದಿಗೆ ಮುನ್ನಡೆದಿದೆ.


ತಾಳಿಕೋಟಿ ತಾಲೂಕ ಕೇಂದ್ರಕ್ಕೆ ಅರ್ಹತೆ ಪಡೆದ ಈ ತಾಳಿಕೋಟಿ ಪಟ್ಟಣದ ತಾಲೂಕಾ ವ್ಯಾಪ್ತಿಯಲ್ಲಿ ಮುಂಗಾರು ಕ್ಷೇತ್ರವಾಗಿ ೮೨.೮೬೮ ಹೆಕ್ಟರ ಪ್ರದೇಶ ಹಿಂಗಾರು ಪ್ರದೇಶ ಹಾಗೂ ೯೨೩೮ ಹೆಕ್ಟರ ಪ್ರದೇಶ, ಸಾಗುವಳಿ ಇಲ್ಲದ ಪ್ರದೇಶವಾಗಿದೆ. ಇದರಲ್ಲಿ ೧೦೧೬ ಹೆಕ್ಟರ ಗೋಮಾಳ ಪ್ರದೇಶವಿದೆ.
 ದ್ರೋಣಾ ನದಿ ದಡದಲ್ಲಿರುವ ಸಿದ್ಧಲಿಂಗೇಶ್ವರ ದೇವಾಲಯ


ತಾಲೂಕಿನ ರೇಖಾಂಶ ೭೫.೮೦ ಅಕ್ಷಾಂಶ ಇದ್ದು, ೧೫೨೦ ಮಧ್ಯದಲ್ಲಿ ವಿಸ್ತರಿಸಿದೆ. ಸಮುದ್ರ ಮಟ್ಟದಿಂದ ೧೬೫೦ ರಿಂದ ೧೮೦೦ ಅಡಿ ಎತ್ತರದಲಿದ್ದು ಈ ಪ್ರದೇಶದಲ್ಲಿ ಸಾಮಾನ್ಯ ಮಳೆ ೫೭೬.೫ ಇರುತ್ತದೆ.


ತಾಳಿಕೋಟಿಯ ಇತಿಹಾಸ


ಐತಿಹಾಸಿಕ ಹಿನ್ನಲೆ ಹೊಂದಿದ ತಾಳಿಕೋಟಿ ಪಟ್ಟಣ ಇದರ ಇತಿಹಾಸವು ಅಷ್ಟೆ ಆಸಕ್ತಿದಾಯಕವಾಗಿರುತ್ತದೆ. ನಂದ,ಮೌರ್ಯ, ಶಾತವಾಹನರ ಆಡಳಿತಕ್ಕೆ ಈ ಪ್ರದೇಶ ಒಳಪಟ್ಟಿತ್ತಾದರೂ ಯೂವುದೇ ಕುರುಹುಗಳು ಈ ಭಾಗದಲ್ಲಿ ಉಳಿದಿಲ್ಲ.
ಬಾದಾಮಿ ಚಾಲುಕ್ಯರು ರಾಷ್ಟ್ರಕೂಟರು ಹಾಗೂ ಕಲ್ಯಾಣ ಚಾಲುಕ್ಯರು ಇಲ್ಲಿ ಆಳಿ ಹೋದವರಾಗಿದ್ದು ಈ ತಾಳಿಕೋಟಿ ಪಟ್ಟಣ ಬ.ಬಾಗೇವಾಡಿಯ ಮಧ್ಯದಲ್ಲಿ ಸ್ಥಳವಾಗಿದ್ದರಿಂದ ಬಸವಾದಿ ಶರಣರ ಪ್ರಭಾವ ಈ ಭಾಗದ ಜನ ಜೀವನದ ಮೇಲೆ ಅಚ್ಚೊತ್ತಿದಂತಾಗಿದೆ.
ಸಿದ್ಧಲಿಂಗೇಶ್ವರ ದೇವಾಲಯದ ಬಾಗಿಲದಲ್ಲಿರುವ ಶಿಲ್ಪ ವಿನ್ಯಾಸ

