Saturday, August 7, 2010

Thursday, August 5, 2010

ಜ್ಞಾನ ಪೀಠ ಪುರಸ್ಕೃತ ಕನ್ನಡ ಸಾಹಿತಿಗಳು

ಕುವೆಂಪು:






ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳ್ಳಿ ವೆಂಕಟಪ್ಪನ ಮಗ ಪುಟ್ಟಪ್ಪನವರು ಮಲೆನಾಡ ಮಡಿಲಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯವರು. ೨೯ನೇ ಡಿಸೆಂಬರ ೧೯೦೪ ರಂದು ಜನಿಸಿದರು. ತಮ್ಮ ಫ್ರೌಡಶಾಲಾ ಮತ್ತು ಉನ್ನತ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಮೈಸೂರ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಿವೃತ್ತರಾದರು.೯ನೇ ನವೆಂಬರ ೧೯೯೪ ರಲ್ಲಿ ನಿಧನರಾದರು.


‘ಶ್ರೀ ರಾಮಾಯಣ ದರ್ಶನಂ’ ಈ ಯುಗದ ಮಹಾಕಾವ್ಯ. ಇದಕ್ಕೆ ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೮ ರಲ್ಲಿ ಭಾರತಿಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ.೧೯೫೭ ರಲ್ಲಿ ಧಾರವಾಡದಲ್ಲಿ ನಡೆದ ೨೯ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬೆಂಗಳೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್, ೧೯೯೨ರಲ್ಲಿ ಕರ್ನಾಟಕ ರತ್ನ ಮುಂತಾದ ಗೌರವಗಳು ಅವರಿಗೆ ಸಂದಿವೆ.


ಆಧುನಿಕ ಕನ್ನಡ ಸಾಹಿತ್ಯ ಹಿರಿಯ ಕವಿಗಳಲ್ಲಿ ಅಗ್ರಗಣ್ಯರಾದ ಕುವೆಂಪು ಅವರು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯು ಕೃತಿ ರಚಿಸಿದ್ದಾರೆ. ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ ಮುಂತಾದವು ಕವನ ಸಂಕಲನಗಳು. ‘ಸನ್ಯಾಸಿ ಮತ್ತು ಇತರ ಕಥೆಗಳು’ ಎಂಬ ಕಥಾ ಸಂಕಲನಗಳು, ಯಮನ ಸೋಲು, ಬೆರಳ್ಗೆ ಕೊರಳ್ ಮುಂತಾದ ನಾಟಕಗಳು. ‘ನೆನಪಿನ


ದೋಣಿಯಲ್ಲಿ’ ಎಂಬ ಆತ್ಮಕಥನ. ಅನುವಾದ ಮಹಾಕಾವ್ಯ ಮುಂತಾದ ಸುಮಾರು ೭೦ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ.

ಡಾ.ದ. ರಾ. ಬೇಂದ್ರೆ:






ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿದ್ದ ‘ದತ್ತಾತ್ರೇಯ ರಾಮಚಂದ್ರ ಬೇಂದ್ರೆ’ ಅವರು ಮನ್ಮಥನಾಮ ಸಂವತ್ಸರದ ಮಾಘವದ್ಯ ಪ್ರತಿಪದೆಯಂದು ೩೦-೦೧-೧೮೮೬ರಲ್ಲಿ ಧಾರವಾಡದ ಪೋತನಿಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು. ಅವರ ತಂದೆ ರಾಮಚಂದ್ರ ಪಂತರು, ತಾಯಿ ಅಂಬೂತಾಯಿ.


ಧಾರವಾಡದಲ್ಲಿ ಶಿಕ್ಷಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿ ಸೋಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾದರು. ನಿವೃತ್ತರಾದ ನಂತರ ಧಾರವಾಡದ ಆಕಾಶವಾಣಿಯಲ್ಲಿ ಕೆಲಸ ಮಾಡಿದರು.


ಬೇಂದ್ರೆಯವರು ಜ್ಞಾನಪೀಠ ಪ್ರಶಸ್ತಿಯನ್ನು ‘ನಾಕುತಂತಿ’ ಕವನ ಸಂಕಲನಕ್ಕೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ‘ಅರಳು ಮರಳು’ ಕವನ ಸಂಕಲನಕ್ಕೆ ಪಡೆದಿದ್ದಾರೆ. ಇದಲ್ಲದೆ ಶಿವಮೊಗ್ಗಾದಲ್ಲಿ ೧೯೪೩ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮೈಸೂರು ವಿಶ್ವವಿಧ್ಯಾನಿಲಯ ಹಾಗೂ ಕಾಶಿ ವಿದ್ಯಾಪೀಠಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ೨೬-೧೦೧೯೮೧ರಲ್ಲಿ ನಿಧನರಾದರು.


ಕನ್ನಡ ಕಾವ್ಯ ಪರಂಪರೆಯನ್ನು ಜೀವಂತವಾಗಿ ಮುಂದುವರೆಸುವದರಲ್ಲಿ ಅಂಬಿಕಾತನಯದತ್ತರ ಪಾತ್ರ ಹಿರಿದಾದುದು. ಅವರ ಮೊದಲನೆ ಕವನ ಸಂಕಲನವಾದ ‘ಗರಿ’ಯಲ್ಲಿ ಹೇಳಿದ ಮಾತುಗಳನ್ನು ಗಮನಿಸಿದರೆ ಕನ್ನಡದ ಅಶರೀರವಾಣಿಯು ಸಾವಿರ ಬಾಯಿಗಳಿಂದ ತನ್ನ ಕನಸನ್ನು ಕನ್ನಡಿಸುತ್ತದೆ. ಆ ಸಾವಿರ ಬಾಯಿಗಳಲ್ಲಿ ನನ್ನದೊಂದು. ಅದೇ ನನ್ನ ಧನ್ಯತೆ ಎಂದು ಸಹೃದಯರಿಗೆ ನಿವೇದಿಸಿಕೊಳ್ಳುವ ಮಾತು ಬೇಂದ್ರೆ ಅವರ ಪ್ರತಿಭೆಯ ದ್ಯೋತಕವಾಗಿದೆ.

ಶಿವರಾಮ ಕಾರಂತ :






“ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಬರೆಯದ ವಿಷಯವಿಲ್ಲ”, ‘ಕಾರಂತರು ಒಬ್ಬ ವ್ಯಕ್ತಿಯಲ್ಲ ಅವರೊಂದು ಸಂಸ್ಥೆ; ‘ಶಿವರಾಮ ಕಾರಂತರು ನಡೆದಾಡುವ ವಿಶ್ವಕೋಶ’ ಮುಂತಾದ ಮಾತುಗಳು ಕಾರಂತರನ್ನು ಕುರಿತು ಬರವಣಿಗೆಯಲ್ಲಿ ಈಗಾಗಲೇ ಕ್ಲೀಶೆಗಳಾಗಿ ಹೋಗಿವೆ. ಕಾರಂತರ ವೈಶಿಷ್ಟ್ಯವೆಂದರೆ ತಮ್ಮ ಬಗ್ಗೆ ಆಗಿಂದಾಗೆ ಬರುವ ಹೊಗಳಿಕೆ ತೆಗಳಿಕೆಗಳಿಗೆ ಮನಸ್ಸು ಕೊಡದೆ ತಮ್ಮ ಕೆಲಸವನ್ನು ಶ್ರದ್ಧೆಯಿಂದ, ಏಕಾಗ್ರತೆಯಿಂದ ಮಾಡಿಕೊಂಡು ಹೋಗುವದು.


ಕನ್ನಡದ ಪ್ರಸಿದ್ದ ಕಾದಂಬರಿಕಾರರಾದ ಡಾ. ಶಿವರಾಮ ಕಾರಂತರ ದಿನಾಂಕ ೧೦-೧೦-೧೯೦೨ರಂದು ದಕ್ಷಿಣ ಕನ್ನಡ ಜಿಲ್ಲೆಯ ‘ಕೋಟ’ದಲ್ಲಿ ಜನಿಸಿದರು. ಸಾಹಿತ್ಯ, ಕಲೆ, ವಿಜ್ಞಾನ ಮತ್ತು ಯಕ್ಷಗಾನ ಹೀಗೆ ಹಲವಾರು ಪ್ರಕಾರಗಳಲ್ಲಿ ಅವರು ಕೃತಿ ರಚನೆ ಮಾಡಿದ್ದಾರೆ.ಮರಳಿ ಮಣ್ಣಿಗೆ, ಅಳಿದ ಮೇಲೆ, ಜೋಮನ ದುಡಿ, ಮೂಕಜ್ಜಿಯ ಕನಸುಗಳು ಅವರ ಜನಪ್ರಿಯ ಕಾದಂಬರಿಗಳು. ಕಿಸಾಗೋತಮಿ, ಮುಕ್ತದ್ವಾರ, ಬುದ್ಧೋದಯ ಅವರ ಗೀತನಾಟಕಗಳು. ಯಕ್ಷಗಾನ, ಬಯಲಾಟ, ಕರ್ನಾಟಕದಲ್ಲಿ ಚಿತ್ರಕಲೆ ಮತ್ತು ಭಾರತೀಯ ಶಿಲ್ಪಯುತರು ಕಲಾ ಜಗತ್ತಿಗೆ ನೀಡಿದ ಅಪೂರ್ವ ಗ್ರಂಥಗಳು.