ರಾಮಲಿಂಗೇಶ್ವರ ದೇವಾಲಯದ ಕಂಬದಲ್ಲಿರುವ ಶಾಸನ





೧೬೮೬ರಲ್ಲಿ ಈ ರಾಜ್ಯ ಮೊಗಲರ ಕೈಕೆಳಗಿನ ನಿಜಾಮರ ರಾಜ್ಯದ ಒಂದು ಭಾಗವಾಯಿತು ನಂತರ ೧೭೬೦ ರಲ್ಲಿ ನಿಜಾಮನು ವಿಜಾಪುರ ರಾಜ್ಯವನ್ನು ಬಾಲಾಜಿ ಪೇಶ್ವೆಗೆ ಬಿಟ್ಟುಕೊಟ್ಟನು. ೧೮೧೮ ರಲ್ಲಿ ಪೇಶ್ವೇಯವರ ಪತನವಾಯಿತು. ನಂತರ ವಿಜಾಪೂರ ಇದು ಬ್ರಿಟಿಷರ ಆಧೀನಕ್ಕೆ ಒಳಪಟ್ಟಿತು. ೧೮೨೦ ರಲ್ಲಿ ತಾಳಿಕೋಟಿ ಪಟ್ಟಣ್ಣಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳ ತಾಲೂಕ ಹಾಗೂ ಇಂಡಿ ಈ ತಾಲೂಕುಗಳ ೩೪೫ ಗ್ರಾಮಗಳನ್ನು ಬಾಗಲಕೋಟೆ ಸಬ್ ಕಲೆಕ್ಟೋರೆಟಗೆ ಒಳಪಡಿಸಿ ಧಾರವಾಡ ಜಿಲ್ಲೆಗೆ ಒಳಪಡಿಸಲಾಯಿತು.


೧೮೨೫ ರಲ್ಲಿ ಈ ಪ್ರದೇಶವನ್ನು ಪುಣೆ ಜಿಲ್ಲೆಗೆ ನಂತರ ಸೋಲ್ಲಾಪುರ ಜಿಲ್ಲೆಗೆ ವರ್ಗಾಯಿಸಲಾಯಿತು. ೧೮೬೪ ರಲ್ಲಿ ಕಲಾದಿಗಿ ಜಿಲ್ಲೆಗೆ ಸೇರಿಸಲಾಯಿತು.
ಮಹಾದೇವ ದೇವಸ್ಥಾನದಲ್ಲಿರುವ ಭೈರವನ ಶಿಲ್ಪ






ನಂತರ ೧೮೮೪ ರಲ್ಲಿ ನಮ್ಮ ತಾಳಿಕೋಟೆ ಪಟ್ಟಣ್ಣಕ್ಕೆ ಸಂಬಂಧಿಸಿದ ಮುದ್ದೇಬಿಹಾಳ ಪಟ್ಟಣ ವಿಜಾಪೂರ ಜಿಲ್ಲೆಯ ಕೇಂದ್ರ ಸ್ಥಳವಾಗಿ ತಾಲೂಕಾಗಿ ಮಾರ್ಪಟ್ಟಿತು.


ಇಂತಹ ತಾಲೂಕಿನ ಹೃದಯ ಭಾಗದಂತಿರುವ ತಾಳಿಕೋಟೆ ಪಟ್ಟಣ ರಕ್ಕಸಗಿ ತಂಗಡಗಿ ಕದನದ ಇತಿಹಾಸದಿಂದ ಅಜರಾಮರವಾಗಿ ಉಳಿದಿದೆ. ಇತಿಹಾಸವನ್ನು ಅವಲೋಕಿಸಿದಾಗ ಹಿಂದಿನ ರಾಜಮಹಾರಾಜರ ಕೋಟೆ ಕೊತ್ತಲಗಳು ತಾಳಿಕೋಟೆ ಪಟ್ಟಣ ಒಳಗೊಂಡು ಮುದ್ದೇಬಿಹಾಳ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿ ಎದ್ದು ಕಾಣುತ್ತಿದೆ.