‘ಅಬೂವಿನಿಂದ ಬರಾಮಕ್ಕೆ’, ‘ಪಾತಳಕ್ಕೆ ಪ್ರಯಾಣ’, ‘ಪಶ್ಚಿಮ ಘಟ್ಟಗಳು’, ಇವರ ಪ್ರವಾಸಕಥಾನಗಳಾಗಿದ್ದು, “ಹುಚ್ಚು ಮನಸ್ಸಿನ ಹತ್ತು ಮುಖಗಳು” ಮತ್ತು ಸ್ಮೃತಿ ಪಟಲದಿಂದ ಆತ್ಮ ಕಥನಗಳಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಸ್ಪೀಡಿಶ್ ಅಕಾಡೆಮಿ, ಪಾರಿತೋಷಕ, ಭಾರತೀಯ ಜ್ಞಾನಪೀಠ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದುಕೊಂಡ ಕಾರಂತರು ‘ಚಲಿಸುವ ವಿಶ್ವಕೋಶ’, ‘ಕಡಲ ತೀರದ ಭಾರ್ಗವ’ರೆಂದೂ ಹೆಸರುವಾಸಿಯಾಗಿದ್ದಾರೆ.


ಮಾಸ್ತಿ ವೆಂಕಟೇಶ ಅಯ್ಯಂಗಾರ :




ಕನ್ನಡ ಸಾಹಿತ್ಯ ಪರಂಪರೆಯ ನಿರ್ಮಾಪಕರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಒಬ್ಬರು. ಅವರು ೬-೦೬-೧೮೯೧ರಲ್ಲಿ ಕೋಲಾರ ಜಿಲ್ಲೆಯ ‘ಮಾಸ್ತಿ’ ಗ್ರಾಮದಲ್ಲಿ ಹುಟ್ಟಿದರು.


ಮಾಸ್ತಿಯವರ ಕಥಾಸಾಹಿತ್ಯದಲ್ಲಿ ‘ಚೆನ್ನಬಸವನಾಯಕ’ ಮತ್ತು ‘ಚಿಕವೀರ ರಾಜೇಂದ್ರ’ ಕಾದಂಬರಿಗಳು ಶಿಖರ ಪ್ರಾಯಗಳಾಗಿವೆ. ಇವು ಕ್ರಮವಾಗಿ ೧೯೪೯ ಮತ್ತು ೧೯೫೬ರಲ್ಲಿ ಪ್ರಕಟವಾಗಿವೆ. ಇವೆರಡೂ ಐತಿಹಾಸಿಕ ಕಾದಂಬರಿಗಳು. ಮಾಸ್ತಿ ವೆಂಕಟೇಶ ಅಯ್ಯಂಗಾರ ಸಾಕಷ್ಟು ಕಾವ್ಯಗಳನ್ನು ಬರೆದಿದ್ದಾರೆ. ಅವರ ಕಾವ್ಯಗಳಲ್ಲಿ ‘ಶ್ರೀನಿವಾಸ ದರ್ಶನ’, ‘ಪ್ರಕೃತಿ ಸೌಂದರ್ಯ’, ‘ಕನ್ನಡ ಪ್ರೇಮ’, ನಾಡುನುಡಿ ವ್ಯಕ್ತಿಗಳಿಗೆ ಸಂಬಂಧಿಸಿದ ರಚನೆಗಳು ಭಾವಗೀತೆಗಳಲ್ಲಿ ಎದ್ದು ಕಾಣು
ತ್ತವೆ. ಇವರ ಕಾವ್ಯ ಸರಳವಾದುದು, ಸುಂದರವಾದುದು.


ಮಾಸ್ತಿಯವರ ಸಾಹಿತ್ಯದಂತೆ ಅವರ ಬದುಕು ದೊಡ್ಡದು. ಅವರ ಬದುಕು ಒಂದು ಮಹಾಕೃತಿ. ಅವರ ಬದುಕಿಗೂ, ಬರಹಕ್ಕೂ ಅಂತರ ಕಡಿಮೆ. ಬದುಕಿದಂತೆ ಬರೆಯಬೇಕು ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ. ಕನ್ನಡಕ್ಕೆ ಅಖಿಲ ಭಾರತ ಖ್ಯಾತಿ ದೊರಕಿಸಿಕೊಟ್ಟ ಕೀರ್ತಿ ಅವರದು.


ಡಾ.ವಿನಾಯಕ ಕೃಷ್ಣ ಗೋಕಾಕ:


ಕವಿ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಶಿಕ್ಷಣ ತಜ್ಞ ವಿನಾಯಕ ಕೃಷ್ಣ ಗೋಕಾಕರು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಕೃಷ್ಣರಾಯರು ಇವರ ತಂದೆ. ಶಾರದದೇವಿ ಇವರ ಪತ್ನಿ. ಸವಣೂರು ಧಾರವಾಡದಲ್ಲಿ ವಿದ್ಯಾಭ್ಯಾಸ ೧೯೯೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ ಹಾಗೂ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದರು.
ಗೋಕಾಕರು ನವ್ಯಕಾವ್ಯದ ಅಧ್ವರ್ಯಗಳಲ್ಲೊಬ್ಬರು. ಪರಂಪರೆಯಲ್ಲಿ ಉತ್ತಮವಾದದನ್ನು ಉಳಿಸಿಕೊಂಡು ನವ್ಯತೆಯನ್ನು ಪ್ರತಿಪಾದಿಸಿ ನವ್ಯತೆಯನ್ನು ಸಾಧಿಸಿದರು. ಇವರ “ತ್ರಿವಿಕ್ರಮರ ಆಕಾಶಗಂಗೆ” ಬಾಲ್ಯ ಯೌವನ ದೈವಭಕ್ತಿ ಸೌಂದರ್ಯಗಳಿಂದ ವಿವರಿಸುವ ಕಾವ್ಯ ಇಂದಲ್ಲ ನಾಳೆ ಕೃತಿ ಹೊರದೇಶಗಳ ಸಂಚಾರದಿಂದ ಅಲ್ಲಿನ ಸಂಸ್ಕ್ರತಿಯನ್ನು ಬಣ್ಣಿಸುತ್ತದೆ. ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು ಸಾಹಿತ್ಯದಲ್ಲಿ ಪ್ರಗತಿ ನವ್ಯತೆ ಹಾಗು ಕಾವ್ಯ ಜೀವನ


ವಿಮರ್ಶಾಸಂಕಲನಗಳು ಗೋಕಾಕರು ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲೀಷಿ
ನಲ್ಲೂ ಸಾಹಿತ್ಯ ರಚನೆ ಮಾಡಿದ್ದಾರೆ. ದಿ ಸಾಂಗ್ ಆಫ್ (ಹೈ)ಲೈಫ್,ಇನ್ ಲೈಫ್ ಚೆಂಪಲ್ ಇವರ ಇಗ್ಲೀಷ್ ಕವನಗಳು. ಇದಲ್ಲದೆ ಭಾರತ ಸಂಸ್ಕ್ರತಿ, ಸೌಂದರ್ಯ ಮಿಮಾಂಸೆ ಕನ್ನಡಸಾಹಿತ್ಯಚರಿತ್ರೆಗಳನ್ನು ಕುರಿತು ಸರ್ವಜ್ಞ ಬೇಂದ್ರೆ ಮುಂತಾದ ಕನ್ನಡ ಕವಿಗಳ ಬಗೆಗೂ ಇಗ್ಲೀಷ್‌ನಲ್ಲಿ ಬರೆದಿದ್ದಾರೆ.


ಗೋಕಾಕರ ಮಹಾಸೇವೆಗೆ ಕನ್ನಡನಾಡು ವಿವಿಧ ಬಗೆಯಲ್ಲಿ ಗೌರವಿಸಿದೆ. ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
ರಾಗಿದ್ದರು. ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಅವರನ್ನು ಗೌರವಿಸಿದೆ.’೧೯೬೧’ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದೆ. “ಯೂನಿವರ್ಸಿಟಿಆಫ್ಪೆಸಿಪಿಕ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿವೆ. ‘ವಿನಾಯಕ ವಾಙ್ಮಯ ಅಭಿನಂದನ ಗ್ರಂಥವನ್ನು ಗೌರವ ಪೂರ್ವಕವಾಗಿ ಅರ್ಪಿಸಲಾಗಿದೆ. ಅವರ ಮಹಾಕಾವ್ಯ ಭಾರತ ಸಿಂಧು ರಶ್ಮಿಗೆ ೧೯೯೦ರ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ವಿನಾಯಕ ಕೃಷ್ಣ ಗೋಕಾಕ ಅವರು ಮುಂಬೈಯಲ್ಲಿ ೨೮-೪-೧೯೯೨ರಂದು ನಿಧನರಾದರು.