ತಾಳಿಕೋಟೆಯ ಪ್ರಮುಖ ಸ್ಥಳಗಳ ಪರಿಚಯ :


ಐತಿಹಾಸಿಕ ಹಿನ್ನಲೆ ಪಡೆದ ಈ ತಾಳಿಕೋಟೆ ಪಟ್ಟಣದಲ್ಲಿ ರಾಜವಾಡೆ, ಸಿದ್ಧಲಿಂಗೇಶ್ವರ ದೇವಸ್ಥಾನ, ಶ್ರೀರಾಮಮಂದಿರ, ಶ್ರೀಮಹಾದೇವ ಮಂದಿರ, ಶ್ರೀಖಾಸ್ಗತೇಶ್ವರ ಮಠ, ಶ್ರೀವಿಠ್ಠಲಮಂದಿರ, ಭೀಮನಭಾವಿ, ಪಂಚೇಸಾದರ್ಗಾ, ಶ್ರೀಗ್ರಾಮದೇವತೆ ದೇವಸ್ಥಾನ, ಗ್ರಾಮದೇವತೆಯ ಬೀಸುವಕಲ್ಲು, ಇನ್ನಿತರ ಇಂತಹ ಪ್ರಮುಖ ಐತಿಹಾಸಿಕ ದೇವಾಲಯಗಳನ್ನು ಹೊಂದಿದ್ದಲ್ಲದೆ ಇಡೀ ತಾಳಿಕೋಟಿ ಪಟ್ಟಣ ಸುತ್ತ ಸುತ್ತುವರೆದ ಕೋಟೆ ಗೋಡೆ ನೋಡುವರಿಗೆ ಇನ್ನೂ ತಾಳಿಕೋಟೆ ಪಟ್ಟಣವನ್ನು ರಕ್ಷಣೆ ಮಾಡುತ್ತದೆ ಎಂದೆನಿಸದೆ ಇರಲಾರದು.


ಇಂತಹ ತಪೋಭೂಮಿಯಾದ ತಾಳಿಕೋಟಿ ಪಟ್ಟಣದಲ್ಲಿಯ ಶ್ರೀ ಖಾಸ್ಗತೇಶ್ವರ ಮಠವು ಜನತೆಗೆ ಆಧ್ಯಾತ್ಮಕ ಜ್ಞಾನವನ್ನು ನೀಡುತ್ತಾ ಸಾಗಿದೆ.


ಅದರಂತೆ ತಾಳಿಕೋಟಿ ಸಮೀಪದ ಮೂಕಿಹಾಳದರ್ಗಾದ ಲಾಡ್ಲೆಮಶ್ಯಾಕದರ್ಗಾ  ಹಿಂದು ಮುಸ್ಲಿಂರ ಸಾಮರಸ್ಯದೊಂದಿಗೆ ಕೋಮು ಸೌಹಾರ್ದತೆಯೊಂದಿಗೆ ಜನತೆ ಉರುಸು ಜಾತ್ರೆ ಉತ್ಸವನ್ನು ಆಚರಿಸುತ್ತಾ ಸಾಗಿರುವದು ಅತೀವ ಮಹತ್ವ
ದ್ದಾಗಿದೆ.


ತಾಳಿಕೋಟೆ ಪಟ್ಟಣದಲ್ಲಿ ಸರ್ಕಾರಿ, ಪ್ರಾಥಮಿಕ, ಶಾಲೆಗಳು ಅನುದಾನ ಪಡೆದ ಪ್ರಾಥಮಿಕ, ಸರ್ಕಾರಿ ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಕೈಗಾರಿಕಾ ಕಾಲೇಜು ಇವುಗಳಲ್ಲದೆ ವೃತ್ತಿಪರ ತರಬೇತಿ ಕೇಂದ್ರ, ಕಂಪ್ಯೂಟರ ತರಬೇತಿ ಕೇಂದ್ರಗಳು ಸಹ ಕಾರ್ಯ ನಿರ್ವಹಿಸುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಮುನ್ನಡೆದಿದೆ.


ಪಂಚಷಾಯಿ ದರ್ಗಾ

ಇದು ಅಲ್ಲದೇ ತಾಳಿಕೋಟೆ ಪಟ್ಟಣದ ಮಗ್ಗಲು ಹರಿಯುತ್ತಿರುವ ದೋಣಿನದಿ ಮೈದುಂಬಿ ಹರಿದರೆ ಪಸಲು ಬೆಳೆಗಳೆಲ್ಲಾ ತುಂಬಿ ತುಳುಕುತ್ತವೆ ಎಂದು ಹಿರಿಯರು ಹೇಳಿದಂತೆ “ದೋಣಿ ಬೆಳೆದರೆ ಓಣೆಲ್ಲಾ ಜೋಳ” ಎಂಬಂತೆ ಈ ಭಾಗದಲ್ಲಿ ಮುಂಗಾರು ಬೆಳೆಯಾಗಿ ಜೋಳ, ಸಜ್ಜೆ, ಹೆಸರು, ಸೂರ್ಯಕಾಂತಿ ಬೆಳೆಯನ್ನು ಅದರಂತೆ ಹಿಂಗಾರು ಬೆಳೆಯಾಗಿ ಬಿಳಿಜೋಳ, ಹತ್ತಿ, ಕುಸುಬಿ, ಗೋದಿ ಬೆಳೆಯನ್ನು ಬೆಳೆಯಲಾಗುತ್ತದೆ.



ತಾಳಿಕೋಟೆಯ ಸರಪಳಿ ಕೊಂಡಿಯಂತಿರುವ ಮಿಣಜಗಿ ಗ್ರಾಮ ಹಾಗೂ ತಾಳಿಕೋಟಿ ಪಟ್ಟಣ ಕಲ್ಲುಗಳಿಂದ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಪರಸಿ ಕಲ್ಲುಗಳಿಗೆ ನೆರೆರಾಜ್ಯಗಳಿಗೆ ಬೇಡಿಕೆ ಇದೆ. ಈ ಗಣಿಗಳಲ್ಲಿ ಉದ್ಯೋಗ ಸಾವಿರಾರು ಕಾರ್ಮಿಕರಿಗೆ ದೊರೆತ್ತಿದ್ದು ಈ ಭಾಗದಲ್ಲಿಯ ೨೫% ರಷ್ಟು ಜನತೆಯ ನಿರುದ್ಯೋಗ ಸಮಸ್ಯೆ ಇದರಿಂದ ನೀಗಿದಂತಾಗಿದೆ.


ಈ ರೀತಿ ತಾಳಿಕೋಟಿ ಪಟ್ಟಣ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿ ಎಲ್ಲ ಮತಬಾಂಧವರನ್ನು ತನ್ನ ಮಡಿಲಲ್ಲಿ ಶಾಂತಿ ಸಮಾಧಾನದಿಂದ ಸಲಹುತ್ತ ನಡೆದಿದೆ.


ತಾಳಿಕೋಟಿಯ ಅಗಸಿ ಬಾಗಿಲಲ್ಲಿ ಇರುವ ವೀರಗಲ್ಲು,ಸತಿ ಕಲ್ಲು, ಸಪ್ತಮಾತೃಕೆಯರ ಶಿಲ್ಪಗಳು ಸುಂದರವಾಗಿವೆ. ಆದರೆ ರಕ್ಷಣೆಯಿಲ್ಲದೆ ಹಾಳಾಗುತ್ತಲಿವೆ. ಭೀಮನ ಭಾವಿ, ಕೈಲಾಸ ಪೇಟೆ ದಾರಿಯಲ್ಲಿಯ ಕಟ್ಟೆ ಮೇಲೆ, ಮಲ್ಲಯ್ಯನ ಗುಡಿಯಲ್ಲಿಯ ಭೈರವನ ಶಿಲ್ಪಗಳು ಕಲಾ ಕೌಶಲ್ಯದ ಪ್ರತೀಕವಾಗಿವೆ.


ರಾಸ್ತೆ ವಾಡೆಯ ಅಗಸಿ ಪಕ್ಕದಲ್ಲಿರುವ ವೀರನ ಗುಡಿಯಲ್ಲಿ ಎರಡು ವೀರಗಲ್ಲುಗಳಿವೆ. ಇಲ್ಲಿಯೇ ದ್ಯಾಮವ್ವನ ಕಲ್ಲು ಇದೆ.