ಯು.ಆರ್. ಅನಂತಮೂರ್ತಿ :




ಪ್ರಸಿದ್ಧ ಕಾದಂಬರಿಕಾರ, ಕಥೆಗಾರ, ವಿಮರ್ಶಕರಾದ ಯು. ಆರ್. ಅನಂತಮೂರ್ತಿ ತೀರ್ಥಹಳ್ಳಿ ತಾಲೂಕು ಮೇಳಗೆ ಹಳ್ಳಿಯಲ್ಲಿ ೨೧-೧೨-೧೯೩೨ ರಂದು ಜನಿಸಿದರು. ರಾಜಗೋಪಾಲಚಾರ್ಯ ಇವರ ತಂದೆ. ಸತ್ಯಭಾಯಿ ತಾಯಿ. ಕೋಣಂದೂರು, ಮೇಳಗೆ, ತೀರ್ಥಹಳ್ಳಿಯಲ್ಲಿ ಪ್ರಾರಂಭದ ವಿಧ್ಯಾಭಾಸ, ಮೈಸೂರಿನಲ್ಲಿ ಬಿ.ಎ.ಆನರ್ಸ ಹಾಗೂ ಇಂಗ್ಲೀಷ ಎಂ. ಎ. ಅನಂತರ ಬರ್ಮಿಂಗ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಕೇರಳದ ಕೊಟ್ಟಾಯಂನ ಮಹಾತ್ಮಗಾಂಧಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ, ದೆಹಲಿಯ ಜವರಲಾಲ ನೆಹರೂ ವಿಶ್ವವಿದ್ಯಾಲಯ ಮೂದಲಾದ ಕಡೆಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿದ್ದರು. ಅನಂತಮೂರ್ತಿಯವರು ನ್ಯಾಷನಲ್ ಬುಕ್ ಟ್ರಸ್ಟ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.


೧೯೬೩ರಲ್ಲಿ ಅನಂತಮೂರ್ತಿ ‘ಭಾವಲಿ’ ಕವನ ಸಂಕಲನವನ್ನು ಪ್ರಕಟಿಸಿದರು. ಅನಂತರ ‘೧೫ ಪದ್ಯಗಳು’, ‘ಅಜ್ಜನ ಹೆಗಲಸುತ್ತುಗಳು’,’ಮಿಥುನ’, ಸಂಕಲನಗಳು ಪ್ರಕಟಗೊಂಡವು. ಅನಂತಮೂರ್ತಿಯವರು ಬರೆದಿರುವ ಏಕೈಕ ನಾಟಕ ‘ಆಹಾವನೆ’ ಇದುವರೆಗೆ ಅವರ ಏಳು ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿ ತಮ್ಮ ವಿಮರ್ಶಾ ಹಾಗೂ ವೈಚಾರಿಕ ಬರಹಗಳ ಮೂಲಕ ಕನ್ನಡ ಭಾಷೆಯನ್ನು ಸಮರ್ಥವಾಗಿ ಹದಗೊಳಿಸಿದ್ದಾರೆ. ನಾನು ಹಿಂದು ಬ್ರಾಹ್ಮಣ, ಮೀಸಲಾತಿ ಮುಂತಾದ ವಿಷಯಗಳ ಕುರಿತು ಇವರ ಅಭಿಪ್ರಾಯಗಳಾಗಿ ಪ್ರಾಥಮಿಕ ಶಿಕ್ಷಣ, ಕನ್ನಡ ಭಾಷೆಯ ಅಗತ್ಯ ಕುರಿತು ಇವರ ಭಾಷಣಗಳು ಇಂದಿಗೂ ಅಲ್ಲಲ್ಲಿ ಚರ್ಚಾ ವಿಷಯಗಳಾಗಿವೆ. ಇವರ ಕೆಲವು ಮಹತ್ವದ ಕೃತಿಗಳೆಂದರೆ ‘ಪೂರ್ವಾಪರ’, ‘ಆಕಾಶ ಮತ್ತು ಬೆಕ್ಕು’, ‘ಕ್ಲಿಪ್ ಜಾಯಿಂಟ್’, ‘ಎರಡು ದಶಕದ ಕತೆಗಳು’,‘ ದಿವ್ಯ’,‘ ಸಮಕ್ಷಮ’, ‘ಸನ್ನಿವೇಶ’, ‘ಪ್ರಜ್ಞೆ ಮತ್ತು ಪರಿಸರ’, ‘ಘಟ ಶ್ರಾದ್ಧ’, ಒಂದು ಕಾಲದ ಅಗ್ರಗಣ್ಯ ಲೇಖಕರ ಸಾಲಿನಲ್ಲಿ ನಿಲ್ಲುವ ಬಹುಮುಖಿ ವ್ಯಕ್ತಿತ್ವದ ಯು.ಆರ್.ಅನಂತಮೂರ್ತಿ ಕನ್ನಡ ಸಾಹಿತ್ಯದ ಮುಖ್ಯ ಲೇಖಕರು.


ಡಾ.ಗೀರಿಶ ಕಾರ್ನಾಡ್ :




ಗಿರೀಶ ಕಾರ್ನಾಡ್ ಮಹಾರಾಷ್ಟ್ರದಲ್ಲಿ ೧೯ ಮೇ ೧೯೩೮ರಲ್ಲಿ ಜನಿಸಿದರು. ತಂದೆ ಡಾ .ರಘುನಾಥ ಕಾರ್ನಾಡ್. ತಾಯಿ ಕೃಷ್ಣಾಬಾಯಿ. ಕಾರ್ನಾಡರು ಧಾರವಾಡ ಮತ್ತು ಮುಂಬೈಗಳಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಆಕ್ಸಫರ್ಡ್ ವಿಶ್ವವಿದ್ಯಾ


ಲಯದಿಂದ ಎಂ ಎ ಪದವಿ ಪಡೆದರು. ಕಾರ್ನಾಡರ ಮೊದಲ ಕೃತಿ ಯಯಾತಿ ನಾಟಕ- ೧೯೬೧ ಇದುವರೆಗೆ ಕಾರ್ನಾಡರು ೯ ನಾಟಕಗಳನ್ನು ಬರೆದಿದ್ದಾರೆ.ಕಾರ್ನಾಡರು ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿರುವರು. ಕನ್ನಡದ ಪ್ರಸಿದ್ಧನಾಟಕಕಾರ. ನಟ, ನಿರ್ದೇಶಕ, ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟ್ ಕೇಂದ್ರ ನಾಟಕ ಶಾಲೆಗಳ ನಿರ್ದೇಶಕರಾಗಿದ್ದರು. ೧೯೯೮ರ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಕಾರ್ನಾಡರು ಮೊದಲಿಗರು.


ಚಲನ ಚಿತ್ರ ಕ್ಷೇತ್ರಕ್ಕೆ ಕಾರ್ನಾಡರ ಕೊಡುಗೆ ಅಪಾರವಾದದ್ದು. ೬೦ ರ ದಶಕದಲ್ಲಿ ಅವರು ಅಭಿನಯಿಸಿದ ಸಂಸ್ಕಾರ ರಾಷ್ಟ್ರಪ್ರಶಸ್ತಿಯನ್ನು ಗಳಿಸಿದ್ದಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿತು. ಕನ್ನಡ ಚಿತ್ರರಂಗದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ರಂಗದಲ್ಲಿ ಮನ್ನಣೆ ಗಳಿಸಿತು. ಬಿ.ವಿ.ಕಾರಂತರೊಡಗೂಡಿ ಅವರು ನಿರ್ದೇಶಿಸಿದ ಚಿತ್ರಗಳು- ವಂಶ ವೃಕ್ಷ, ತಬ್ಬಲಿ ನಿನಾದೆ ಮಗನೆ. ಕಾರ್ನಾಡರು ನಿರ್ದೇಶಿಸಿದ ಒಂದಾನೊಂದು ಕಾಲದಲ್ಲಿ, ಕಾಡು. ಹಿಂದಿಯಲ್ಲಿ ಉತ್ಸವ್, ಚೆಲ್ವಿ, ಇತ್ತಿಚೆಗೆ ಕಾನೂರು ಹೆಗ್ಗಡತಿ, ಚಿತ್ರರಂಗದಲ್ಲಿ ಅಪಾರ ಯಶಸ್ಸು, ಹುಮ್ಮಸ್ಸನ್ನು ತಂದು ಕೊಟ್ಟಿವೆ. ಕಾರ್ನಾಡರ ಸಾಧನೆಗಳನ್ನು ಗಮನಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಗಿರೀಶ ಕಾರ್ನಾಡ್‌ರು ಸಿನಿಮಾ ಮತ್ತು ದೂರದರ್ಶನಗಳಲ್ಲಿ ಸ್ಟಾರ್ ವ್ಯಾಲ್ಯೂ ಇರುವ ಬುದ್ದಿಜೀವಿ. ಭಾರತೀಯ ಪ್ರಾತಿನಿಧಿಕ ಪ್ರತಿಭಾವಂತರಾಗಿ ವಿದೇಶಗಳಲ್ಲಿ ನಾಟಕ, ಭಾಷಣ, ಸಿನಿಮಾಗಳ ಮೂಲಕ ಸದಾ ಕ್ರೀಯಾಶೀಲವಾಗಿರುವ ವ್ಯಕ್ತಿತ್ವ ಕಾರ್ನಾಡರದು.




ಶಕುಂತಲಾ ಹಿರೇಮಠ ಬಿ.ಎ. ೧

ಚಬನೂರಿನ ಅಮೋಘ ಸಿದ್ಧ - ಹಿನ್ನೆಲೆ ಮತ್ತು ಆಚರಣೆ





ವಿಜಾಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಚಬನೂರಿನಲ್ಲಿ ನೆಲೆಸಿರುವ ಆರಾಧ್ಯದೈವ ಅಮೋಘಸಿದ್ಧೇಶ್ವರ ಪರಮೇಶ್ವರನ ಮಗ, ಪಾರ್ವತಿಯ ಬೆವರಿನಿಂದ ಮಣ್ಣಲ್ಲಿ ಜನಿಸಿದ ಮಣ್ಣಿನ ಮಗ.