ಅವಸಾನದ ಅಂಚಿನಲ್ಲಿರುವ ಕೋಟೆ
ಶಾಸನಗಳು : ೧೯೨೯ ರಲ್ಲಿ ಒಟ್ತು ನಾಲ್ಕು ಶಾಸನಗಳು ಇರುವ ಬಗ್ಗೆ ತಿಳಿದು ಬಂದಿದೆ. ಎರಡು ಶಾಸನಗಳು ಡೋಣಿಯ ದಡದಲ್ಲಿರುವ ರಾಮಲಿಂಗನ ಗುಡಿಯ ಕಂಬದಲ್ಲಿವೆ. ಇನ್ನೊಂದು ಅಂಬಾಭವಾನಿಯ ಎದುರಿನಲ್ಲಿರುವ ಕಂಬದಲ್ಲಿದೆ. ಅದೆ ರಿ ರೀತಿಯಾಗಿ ಮತ್ತೊಂದು ಶಾಸನ ರಾಸ್ತೆ ವಾಡೆಯ ಮಸೀದಿಯ ಎದುರಿಗಿರುವ        ಕಟ್ಟಡವೊಂದರಲ್ಲಿ ಅರಾಬಿಕ್  ಭಾಷೆಯಲ್ಲಿದೆ.


ರಾಸ್ತೆವಾಡೆ:


ಕ್ರಿ.ಶ ೧೬೫೦ ರಲ್ಲಿ ಬಾಳಾಜಿ ಬಾಜಿರಾವ ಪ್ವೇಶೆಯು ತಾಳಿಕೋಟಿಯನ್ನು ತನ್ನ ಬೀಗನಾದ ಆನಂದರಾವ ರಾಸ್ತೆ ಎಂಬುವವನಿಗೆ ಸರಂಜಾಮಿಯಾಗಿ ಕೊಟ್ಟನು.  ಇಲ್ಲಿ ಆನಂದರಾವ ಪೇಟೆ, ಕೈಲಾಸ ಪೇಟೆ, ಮತ್ತು ರಾಸ್ತೆವಾಡೆ ಎಂಬ ವಾಡೆಯನ್ನು ಕಟ್ಟಿದನು.


೧೯೮೧ ರಲ್ಲಿ ಮಾಜಿ ಉಪರಾಷ್ಟ್ರಪತಿಗಳಾದ ಶ್ರೀ ಬಿ.ಡಿ.ಜತ್ತಿ ಯವರ ಘನ ಅಧ್ಯಕ್ಷತೆಯಲ್ಲಿ ಈ ಅರಮನೆಯಲ್ಲಿ ಅಂಬರ ಚರಕ ಖಾದಿ ಕೇಂದ್ರವನ್ನು ಸ್ಥಾಪಿಸಿದ್ದು ಈ ಭಾಗದಲ್ಲಿ ಹತ್ತಿ ಬೆಳೆಯುದರಿಂದ ಇಲ್ಲಿ ಪ್ರಾರಂಭಗೊಂಡಿತ್ತು. ಹತ್ತಿ ಬೆಳೆಯುವದು ಕಡಿಮೆಯಾದ ಪ್ರಯುಕ್ತ ಈಗ ಅದು ಸಹ ನಿಂತು ಹೋಗಿದೆ.


ಅರಮನೆಯ ಮುಂದಿನ ಭವಾನಿ ಮಂದಿರ ವರಾಂಡದಲ್ಲಿ ಇತ್ತೀಚಿಗಷ್ಟೆ ಕೆಂಪು ಮರಳುಗಲ್ಲಿನಲ್ಲಿ ತಯಾರಿಸಿದ ದೊಡ್ಡದಾದೊಂದು ಬೀಸುವಕಲ್ಲು ದೊರೆತಿದ್ದು ಇದನ್ನು ದ್ಯಾವವ್ವನ ಬೀಸುಕಲ್ಲು ಎಂದು ಕರೆಯಲಾಗುತ್ತದೆ.


ರಾಸ್ತೆವಾಡೆಯಲ್ಲಿ ಅನೇಕ ದೇವಾಲಯಗಳು ಇವೆ. ಈ ದೇಗುಲಗಳ ಗೋಡೆಗಳು ಕಮಾನಿನಾಕಾರದ್ದಲ್ಲಿವೆ. ದೇಗುಲದ ಕಂಬಗಳು ಪೂರ್ವ ಚಾಲುಕ್ಯರ ಕರಿಕಲ್ಲಿನ ವಿಶಿಷ್ಟ ಮಾದರಿಯಿಂದ ಕೂಡಿದ್ದರೆ, ಕಮಾನಿನಾಕಾರದಲ್ಲಿರುವ ದೇಗುಲದ ಭಾಗವು ಇತ್ತಿಚೀನ ಸೇದಿ ಕಲ್ಲಿನಿಂದ ನಿರ್ಮಾಣವಾಗಿರುವುದು ಇದರ ವೈಶಿಷ್ಟ್ಯವಾಗಿದೆ. ವಾಸ್ತುಶಿಲ್ಪ ಲಕ್ಷಣಗಳಿಂದ ಇನ್ನೊಂದು ಕಲ್ಯಾಣ ಚಾಲುಕ್ಯರ ಸುಂದರವಾದ ದೇಗುಲವಾಗಿದೆ.


ತಾಳಿಕೋಟೆಯ ಕೋಟೆ :    


೩ ಮೈಲುಗಳಷ್ಟು ವಿಸ್ತಾರವಾದ ವೃತ್ತಾಕಾರದ ಪ್ರದೇಶವನ್ನು ಈ ಕೋಟೆ ಹೊಂದಿದೆ. ಇದರಲ್ಲಿ ಅನೇಕ ಬೃಹತ್ತಾಕಾರದ ಕಾವಲು ಬುರುಜು ಗುಪ್ತಮಾರ್ಗ ಅನೇಕ ಸಿಹಿನೀರಿನ ಬಾವಿಗಳನ್ನು ಒಳಗೊಂಡಿದೆ.


ವಿಜಯನಗರದ ಅರಸರು ಹಾಗೂ ಷಾಹಿ ದೊರೆಗಳ ಮಧ್ಯ ನಡೆದ ೧೫೬೫ರ ಯುದ್ಧದಲ್ಲಿ ಈ ಕೋಟೆಯು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ.


ಶ್ರೀ ಖಾಸ್ಗತೇಶ್ವರ ಮಠ :


ಪ್ರತಿ ವರ್ಷವು ಕಡ್ಲಿಗಾರ ಹುಣ್ಣಿಮೆಯ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಜಾತ್ರೆ ನಡೆಯುತ್ತದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಜನರು ತೇರನ್ನು ಎಳೆದು ಶ್ರೀ ಖಾಸ್ಗತೇಶ್ವರ ಕೃಪೆಗೆ ಪಾತ್ರರಾಗುತ್ತಾರೆ.


ಈ ದೇವಾಲಯದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯ ನಡೆಯುತ್ತದೆ. ಮತ್ತು ಮಠದಲ್ಲಿ ಒಂದು ಸಂಗೀತ ಶಾಲೆಯಿದೆ. ಈ ಮಠವು ಅನ್ನದಾಸೋಹದೊಂದಿಗೆ ಜ್ಞಾನದಾಸೋಹಕ್ಕು ಹೆಸರುವಾಸಿಯಾಗಿದೆ.


ತಾಳಿಕೋಟೆ ದ್ಯಾಮವ್ವ :


ಆರಾರಾಯರು ಬಡವರಾದರು ಹೃದಯದಿಂದ ಶ್ರೀಮಂತರಾಗಿದ್ದರು. ಇವರಿಗೆ ದ್ಯಾಮವ್ವ ಎಂಬ ಮಗಳಿದ್ದಳು ಅವಳನ್ನು ಚಿಕ್ಕವಯಸ್ಸಿನಲ್ಲಿಯೇ ತಾಳಿಕೋಟೆ ಗ್ರಾಮಕ್ಕೆ ಮದುವೆಮಾಡಿ ಕೊಡಲಾಯಿತು.


ದ್ಯಾಮವ್ವ ಗಂಡನ ಮನೆಗೆ ಹೋದ ಹನ್ನೆರಡು ವರ್ಷಗಳ ನಂತರ ಆರಾ
ರಾಮನೆಗೆ ಮತ್ತೊಬ್ಬ ಮಗ ಹುಟ್ಟಿದ ಆತನ ಹೆಸರು ಸುಲಿಯಲ್ಲ.ಸುಲಿಯಲ್ಲ ಹಟವಾದಿ ಮತ್ತು ಕಿಡಿಗೇಡಿಯಾಗಿದ್ದ. ಸುಲಿಯಲ್ಲ ದಾರಿಯಲ್ಲಿ ನೀರಿಗೆ ಹೋಗುವ ನಾರಿಯರ ಕೊಡಕ್ಕೆ ಕಲ್ಲಿನಿಂದ ಹೊಡೆದು ಕೊಡ ಒಡೆದಾಗ ಆ ನಾರಿಯರು ಅಕ್ಕತಂಗಿಯರಿಲ್ಲದವ ಎಷ್ಟೊಂದು ಮೆರೆಯುತ್ತಾನೆ ಎಂದು ಬಯ್ಯುತ್ತಿದ್ದರು. ಇದರಿಂದ ನೊಂದ ಸುಲಿಯಲ್ಲ ತನಗೆ ಅಕ್ಕ ಇರುವುದು ತಾಯಿಯಿಂದ ತಿಳಿಯುತ್ತಾನೆ. ಅಕ್ಕನನ್ನು ನೋಡಬೇಕೆಂಬ ಆಸೆಯಿಂದ ತಾಳಿಕೋಟೆಗೆ ಹೋಗಲು ನಿರ್ಧರಿಸುತ್ತಾನೆ.