ಪಾರ್ವತಿ ಜಳಕ ಮಾಡುವಾಗ ಬಾಗಿಲ ಕಾಯುತ್ತಿದ್ದ ಬಾಲಕ ಪರಮೇಶ್ವರನಿಗೆ ಒಳಗೆ ಬಿಡಲಿಲ್ಲ . ಸಿಟ್ಟಿಗೆದ್ದ ಶಿವ ರುಂಡ ಕತ್ತರಿಸಿದ. ರುಂಡ ಹಾರಿ ಮರದ ಕಂಟಿಯ ಕೆಳಗೆ ಬೀಳುತ್ತದೆ. ಆ ಕಂಟಿಗೆ ಒಡೆಯರ ಕಂಟಿ ಎಂದು ಪ್ರತೀತಿ ಇದೆ. ಪಾರ್ವತಿಯ ಬೇಡಿಕೆ ಯಂತೆ ಆ ರುಂಡಕ್ಕೆ ಜೀವ ತುಂಬುತ್ತಾನೆ. ಇಬ್ಬರೂ ಕೂಡಿ ಸಿದ್ಧ ಎಂದು ನಾಮಕರಣ ಮಾಡುತ್ತಾರೆ.


ಆ ಸಿದ್ಧನೆ ಇಲ್ಲಿ ನೆಲೆಸಿ ‘ಆಮೊಗ ಸಿದ್ಧ’ ನಾಗುತ್ತಾನೆ; ಆನೆಮೊಗ ಸಿದ್ಧ ‘ಅಮೋಘ ಸಿದ್ಧ’ನಾಗಿ ರಲೂಬಹುದು.


ಚಬನೂರಿನಲ್ಲಿ ಈ ದೇವರನ್ನು ಪ್ರತಿಷ್ಠಾಪಿಸಿ ಊರಿನ ಗೌಡರು ಅದನ್ನು ಪೂಜಿಸುತ್ತಾ ಬಂದರಂತೆ. ಆದರೆ ಯಾವುದೋ ಒಂದು ಸಂದರ್ಭದಲ್ಲಿ ಅಪಶಕುನಗಳಾಗಿ ಗೌಡರು ನಡೆಸುವ ಪೂಜೆ ನಿಲ್ಲುತ್ತದೆ. ಹಿಜೇರಿ ನಿಂಗ ಎಂಬವ್ಯಕ್ತಿ (ಹಿರಕಾರ ) ಈ ದೇವರನ್ನು ಒಡೆಯರು ಪೂಜಿಸಬೇಕು ಎಂದಾಗ ಮುಧೋಳ ತಾಲೂಕಿನ ಬಿದರಿಯಿಂದ ಒಡೆಯರನ್ನು ಕರೆತರುತ್ತಾರೆ.ಅಂದಿನಿಂದ‘ಹೇಳಿಕೆ ‘ಪ್ರಾರಂಭವಾಗಿದೆ. ಮೊದಲ ಸಲ ಡವಳರ ಮುತ್ಯಾನಿಗೆ ಮುಖವಾಡ ಕಟ್ಟಿ ಹೇಳಿಕೆ ಹೇಳಿಸಿದರಂತೆ. ಅಂದಿನಿಂದಲೇ ‘ಕಟಾಂಬಲಿ’ ಪದ್ಧತಿ ರೂಢಿಗೆ ಬಂದಿದೆ. ಮೊದಲು ಈ ಕಟಾಂಬಲಿ ನುಚ್ಚನ್ನು ಕೇವಲ ೭ ಗಡಿಗೆ ಮಾಡುತ್ತಿದ್ದರು. ಈಗ ೨೫-೩೦ ಕ್ಕೇರಿದೆ.


ಹೀಗೆ ಪೂಜೆಗೆಂದು ಬಂದವನೇ ಮಲಿಕಾರಪ್ಪ. ಇವನ ನಂತರ ಪೂಜೆಯನ್ನು ಇವನ ಮಕ್ಕಳು ಮುಂದುವರೆಸುತ್ತಾರೆ. ಮಲ್ಲಪ್ಪ , ಸಿದ್ರಾಮಪ್ಪ ಇವರ ತಲೆಮಾರಿನ ಅನಂತರ ಸಿದ್ದಪ್ಪ ಮುತ್ಯ ಶಿವುಮುತ್ಯಾ ಮತ್ತು ಪ್ರಕಾಶ ಮುತ್ಯಾ ಮುಂದುವರೆಸುತ್ತಾರೆ.


ಹೂ ತರುವ ಆಚರಣೆ :


ವಿಜಾಪುರಕ್ಕೆ ಹೋಗಿ ಅಲ್ಲಿಂದ ಹೂ ತರಬೇಕು. ಹೋಗುವಾಗ ಮಡಿ ಹುಡಿಯಿಂದ ಹೋಗಬೇಕು. ದಾರಿಯಲ್ಲಿ ಸಿಕ್ಕ ವಸ್ತುಗಳು ಹೇಳಿಕೆಯ ಮುನ್ಸೂಚನೆ ನೀಡುತ್ತವೆಯಂತೆ. ಸಾಮಾನ್ಯವಾಗಿ ಶೇಂಗಾ, ಬುತ್ತಿ,ಈರುಳ್ಳಿ, ಹಣ ಸಿಕ್ಕಿರುತ್ತವೆ. ಮೊದಲಸಾರೆ ವಿಜಾಪುರದಿಂದ ಹೂ ತಂದವರೆಂದರೆ ಕೊಂಡಗುಳಿ ನಿಂಗಪ್ಪ. ಅನಂತರ ಬಸಪ್ಪ ಮುಂದುವರಿಸಿದ್ದನು. ಹೂವಿಗೆ ಹೋಗುವಾಗ ಜಾತ್ರೆನಡೆಯುವಾಗ, ಹೇಳಿಕೆ ಹೇಳುವಾಗ ಡೊಳ್ಳಿನ ಮಜಲು ನಡೆಯಲೇಬೇಕು. ಹೂವಿಗೆ ಹೋಗುವಾಗಿನ ಚಾಜನ್ನು ಸ್ವಂತಕ್ಕೆ ಬಳಸಿಕೊಂಡ ಬಸಪ್ಪನಿಗೆ ಸ್‌ವು ಸಂಭ


ವಿಸುತ್ತದೆ. ಅದೇ ವರ್ಷ ಹೇಳಿಕೆ ಈ ರೀತಿಯಾಗುತ್ತದೆ. ‘ಕುರುಬ ಇಸಾಬ ಮುರದನಲೇ! ’ ಈಗ ಬಾಳಪ್ಪ, ಮಲ್ಲಪ್ಪ, ತಿಪ್ಪಣ್ಣ ಮುಂದುವರೆಸಿಕೊಂಡು ನಡೆದಿದ್ದಾರೆ.










ಕಟಾಂಬಲಿ :


ಈ ಜಾತ್ರೆಯಲ್ಲಿ ಕಟಾಂಬಲಿ ಮಾಡುವ ವಿಧಾನ ವಿಶಿಷ್ಟವಾದುದಾಗಿದೆ. ಸುಂಕಸಹಿತವಾದ ಜೋಳವನ್ನು ಕುಟ್ಟಿ ಜೋಳದ ಅಕ್ಕಿ ತಯಾರಿಸುತ್ತಾರೆ. ಹೊಸ ಗಡಿಗೆಗಳಲ್ಲಿ ಮಾತ್ರ ಈ ಕಟಾಂಬಲಿ ತಯಾರಿಸುತ್ತಾರೆ. ಕಾಕುಳ್ಳು ತಂದು ಅದರ ಬೆಂಕಿಯಲ್ಲಿ ನಿಧಾನವಾಗಿ ಬೇಯಿಸು ತ್ತಾರೆ. ಇಲ್ಲವಾದರೆ ಗಡಿಗೆ ಬಿಚ್ಚಿ ಕಟಾಂಬಲಿ ಚೆಲ್ಲಿಹೋಗುತ್ತದೆ.


ಹೇಳಿಕೆಯಾಗುವದಕ್ಕಿಂತ ಮುಂಚೆ ಈ ಕಟಾಂಬಲಿಯನ್ನು ಎಲ್ಲರಿಗೂ ಪ್ರಸಾದರೂಪದಲ್ಲಿ ಹಂಚುತ್ತಾರೆ. ಅಂಬಲಿಗೆ ಹದವಾದ ರೀಯಲ್ಲಿ ಕುಸುಬೆ ಎಣ್ಣೆ ಸೇರಿಸಿ ಉಂಡಿಯಂತೆ ಮಾಡಿ ಕೈಯಲ್ಲಿಯೇ ಪ್ರಸಾದವನ್ನು ನೀಡುತ್ತಾರೆ. ಪ್ರಸಾದದ ಜೊತೆಗೆ ಉಳ್ಳಾಗಡ್ಡಿ (ಈರುಳ್ಳಿ)


ಇರಲೇಬೇಕು.


ಹೇಳಿಕೆ :


ಈಗ ಹೇಳಿಕೆ ಹೇಳುತ್ತಿರುವವರು ಮುದುಕಪ್ಪ ಮುತ್ಯಾ. ಹೇಳಿಕೆ ನಡೆಯುವ ಸಮಯ ಬೆಳಗಿನ ೪.೦೦ ಗಂಟೆಗೆ. ಡೊಳ್ಳಿನ ಮಜಲಿನ ಆರ್ಭಟದಲ್ಲಿ ಅವರೊಂದಿಗೆ ಕುಣಿಯುತ್ತ ಕುಣಿಯುತ್ತ ಬೆತ್ತದಿಂದ ಏಟು ಹಾಕುತ್ತ ಅವರ ಡೊಳ್ಳಿನ ಮೇಲೆ ಹತ್ತಿ ಕೂಗಿ ಹೇಳಿಕೆಯನ್ನು ಹೇಳಲಾಗುತ್ತದೆ. ಹೇಳಿಕೆಯ ವೇಳೆ ಎಂತಹ ಗದ್ದಲವಿದ್ದರೂ ತಕ್ಷಣ ನಿಶ್ಶಬ್ದವಾಗುತ್ತಾರೆ. ಹೇಳಿಕೆ ಹೇಳುವಾಗ ಇಬ್ಬರು ಮುಖವಾಡ ಧರಿಸಿರುತ್ತಾರೆ. ಹಿರಿಮುಖ ಧರಿಸಿದವರು ಹೇಳಿಕೆ ನೀಡುತ್ತಾರೆ.


ಈ ಹೇಳಿಕೆಯನ್ನು ಮೈಲಾರ ದೇವರ ಕಾರ್ಣಿಕದಂತೆ ನಂಬಲಾಗುತ್ತದೆ. ಇಲ್ಲಿ ಮೂರು ವಿಷಯಗಳಿಗೆ ಸಂಬಂಧಿಸಿದ ಮುನ್ಸೂಚನೆ ಇರುತ್ತದೆ.


ರಾಜಕೀಯ,ಮುಂಗಾರು ಮತ್ತು ಹಿಂಗಾರು.ಒಂದೇ ನಿಮಿಷದಲ್ಲಿ ಹೇಳಿಕೆ ಮುಗಿದು ಬಿಡುತ್ತದೆ. ಇಲ್ಲಿ ೧೯೮೪ ರಿಂದ ನೀಡಿದ ಹೇಳಿಕೆಗಳನ್ನು ಸಂಗ್ರಹಿಸಿಲಾಗಿದೆ.


೨೮-೦೫-೧೯೮೪ ಎಲೆ ಎಚ್ಚರ ಬಲು ಎಚ್ಚರ


ಮುಂಗಾರಿ ಮರಿಯಲೆ


ಹಿಂಗಾರಿ ಶರಿ ಚೆಲ್ಲಾಡಿನಲೆ


೧೭-೦೫-೧೯೮೫ ಹುಶಿ ನುಡಿದವನಿ ಖುಷಿಯಿಂದ ಕೋಂಡಾಡಿನಲೆ ಎಚ್ಚರ


ಮುಂಗಾರಿ ಬಡಿ


ಹಿಂಗಾರಿ ಚೆಲ್ಲಾಡಿನಲೆ


೦೫-೦೬-೧೮೮೬ ಮನಸಿನಾಗ ಮಾಡಿದ್ದು ಕನಸಿನಾಗ ಕಂಡಿನಲೆ


ಮುಂಗಾರಿ ಮಡಿಯಲಿ


ಹಿಂಗಾರಿ ಉಡಿಯಾರ ಸೋಶಿ ಬಿತ್ತಿನಲೆ


೨೨-೦೫ ೧೯೮೮ ನನ್ನ ಮರತವಗ ಮುರದ ಮುಟಗಿ ಮಾಡಿನಲೆ


ಮುಂಗಾರಿ ಬಂಗಾರ


ಹಿಂಗಾರಿ ಹುದುಗಿನಾಗ


೦೧-೦೬-೧೯೮೯ ಕುರುಬನ ಕುರುಹು ಹುಡುಕಬ್ಯಾಡಲೆ


ಮುಂಗಾರಿ ಕತ್ತಲಾಗಿ ಹೋತಲೆ


ಹಿಂಗಾರಿ ನಕ್ಷತ್ರ ಹೊಳದಂಗ ಹೊಳಿತೈತಲೆ


೨೨-೦೫ ೧೯೯೦ ಆಡು ಕಂದನ್ನ ಕಡ್ಯಾಕ ಮಾಡಿನಲೆ ನೀವು ಬಲು ಎಚ್ಚರಲೆ


ಮುಂಗಾರಿ ಮುತ್ತಾಗಿ ಹೋಯಿತದೆ.