ತಾಳಿಕೋಟೆಗೆ ಬರುವಾಗ ಕೆಲವು ಅಪಶಕುನಗಳು ಕಂಡುಬಂದರೂ ಅಕ್ಕನನ್ನು ನೋಡಬೇಕೆಂಬ ಆತುರದಿಂದ ತಾಳಿಕೋಟೆಗೆ ಬರುತ್ತಾನೆ. ಬರುವಾಗ ಸೀರೆ, ಹೂವು, ಅರಿಸಿಣ, ಬಳೆ ಎಲ್ಲವನ್ನು ತೆಗೆದುಕೊಂಡು ಊರು ಹುಡುಕುತ್ತಾ ಬರು
ತ್ತಾನೆ.


ತಾಳಿಕೋಟೆಗೆ ಬಂದು ಸೇದಿಬಾವಿಯ ಮೇಲೆ ಕುಳಿತು ನೀರಿಗೆ ಬರುವ ಹೆಣ್ಣುಮಕ್ಕಳಿಗೆ ತಾನು ದ್ಯಾಮವ್ವನ ತಮ್ಮ ಅವಳಿಗೆ ನಾನು ಬಂದ ವಿಷಯ ತಿಳಿಸಿರಿ, ನನ್ನನ್ನು ಕರೆಯಲು ಬರಲು ಹೇಳಿರಿ- ಎಂದು ಹೇಳುತ್ತಿದ್ದ.


ಅವರು ದ್ಯಾಮವ್ವನಿಗೆ ಈ ವಿಷಯ ತಿಳಿಸಿದಾಗ ತುಂಬಾ ಸಂತಸದಿಂದ ತಮ್ಮ
ನನ್ನು ಕರೆಯಲು ತೆರುಳುತ್ತಾಳೆ. ತಮ್ಮನನ್ನು ಕಂಡು ಸಂತೋಷಗೊಂಡು ಆತ
ನನ್ನು ಮನೆಗೆ ಕರೆದುಕೊಂಡು ಬರುತ್ತಾಳೆ.


ಈ ಸಂದರ್ಭದಲ್ಲಿ ತಾಳಿಕೋಟೆಯ ಕೋಟೆಯನ್ನು ಕಟ್ಟುತ್ತಿರುತ್ತಾರೆ. ಆದರೆ ಆ ಕೋಟೆಗ್ವಾಡಿ ನಿಲ್ಲುತ್ತಿರಲಿಲ್ಲ. ಅದಕ್ಕೆ ಕಾರಣ ತಿಳಿದಾಗ ಪೂರ್ವ ದಿಕ್ಕಿನಿಂದ ಅಮ
ವಾಸ್ಯೆ ದಿನದಂದು ಬಂದ ವ್ಯಕ್ತಿಯನ್ನು ಬಲಿಕೊಡಬೇಕು ಎಂದು ಡಂಗೂರ ಸಾರ
ಲಾಯಿತು.


ದ್ಯಾಮವ್ವನ ನಾದನಿ ಅಮವಾಸ್ಯೆ ದಿನ ಪೂರ್ವದಿಕ್ಕಿನಿಂದ ಬಂದ ಸುಲಿಯಲ್ಲನ ವಿಚಾರವನ್ನು ಹಣದಾಸೆಯಿಂದ ಊರ ಜನರಿಗೆ ಹೇಳುತ್ತಾಳೆ.