ತುತ್ತ ಸಂದಿ ಹುಡುಕ್ಯಾರಲೆ


೧೦-೦೬-೧೯೯೧ ಮುಂದಿನವರು ಬಹು ಎಚ್ಚರಲೆ


ಮುಂಗಾರಿ ಮುತ್ತು


ಹಿಂಗಾರಿ ಖುಷಿ ಬಂದಂಗ ಬೆಳದಿರಲೆ






೨೬-೦೫-೧೯೯೩ ಹಿಂದೆ ಮುಂದೆ ಮಾತಾಡಿದವಗ ಎಚ್ಚರಲೆ


ಮುಂಗಾರಿ ಮುಂದಾತು


ಹಿಂಗಾರಿ ಹಿಂದಿನಿಂದ ಬೆಳದಿರಲೆ


೦೭-೦೬-೧೯೯೪ ಹಾಲಿನಂತಹ ಮನುಷ್ಯನಿಗೆ ಬೆಳ್ಳಿ ಬಂಗಾರ ಕೊಟ್ಟಿನಲೆ


ಮುಂಗಾರಿ ಸಾಕಷ್ಟು ಕೊಟ್ಟನಲೆ


ಹಿಂಗಾರಿ ತೊಟ್ಟಿಲನಾಗ ಇಟ್ಟು ತೂಗಿನಲೆ


೩೧-೦೫೧೯೯೫ ನನ್ನ ಮ್ಯಾಲ ವಿಶ್ವಾಸ ಇಟ್ಟು ನಡಿರಲೆ


ಮುಂಗಾರಿ ನಿಮ್ಮ ಇಷ್ಟದಂತೆ


ಹಿಂಗಾರಿ ಬೇಕಾದಷ್ಟು ಕೊಟ್ಟಿನಲೆ


೧೯-=೦೫-೧೯೯೬ ಹುಸಿ ನುಡಿದವನಿಗೆ ಖುಷಿಯಿಂದ ಕೊಂಡಾಡನಲೆ


ಮುಂಗಾರಿ ಚೀಲತುಂಬ ಚೆಲ್ಲಾಡನಲೆ


ಹಿಂಗಾರಿ ತೊಂಬತ್ತು ಪೈಸೆ ಕೊಟ್ಟಿನಲೆ


೦೩-೦೬-೧೯೯೭ ನನ್ನ ಮ್ಯಾಲ ನಂಬಿಗಿ ಇಟ್ಟವಗ ಬಂಗಾರ ಕೊಟ್ಟಿನಲೆ


ಮುಂಗಾರಿ ಎಪ್ಪತ್ತೈದು ಪೈಸೆ


ಹಿಂಗಾರಿ ಬಂಗಾರ ಕೊಟ್ಟಿನಲೆ


೨೩-೦೫-೧೯೯೮ ನನಗ ನಡಕೊಂಡವನಿಗೆಬೇಕಾದ್ದ ಕೊಟ್ಟಿನಲೆ


ಮುಂಗಾರಿ ಉಡಿತುಂಬ ಚೆಲ್ಲಾಡಿನಲೆ


ಹಿಂಗಾರಿ ಬೇಕಾದಷ್ಟ ಬಿತ್ತಿ ಬೇಕಾದ ಷ್ಟ ಬೆಳಕೊಳ್ಳರಲೆ






೧೩-೦೫-೧೯೯೯ ಕತ್ತಿಯಂಗ ಮಾಡಿದವರ ಲತ್ತಿ ಪೆಟ್ಟ ತಿಂತಿರಲೆ


ಮುಂಗಾರಿ ನಿಟ್ಟಿನಮ್ಯಾಲೆ ನಿಟ್ಟು ಕಟ್ಟಿನಲೆ


ಹಿಂಗಾರಿ ಸಾಕಷ್ಟ ಕೊಟ್ಟಿನಲೆ


೩೦-೦೫-೨೦೦೦ ನನ್ನ ನಂಬಿದವರಿಗೆ ಬಂಗಾರ ಹಾಸಿನಲೆ


ಮುಂಗಾರಿ ಅರ್ಧಲೆ


ಹಿಂಗಾರಿ ತೊಂಬತ್ತ ಪೈಸಾ ಕೊಟ್ಟಿನಲೆ


೨೦-೦೫-೨೦೦೧ ಕತ್ತಿ ಹಂಗ ಮಾಡಿದವರು ಲತ್ತಿ ಪೆಟ್ಟ ತಿಂತಿರಲೆ


ಮುಂಗಾರಿ ಮೂವತ್ತೈದು ಪೈಸಾ


ಹಿಂಗಾರಿ ಸಾಕಷ್ಟು ಕೊಟ್ಟಿನಲೆ


೧೦-೦೬-೨೦೦೨ ನನ್ನ ನಂಬಿದವನ ಬೆನ್ನ ಹಿಂದ ಅದಿನಲೆ


ಮುಂಗಾರಿ ಅರವತ್ತು ಪೈಸೆ


ಹಿಂಗಾರಿ ಚೀಲತುಂಬ ಚೆಲ್ಲಾಡಿನಲೆ


೩೧-೦೫-೨೦೦೩ ನೆರೆ ಹಾಲಿನಂಗ ಇದ್ದವಗ ಬೆಳ್ಳಿ ಬಂಗಾರಲೆ


ಮುಂಗಾರಿ ಹಿಂದಿನಿಂದ ಬೆಳದಿರಲೆ


ಹಿಂಗಾರಿ ಚೀಲ ತುಂಬಿ ಓಣಿ ಓಣಿ ಚೆಲ್ಲಾಡಿರಲೆ


೧೯-೦೫-೨೦೦೪ ಕತ್ತಿ ಹಂಗ ಮಾಡಿದವನಿಗೆ ಲತ್ತಿ ಪೆಟ್ಟ ತಿಂತಿರಲೆ


ಮನಸ ಮಾಡಿ ಮಾಡಿ ಬೇಕಾದ ಬೀಜ ಬಿತ್ತಿ ಬೆಳಿರಲೆ


ಹಿಂಗಾರಿ ಸಾಕಷ್ಟು ಕೊಟ್ಟಿನಲೆ






೦೪-೦೬-೨೦೦೫ ನನ್ನ ಮರಾವಗ ಇಂಗಳ ಗೂಟಲೆ


ಮುಂಗಾರಿ ಹಿಂದಲಿಂದ ಬೆಳದಿರಲೆ


ಹಿಂಗಾರಿ ಬೇಕಾದಷ್ಟ ಕೊಟ್ಟಿನಲೆ


೨೭-೦೫-೨೦೦೬ ನೊರೆ ಹಾಲಿನಂತ ಮನಸ ಇದ್ದವಗ ಬೆಳ್ಳಿ ತೊಟ್ಟಿಲದಾಗ ತೂಗಿನಲೆ


ಮುಂಗಾರಿ ಮುತ್ತಾಗಿ ಹೋಯಿತಲೆ


ಹಿಂಗಾರಿ ಎಂಬತ್ತೊಂಬತ್ತು ಪೈಸಾ ಕೊಟ್ಟಿನಲೆ


೧೭-೦೫-೨೦೦೭ ನಾ ಅಂದವಗ ನರಕಕ್ಕ ಕಳಿಸಿನಲೆ


ಮುಂಗಾರಿ ಅರ್ಧ ಕೊಟ್ಟಿನಲೆ


ಹಿಂಗಾರಿ ಹರಿ ಹರಿ ಚೆಲ್ಲಾಡನಲೆ


೧೬-೦೫-೨೦೦೯ ನನ್ನ ನಂಬಿ ನಡದವಗ ಬೆನ್ನ ಹಿಂದ ಅದಿನಲೆ


ಮುಂಗಾರಿ ಉಡಿತುಂಬ ಚೆಲ್ಲಾಡಿನಲೆ


ಹಿಂಗಾರಿ ಜೋಳ ಓಣಿ ಓಣಿ ಚೆಲ್ಲಾಡಿನಲೆ


*****


ಮಲ್ಲಿಕಾರ್ಜುನ ಹಿಪ್ಪರಗಿ ಬಿ.ಎ.೧

ಗೋಟಖಿಂಡ್ಕಿ ದೇವಿ ಜಾತ್ರೆ

ನಮ್ಮೂರ ದೇವಿ ಪುರಾಣ ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೋಟಖಿಂಡ್ಕಿ ಗ್ರಾಮ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅಂತಹ ವೈಶಿಷ್ಟ್ಯಗಳಲ್ಲಿ ೧೪೮ ವರ್ಷ ಗಳಿಂದ ನಡೆದುಕೊಂಡು ಬರುತ್ತಿರುವ ದೇವಿ ಪುರಾಣವೂ ಒಂದು.




ಪ್ರತಿ ವರ್ಷ ಮಹಾನವಮಿ ಅಮವಾಸ್ಯೆಯಂದು ಪ್ರಾರಂಭವಾಗಿ ದೀಪಾವಳಿ ಅಮವಾಸ್ಯೆಯ ಅನಂತರ ಬರುವ ತ್ರಯೋದಶಿಯಂದು ಮುಕ್ತಾಯವಾಗುತ್ತದೆ. ಸುಮಾರು ಒಂದುವರೆ ತಿಂಗಳ ವರೆಗೆ ನಡೆಯುವ ಈ ಕಾರ್ಯಕ್ರಮ ಜಾತ್ರೆಯೊಂದಿಗೆ ಮುಕ್ತಾಯವಾಗುತ್ತದೆ. ಚಿದಾನಂದ ಅವಧೂತರಿಂದ ರಚಿಸಲ್ಪಟ್ಟ ‘ಶ್ರೀ ಮನ್ ಮಹಾದೇವಿ ಮಹಾತ್ಮೆ ’ಪುರಾಣವನ್ನು ಪಠಿಸಲಾಗುತ್ತದೆ.



ಗ್ರಾಮದ ಕುಲಕರ್ಣಿ ಮನೆತನದ ಚಿಂತಪ್ಪ ಮುತ್ಯಾ ಅವರು ೧೦೦ ವರ್ಷಗಳ ಕಾಲ ತಮ್ಮ ಮನೆಯಲ್ಲಿಯೇ ಈ ಪುರಾಣವನ್ನು ನಡೆಸಿಕೊಂಡು ಬಂದಿದ್ದಾರೆ. ಪಾರಂಭದಿಂದಲೂ ಒಂದೇ ಪುರಾಣ ಪುಸ್ತಕವನ್ನು ಬಳಸುತ್ತ ಬಂದಿದ್ದಾರೆ.


ಈ ಪುರಾಣ ಕೃತಿಯ ಬಗ್ಗೆ ಅನೇಕ ವದಂತಿಗಳಿವೆ. ಈ ಪುರಾಣಕ್ಕಾಗಿ ಸಂಗ್ರಹಿಸಿದ ಹಣ ಬಳಸಿದ ವ್ಯಕ್ತಿ ಆರ್ಥಿಕವಾಗಿ ಸರ್ವ ನಾಶವಾಗಿ ಊರನ್ನೆ ಬಿಡಬೇಕಾದ ಪ್ರಸಂಗ ಬಂತಂತೆ. ಇನ್ನೊಂದು ಊರಿಗೆ ಪ್ಲೇಗ್ ಬಂದಾಗ ಊರಹೊರಗೆ ಗುಡಿಸಲಲ್ಲಿ ಈ ಗ್ರಂಥ ಇಟ್ಟು ಪೂಜಿಸುತ್ತಿದ್ದರಂತೆ. ಆಕಸ್ಮಿಕವಾಗಿ ಬೆಂಕಿ ಬಿದ್ದು ಗುಡಿಸಲು ಸುಟ್ಟರೂ ಈ ಗ್ರಂಥಕ್ಕೇನೂ ಆಗಿರಲಿಲ್ಲವಂತೆ.


ಚಿಂತಪ್ಪ ಮುತ್ಯಾ ಊರು ಬಿಡುವ ಮುಂಚೆ ಈ ಗ್ರಂಥವನ್ನು ಊರ ಹಿರಿಯರಾದ ಶಂಕರಗೌಡ ಗುರುಸಂಗಪ್ಪಗೌಡ ಕೋಣ್ಯಾಳ ಇವರಿಗೆ ಒಪ್ಪಿಸಿ ಪುರಾಣ ಪಠಣ ಮುಂದುವರೆಸುವಂತೆ ತಿಳಿಸಿದರಂತೆ.


ಅದನ್ನು ಪಾಲಿಸಲು ಊರ ಮುಂದಿನ ಹೊಲದಲ್ಲಿ ಸಚ್ಚಿದಾನಂದ ಮಠ ಕಟ್ಟಿಸಿ ಚಂದ್ರಶೇಖರ ಸ್ವಾಮಿಗಳಿಂದ ಪುರಾಣ ಪ್ರವಚನವನ್ನು ಮುಂದುವರೆಸಿದರಂತೆ.


೧೯೬೪ ಇಸ್ವಿಯಿಂದ ಈ ಮಠ ಅಧ್ಯಾತ್ಮದ ಪ್ರಸಾರ ಮಾಡುತ್ತ ಬಂದಿದೆ. ಈಗಲೂ ಪ್ರಸಾರ ಕಾರ್ಯವನ್ನು ಮುಂದುವರೆಸಿದೆ.


ಚಂದ್ರಶೇಖರ ಶಿವಯೋಗಿಗಳ ಮರಣಾನಂತರ ಶಂಕರಗೌಡರೆ ಶರಣರಾಗಿ ಪುರಾಣ ಪ್ರವಚನ ಮಾಡಿದರು. ಈಗ ಊರ ಮುಂದೆ ಶ್ರೀ ಮನ್ ಮಹದೇವಿ ಮಂದಿರ, ಚಿಂತಪ್ಪ ಮುತ್ಯಾ ಮಂದಿರ, ಶ್ರೀ ಚಂದ್ರಶೇಖರ ಶಿವಯೊಗಿ ಮಂದಿರ ಕಟ್ಟಿಸಿ ಸುಂದರ ಪರಿಸರ ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಜಾತ್ರೆಯ ಸಂದರ್ಭದಲ್ಲಿ ತೇರನ್ನು ಎಳೆಯಲಾಗುತ್ತದೆ.ಇದರ ವಿಶೇಷತೆಯಂದರೆ ಊರಿನ ಹೆಣ್ಣುಮಕ್ಕಳು ೨ ಲಕ್ಷಕ್ಕಿಂತಲೂ ಹೆಚ್ಚು ಹಣ ಸೇರಿಸಿ ಈ ತೇರನ್ನು ಮಾಡಿಸಿದ್ದಾರೆ ಅಷ್ಟೆ ಅಲ್ಲ ತೇರನ್ನು ಈ ಹೆಣ್ಣುಮಕ್ಕಳೇ ( ಈ ಊರಲ್ಲಿ ಹುಟ್ಟಿದ, ಪರ‌ಊರಿಗೆ ಕೊಟ್ಟ ಹೆಣ್ಣುಮಕ್ಕಳು ) ಎಳೆಯುತ್ತಾರೆ.



ಹೀಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ ಈ ಊರು ಸದಾ ಸುಭಿಕ್ಷವಾಗಿದೆ. ಬೇರೆಲ್ಲಿ ಮಳೆಯಾಗಿರದಿದ್ದರೂ ಇಲ್ಲಿ ಮಳೆಯಾಗಿ ಉತ್ತಮ ಫಸಲು ಬರುತ್ತದೆಂಬುದು ಇಲ್ಲಿಯ ಭಕ್ತರ ನಂಬಿಕೆ.

ನೀಲಮ್ಮ ಕೋಣ್ಯಾಳ ಬಿ,ಎ,೨

Sunday, August 1, 2010

ನಮ್ಮೂರ ಪುರಾಣ ಕವಿ ವೀರಸಂಗಪ್ಪ ಹಗರಟಗಿ

ಕವಿಯ ಪರಿಚಯ :


ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹಗರಟಗಿ  ಗ್ರಾಮದಲ್ಲಿ ಭೀಮಪ್ಪ ಮತ್ತು ಬಸಮ್ಮ ಎಂಬ ದಂಪತಿಗಳ ಉದರದಲ್ಲಿ ದಿನಾಂಕ: ೨೫-೦೬-೧೯೩೨ ರಂದು ಜನಿಸಿದರು.


‘ಭಾವ ತರಂಗಿಣಿ’ ಹಾಗೂ ‘ಶ್ರೀ ಪವಾಡ ಬಸವೇಶ್ವರ ಸುಪ್ರಭಾತ ’ಈ ಎರಡು ಭಾವ ಕುಸುಮಗಳ ಸಮ್ಯಕ್ಯ್ ಸಂಕಲನದಿಂದ ಶ್ರೀ ವೀರಸಂಗಪ್ಪ ಹಗರಟಗಿಯವರು ಸಾಹಿತ್ಯ ಪ್ರಪಂಚಕ್ಕೆ ಪರಿಚಿತರು. ವೃತ್ತಿಯಿಂದ ಶಿಕ್ಷಕರು, ಪ್ರವೃತ್ತಿಯಿಂದ ಕವಿಗಳು ಸ್ವಭಾವತ: ಸಾತ್ವಿಕರು ದುಡಿಮೆಯೇ ದೈವ ಎಂದು ನಂಬಿದವರು. ಆದರೆ ವೀರಸಂಗಪ್ಪ ಹಗರಟಗಿಯವರು ಯಾರಿಗೂ ಕಾಣದ ಲೋಕಕ್ಕೆ ತೆರಳಿದ್ದಾರೆ.



ವಿದ್ಯಾಭ್ಯಾಸ


ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಾದ ಹಗರಟಗಿಯಲ್ಲಿಯೇ ಮುಗಿಸಿ ನಂತರ ಮಾಧ್ಯಮಿಕ ಶಿಕ್ಷಣವನ್ನು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಎಂಬ ಮಾಧ್ಯಮಿಕ ಶಾಲೆಯಲ್ಲಿ ಮುಗಿಸಿದರು. ಹೆಚ್ಚಿನ ವ್ಯಾಸಂಗಕ್ಕಾಗಿ ‘ಕವಿಗಳ ಬೀಡು’ ಎಂದೇ ಖ್ಯಾತಿ ಪಡೆದಿರುವ ಧಾರವಾಡ ವಿಶ್ವವಿಧ್ಯಾನಿಲಯದಲ್ಲಿ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು.


ಸೇವೆ :


ವೀರಸಂಗಪ್ಪ ಹಗರಟಗಿಯವರು ಹಗರಟಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ (೧೯೫೪), ವಜ್ಜಲದಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ (೧೯೮೦), ಹಾಗೂ ಕೆಂಭಾವಿಯಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಕರಾಗಿ ಸೇವೆ ಸಲ್ಲಿಸಿದರು.


ಹಗರಟಗಿಯವರ ಸಾಹಿತ್ಯ ಚಿಂತನ-ಸನ್ಮಾನ:
೧. ೧೯೯೭ ರಲ್ಲಿ ಪ್ರಜ್ಞಾ ಪ್ರಕಾಶನ ಹುಣಸಗಿ,




೨. ಕನ್ನಡ ಸಾಹಿತ್ಯ ಪರಿಷತ್, ಮುದ್ದೇಬಿಹಾಳ,


೩. ಸ್ವಾಮಿ ವಿವೇಕಾನಂದ ತರುಣ ಸಂಘ, ಬಿಳೇಭಾವಿ


೪. ಶ್ರೀ ಪವಾಡ ಬಸವೇಶ್ವರ ಸಮಿತಿ ಸಾ.ಬಸರಕೋಡ


೫. ಗಡಿ ಸೋಮನಾಳ ಬಸವ ಸಮಿತಿ


೬. ಕೊಡೇಕಲ್ಲ್ ಶ್ರೀ ದುರದುಂಡೇಶ್ವರ ಮಠಾಧೀಶರಿಂದ


೭. ಸುರಪುರ ತಾಲೂಕಾ ಕನ್ನಡ ಸಾಹಿತ್ಯ ಸಂಘ, ರಂಗನಪೇಟ


೮. ಕನ್ನಡ ಸಾಹಿತ್ಯ ಪರಿಷತ್ , ಸುರಪುರ (ಕೆಂಭಾವಿಯಲ್ಲಿ)


೯. ಬಬಲಾದಿ ಶ್ರೀ ಚನ್ನವಿರೇಶ ಮಠಾಧೀಶರು ಜಿಲ್ಲಾ.ಗುಲ್ಬರ್ಗಾ


೧೦. ಕೋರಿಸಿದ್ದೇಶ್ವರ ಮಹಾ ಸಂಸ್ಥಾನ, ನಾಲವಾರ ಜಿಲ್ಲಾ. ಗುಲ್ಬಾರ್ಗಾ


೧೧. ಗುಂಡಕನಾಳ ತಾ. ಮುದ್ದೇಬಿಹಾಳ ಮಠದ ಸದ್ಭಕ್ತರಿಂದ


೧೨. ಕೊಡೇಕಲ್ಲ್ ಸಮಾಜ ಸೇವಾ ಬಳಗ (ಬಿಳೇಭಾವಿಯಲ್ಲಿ)


೧೩. ೧೦ನೇ ವಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ


೧೪. ಕಲ್ಯಾಣ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ


೧೫. ೧೦ ಸ್ಥಳಿಯ ರೋಟರಿ ಕ್ಲಬ್‌ರವರಿಂದ ಸನ್ಮಾನ




ಕೃತಿಗಳು :


ಭಾಮಿನಿ ಷಟ್ಪದಿಯಲ್ಲಿ ಜನಪದ ಸಂಸ್ಕೃತಿಯ ಹರಿಕಾರರಾದ ಸಾಧು-ಸಂತರ ಶರಣರ ಕುರಿತು ಪುರಾಣ ರಚಿಸಿದ್ದಾರೆ, ಸುಪ್ರಭಾತ ರಚಿಸಿದ್ದಾರೆ. ಒಟ್ಟು ಮಹತ್ವದ ೨೫ ಕೃತಿಗಳಿವೆ. ಅವುಗಳಲ್ಲಿ ಕೆಲವು ಮಾತ್ರ ಪ್ರಕಟವಾಗಿವೆ. ಉಳಿದ ಕೆಲವು ಕೃತಿ ಪ್ರಕಟಮಾಡಲು ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸುವ ಅಗತ್ಯವಿದೆ.