ಸುಲಿಯಲ್ಲನನ್ನು ಕೋಟೆಯಲ್ಲಿ ಹಾಕಿ ಕೋಟೆಕಟ್ಟಲು ನಿರ್ಧರಿಸಿದಾಗ ದ್ಯಾಮವ್ವ ತಮ್ಮನನ್ನು ಕಳೆದುಕೊಳ್ಳಲು ಇಷ್ಟಪಡದೆ ಮೊದಲು ತಾನು ಕೋಟೆಯೊಳಗೆ ಹೋಗುವದಾಗಿ ನಿರ್ಧರಿಸಿದಳು. ಮುಂದೆ ದ್ಯಾಮವ್ವ ಹಿಂದೆ ಸುಲಿಯಲ್ಲ ಹೋದರು ಮೂರು ವರ್ಷಕ್ಕೆ ಬೇಕಾದ ಕಾಳು ಕಡಿಯನ್ನು ಮತ್ತು ಬೀಸುಕಲ್ಲನ್ನು ಕೋಟೆ
ಯೊಳಗಡೆ ಇಟ್ಟು ಕೋಟೆಯನ್ನು ಕಟ್ಟಲಾಯಿತು ಎಂಬ ದಂತ ಕಥೆಗಳು ಇವೆ.
         ದ್ಯಾಮವ್ವ ಅಲ್ಲಿಯೇ ನಸುಕಿನಲ್ಲಿ ಎದ್ದು ಬೀಸುಕಲ್ಲನ್ನು ಬಿಸುತ್ತಿದ್ದಳು. ಇದನ್ನು ಕೇಳಿದ ಊರಿನ ಅತ್ತಿಯರು ತಮ್ಮ ತಮ್ಮ ಸೊಸೆಯರಿಗೆ ಬೈದು ಎಬ್ಬಿಸುತ್ತಿದ್ದರು. ಇದರಿಂದ ಬೆಸರಗೊಂಡ ಸೊಸೆಯಂದಿರು ದ್ಯಾಮವ್ವನಿಗೆ ‘ಏನ್ ಕಾಟ ಕೊಡ್ತಾ
ಳೀಕಿ’ ಎಂದು ಬೈಯುತ್ತಿದ್ದರಂತೆ. ಅಂದಿನಿಂದ ದ್ಯಾಮವ್ವ ಬೀಸುವದನ್ನು ಬಿಟ್ಟ
ಳಂತೆ. 
     ಬಡವರು  ಯಾರಾದರು  ಬಂದು ತಮಗೆ ಆಭರಣ ಬೇಕಾಗಿವೆ ಎಂದು ದ್ಯಾಮವ್ವನಿಗೆ ಕೇಳಿಕೊಂಡಾಗ ಆ ಕೋಟೆ ಗೋಡೆಯಿಂದ ಆಭರಣಗಳನ್ನು ಹೊರಗಿಡುತ್ತಿದ್ದಂತೆ. ಆಭರಣ ಒಯ್ದವರು ಮರಳಿ ತಂದು ಕೋಡುತ್ತಿದ್ದರಂತೆ. ಒಮ್ಮೆ ಒಬ್ಬ ಮಹಿಳೆ ಒಯ್ದು ಆಭರಣ ಕೊಡದಿದ್ದ ಕಾರಣ ಅವರ ಮನೆತನ ಸರ್ವನಾಶವಾಯಿತಂತೆ. 
        ತಾಳಿಕೋಟೆ ಅಗಸಿಯಲ್ಲಿ ದ್ಯಾಮವ್ವನ ಹಾಗೂ ಸುಲಿಯಲ್ಲನ ಗುರುತಿನ ಕಲ್ಲು ಕಾಣಿಸುತ್ತದೆ. ದ್ಯಾಮವ್ವ ಬೀಸುವಕಲ್ಲು ೪ ಪೂಟು ಅಗಲ ೧೬ ಇಂಚು ಎತ್ತರವನ್ನು ಹೊಂದಿದೆ. ಈ ಬೀಸುವಕಲ್ಲು ಈಗಲೂ ಕಾಣಬಹುದಾಗಿದೆ. 

ಅನಿತಾ ಬಿರಾದಾರ ಬಿ.ಎ. ೨

No comments:

Post a Comment