೧. ಭಾವತರಂಗಿಣಿ - ಕವನ ಸಂಕಲನ


೨. ಬಸವ ಸುಪ್ರಭಾತ - ಭಕ್ತಿಗೀತೆ


೩. ಪವಾಡ ಬಸವೇಶ್ವರ ಭಜನಾಮೃತ - ಭಾವಗೀತೆ


೪. ವಚನ ಭ್ರಹ್ಮದೇವ ದಾಸಿಮಯ್ಯ - ಸುಪ್ರಭಾತ


೫. ಚಂದ್ರಶೇಖರ ಶಿವಯೋಗಿಗಳು - ಜನಪದ ಶೈಲಿ


೬. ಕೆಂಭಾವಿ ಭೋಗೇಶ ಭಾವಗೀತೆ - ಭಾವಗೀತೆ


೭. ಬಬಲಾದಿ ಚನ್ನವಿರೇಶ ಸುಪ್ರಭಾತ - ನೂರೆಂಟು ನಾಮಾವಳಿ


೮. ಮಹಾಮಾತೆ ಮಾಣಿಕೇಶ್ವರಿ ಸುಪ್ರಭಾತ - ನೂರೆಂಟು ನಾಮಾವಳಿ


೯. ಕೊಡೇಕಲ್ಲ್ ಬಸವ ಸುಪ್ರಭಾತ


೧೦. ಕಡಕೋಳ ಮಡಿವಾಳೇಶ್ವರ ಸುಪ್ರಭಾತ


೧೧. ಸದ್ಗುರು ರಾಮಲಿಂಗೇಶ್ವರ ನೂರೆಂಟು ನಾಮಾವಳಿ - ಭಕ್ತಿಗೀತೆ


೧೨. ಶ್ರೀ ಪವಾಡ ಬಸವೇಶ್ವರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೩. ಶ್ರೀ ಸದ್ಗುರು ರಾಮಲಿಂಗೇಶ್ವರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೪. ಬಸವ ಲಿಂಗಪ್ಪನವರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೫. ಬಬಲಾದಿ ಚನ್ನವಿರೇಶ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೬. ಮಹಾಮಾತೆ ಮಾಣಿಕೇಶ್ವರಿ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೭. ಸುವರ್ಣಲಿಂಗ ಶಿವಾಚಾರ್ಯರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೮. ಕೋರಿ ಸಿದ್ದೇಶ್ವರ ಮಹಾಕಾವ್ಯ - ಭಾಮಿನಿ ಷಟ್ಪದಿ ಕಾವ್ಯ


೧೯. ಭೀಮಾಶಂಕರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೨೦. ದುಧನಿಯ ಶ್ರೀ ಗುರು ಶಾಂತಲಿಂಗರ ಚರಿತ್ರೆ - ಜೀವನ ಚರಿತ್ರೆ


ಅಪ್ರಕಟಿತ ಕೃತಿಗಳು


೧. ದಿವ್ಯದರ್ಶನ - ಜೀವನ ಚರಿತ್ರೆ


೨. ಗಂಗೆಯ ಮಂಗಳದಂಗಳ


೩. ಮಾತೆ ಮಾಣಿಕೇಶ್ವರಿ ಮಹಿಮೆ - ಜನಪದ


೪. ಶರಣ ಚರಿತಾಮೃತ - ಜೀವನ ಚರಿತ್ರೆ




ಭಾಮಿನಿ ಷಟ್ಪದಿಯಲ್ಲಿ ರಚನೆಯಾದ ಹಲವಾರು ಪುರಾಣಗಳಲ್ಲಿ “ಶ್ರೀ ಪವಾಡ ಬಸವೇಶ್ವರ ಪುರಾಣ” ವು ಸಹ ಒಂದಾಗಿದೆ. ಈ ಪುರಾಣವು ೨೧೮ ಪುಟಗಳನ್ನು ಹಾಗೂ ೨೮ ಸಂಧಿಗಳನ್ನು ಒಳಗೊಂಡಿದೆ.


ಶ್ರೀ ಪವಾಡ ಬಸವೇಸ್ವರ ಪುರಾಣ :


ಈ ಪುರಾಣದ ಎರಡು ಮುಖ್ಯ ಸಾಲುಗಳ ಈ ರೀತಿಯಾಗಿದೆ.


‘ವಂದಿಸುವೆ ಬಸವೇಶನಂಘ್ರಿಗೆ


ಯಿಂದುಧರ ಲೀಲೆಗಳ ನೆನೆಯುತ


ತಂದೆ ನೀ ಜಗದೊಡೆಯ ಲಿಲಾಪುರುಷ ಬಸವೇಶ


ಅಂದವಾದೀ ದೈವಕಥೆಯನ್ನು


ಮುಂದುವರಿಸುವ ವೀರಸಂಗನು


ಸಂಧಿಯರಡನು ಮುಗಿಸಲೆಳಸುವ ದೇವನನುತಿಸಿ’


‘ಜಲದಿ ಕಮಲವು ಹುಟ್ಟಿಬೆಳೆದರೆ


ಜಲಕೆ ಸೋಂಕದೆ ತೇಲುವಂದದಿ


ನೆಲದಿ ನಮ್ಮೊಳು ದೇವಪುರುಷರು ಬೆರೆತು ಬೇರಿಹರು


ಮಲಿನಗೊಂಡಿಹ ಮನುಜ ಲೋಕದಿ


ಬೆಲೆಯನರಿಯದೆ ನೈಜಸಿರಿಯನು


ಕುಲವನೆಣಿಸುತ ಕೀಳುಭಾವದ ಮನುಜರಿಲ್ಲಿಹರು’


ಶ್ರೀ ಬಸಲಿಂಗಪ್ಪನವರ ಪುರಾಣಂ :


ಈ ಪುರಾಣವು ಸಹ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ. ಈ ಪುರಾಣವು ೩೩೬ ಪುಟಗಳನ್ನು ಹಾಗೂ ೨೫ ಸಂಧಿಗಳನ್ನು ಒಳಗೊಂಡಿದೆ. ಈ ಪುರಾಣವು ಪ್ರಸ್ತುತ ಊರಾದ ಶರಣ ಸೋಮನಾಳದ ಶ್ರೀ ಬಸಲಿಂಗಪ್ಪನವರ ಕುರಿತಾದ ವಿವರಣೆಯಿದೆ. ಪ್ರಸ್ತುತ ಪುರಾಣದಲ್ಲಿ ೮ ಸಂಧಿಗಳನ್ನು ಮಾತ್ರ ರಚಿಸಿದ್ದಾರೆ.


ಈ ಪುರಾಣದ ಎರಡು ಮುಖ್ಯ ಸಾಲುಗಳು ಈ ಕೆಳಗಿನಂತಿವೆ.


‘ಎಷ್ಟು ದಿನ ಬದುಕಿದರು ಕೊನೆಯಲ್ಲಿ


ನಷ್ಟವಾಗುವ ದೇಹವಿದು ಮನ


ದಿಷ್ಟದಂದದಿ ಗಂಗೆಯಲಿ ಕೊನೆಯಾಗಲೆಂದಿಹರು


ಕಷ್ಟವಾಯಿತು ಕೇಳಿದಿವರಗೆ


ದೃಷ್ಟಿಬೀರುತಲೆಲ್ಲ ರಾಜನ


ಸೃಷ್ಟಿಗೊಂಡಿಹ ಶರಣನಿಶ್ಚಯ ತಿಳಿಯದಾಗಿಹರು’


ಶ್ರೀ ಪವಾಡ ಬಸವೇಶ್ವರ-“ಭಜನಾಮೃತ” :


ವೀರಸಂಗಪ್ಪ ಹಗರಟಗಿ ಕವಿಗಳು ಬಸರಕೊಡದ ಬಸವೇಶ್ವರರನ್ನು ಕುರಿತು ‘ಭಜನಾಮೃತ’ ಕವನ ಸಂಕಲನವನ್ನು ರಚಿಸಿದ್ದಾರೆ. ಈ ಸಂಕಲನವು ೪೪ ಪುಟಗಳನ್ನು ಒಳಗೊಂಡಿದೆ.


‘ಪುರ ಬಸರಕೋಡಕ್ಕೆ ಸಾಗೋಣ’


ರಾಗ-ಯಮನ   : ತಾಳ-ಕೇರವ


‘ಸ್ವಾಮಿ ಪವಾಡನ


ನಾಮದ ನೆನೆಯುತ


ಪ್ರೇಮದಿ ಜಗದೊಳು ಬಾಳೋಣ


ಕಾಮಿತ ಫಲಗಳ


ನೇಮದಿ ನೀಡುವ


ಸೀಮಾತೀತನ ಸ್ಮರಿಸೋಣ’


ವ್ಯಕ್ತಿತ್ವ  :


ವೀರಸಂಗಪ್ಪ ಹಗರಟಗಿಯವರ ಜೀವನ, ಸಾಹಸ, ಶೌರ್ಯ, ಕಾರ್ಯ, ಸಾಧನೆ ಮಹತ್ತಾದುದು. ಹಗರಟಗಿಯವರು ಕೇವಲ ಒಬ್ಬ ಕವಿಯಾಗಿರದೆ ಒಬ್ಬ ಉತ್ತಮ ಅಸಾಧಾರಣ, ಪ್ರಭಾವಿಶಾಲಿ ವ್ಯಕ್ತಿಯಾಗಿದ್ದರು.


ವೀರಸಂಗಪ್ಪ ಹಗರಟಯವರು ಗಿಡ್ಡನೆಯ ದೇಹ, ಬಾಗಿದ ಬೆನ್ನು ಹೊಂದಿದ್ದರು. ಎಲ್ಲರೊಂದಿಗೆ ಬೆರತು ಸಂತೋಷದಿಂದ ಆಡಿ-ನಲಿದಾಡುತ್ತಿದ್ದರು. ಹಗರಟಗಿಯವರು ಯಾವಾಗಲು ಹಣ್ಣು-ಹಂಫಲಗಳನ್ನೆ ಹೆಚ್ಚಾಗಿ ಸೇವಿಸುತ್ತಿದ್ದರು.
ಇಂಥ  ಮಹನೀಯರು ನಮ್ಮೂರಲ್ಲಿದ್ದರೆಂಬುದೇ ನಮ್ಮ ಭಾಗ್ಯ !

ಬಿ.ಎನ್.ಬಾವೂರ  ಬಿ.ಎ. ೧