Saturday, May 1, 2010

ಪುಸ್ತಕಪ್ರೀತಿ

ನಾನು ಮೆಚ್ಚಿದ ಪುಸ್ತಕ :
ಮಾಯೆಯ ಮುಖಗಳು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ


ಮೂಡಿಗೆರೆಯ ಮೋಡಿಗಾರ ತೇಜಸ್ವಿ ಬರಹದ ರುಚಿಯೇ ಬೇರೆ ! ಕನ್ನಡದ ಅತ್ಯುತ್ತಮ ಬರಹಗಾರರಲ್ಲಿ ಒಬ್ಬರಾದ ಇವರು ಓದುಗರ ವ್ಯಕ್ತಿತ್ವದ ಒಳಹೊಕ್ಕು ವಿಶೇಷ ಅನುಭೂತಿ ನೀಡುತ್ತಾರೆ ; ತಾವು ಕಂಡ ವಿಸ್ಮಯದಲ್ಲಿ ಓದುಗರನ್ನೂ ತನ್ಮಯಗೊಳಿಸುತ್ತಾರೆ. 
ಮರಿಗೆ ಮಮತೆಯ  ಗುಟುಕು ನೀಡುತ್ತಿರುವ ಪಿಕಳಾರ 

 ತೇಜಸ್ವಿಯವರ ‘ಮಾಯೆಯ ಮುಖಗಳು ’ಈ ಸಚಿತ್ರ ಲೇಖನಗಳ  ಕೃತಿ ಒಂದು ಸುಂದರ ಪರಿಸರ ಕಾವ್ಯವಾಗಿದೆ. “ಮಾನವ ಪರಿಸರದ ಕೂಸು”. ಮಾನವನಿಗೆ ಸ್ನೇಹಿತರಾಗಿರುವ ಹಕ್ಕಿ, ಕೀಟ,ಜೇನ್ನೊಣ ಮುಂತಾದವುಗಳ ಕುರಿತು  ಹೊಸ ಲೋಕವನ್ನೆ ತೆರೆದಿಟ್ಟಿದ್ದಾರೆ. ಅದರಲ್ಲೂ ಸಹ್ಯಾದ್ರಿಯ ಮಡಿಲಲ್ಲ್ಲಿ ಝೇಂಕರಿಸುವ ಝರಿಗಳು, ಹಾವು ,ಹೂವು, ಹುಳುಹುಪ್ಪಟಿ ಮತ್ತು ಮನುಷ್ಯರೂ ಸೇರಿದಂತೆ ಎಲ್ಲವನ್ನೂ ಬಗೆಗಣ್ಣಿನಿಂದ ಅವಲೋಕಿಸಿದ್ದಾರೆ.


ಮುಖ ಪುಟದಲ್ಲಿ ಸ್ಥಾನ ಪಡೆದ ಪಿಕಳಾರ ಜೋಡಿ ಹಕ್ಕಿಗಳು
೧೪೪ ಪುಟಗಳ ವಿಶಿಷ್ಟ ಆಕಾರದ ಈ ಕೃತಿಯಲ್ಲಿ ೧೫೦ ಕ್ಕಿಂತಲೂ ಹೆಚ್ಚು ಚಿತ್ರಗಳಿವೆ.  ಆದ್ದರಿಂದಲೇ ಈ ಕೃತಿಗೆ ಪ್ರಕಾಶಕರು “ ತೇಜಸ್ವಿಯವರ ದೃಶ್ಯಕಾವ್ಯ” ಎಂದು ಕರೆದಿದ್ದಾರೆ. ‘ಎದೆಯ ಹಕ್ಕಿ ಪೊದೆಯ ಹಕ್ಕಿ’ ಯಿಂದ ಹಿಡಿದು ‘ಆಮೃತ ಶಿಲೆಯ ಶಿಲ್ಪ- ಫ್ಯಾಲೇಸ್ ’ ವರೆಗೆ ೩೨ ಚಿತ್ರ ಲೇಖನಗಳಿವೆ. ಬಹುಶಃ ಇಂತಹ ಪುಸ್ತಕ ಮತ್ತಾವ ಭಾಷೆಯಲ್ಲಿಯೂ ಇರಲಿಕ್ಕಿಲ್ಲ ! ಚಿತ್ರಗಳಿಗೆ ಕೊಟ್ಟ ವಿವರಗಳಂತೂ ಕಾವ್ಯಕಳೆಯಿಂದ ಕಂಗೊಳಿಸುತ್ತವೆ; ಓದುಗರಿಗೆ ಕುತೂಹಲ ಹುಟ್ಟಿಸುತ್ತವೆ; ಚಿತ್ರ- ಬರಹಗಳಲ್ಲಿ ಮೈಮರೆಸುತ್ತವೆ.

ಟುವ್ವಿ ಹಕ್ಕಿ ಮರಿಗೆ ಗುಟುಕು ಕೊಡುವ ಅಮೃತ ಕ್ಷಣ
ಚಳಿಗಾಲದಲ್ಲಿ ಚಿಟ್ಟಹಕ್ಕಿ ಸೈಬಿರಿಯಾ ಮಂಚೂರಿಯಾಗಳಿಂದ ಸಹ್ಯಾದ್ರಿ ತವರಿಗೆ ಬಂದು ನೆಲೆಯೂರಿ ಮತ್ತೆ ವಸಂತ ಕಾಲವನ್ನು ತಮ್ಮ ರಾಷ್ಟ್ರಗಳಲ್ಲಿಯೆ ಕಳೆಯುತ್ತವೆ. ಮಿಂಚುಳ್ಳಿ ಸುರಂಗ ಕೊರೆದು ಮನೆಮಾಡಿ ಮರಿಗಳನ್ನು ಸಾಕುವ ವಿಸ್ಮಯ ಇಲ್ಲಿದೆ.

ಜೇಡನ ಬಲೆಗುಂಟ ಹಿಮಮಣಿ ಮಾಲೆ

ಗರುಗಿ ಹಳು ಹೂ ಜೇನು ಉತ್ಪಾದನೆಗೆ ಹೇಳಿಮಾಡಿಸಿದ ಕಾಡಿನ ಸಸ್ಯ. ಏಳು ವರ್ಷಕ್ಕೊಮ್ಮೆ ಹೂಬಿಡುವ ಈ ಸಸ್ಯ ಜೀವಲೋಕದ ವಿಸ್ಮಯ. ಆದರೆ ಇಂದು ಜೇನ್ನೊಣಗಳ ಓಂಕಾರ ನಾದವಿಲ್ಲದೆ ಕಣಿವೆಗಳು ಮೌನವಾಗಿವೆ.
ಆಕಾಶದ ಭಿತ್ತಿಯಲ್ಲಿ ಮಂಗಟ್ಟೆಯ ಗರಿ-ಸಿರಿ

ಈ ಕೃತಿಯಲ್ಲಿಯ ತಲೆಬರಹಗಳು, ಚಿತ್ರಕ್ಕೆ ನೀಡಿದ ವಿವರಣೆಗಳು ತೇಜಸ್ವಿ
ಕಾವ್ಯತ್ಮಕ ಬರವಣಿಗೆಗೆ ಸಾಕ್ಷಿ ನುಡಿಯುತ್ತವೆ.“ಚಲಿಸುವ ಮಿಸ್ಟರ್ ಮುಳ್ಳು”
, “ಹಕ್ಕಿ ಹಾರುತಿದೆ ನೋಡಿದಿರಾ”, “ಝೇಂಕರಿಸುವ ರೆಕ್ಕೆಗಳು”,“ ಅಪರಂಜಿ ಹೂವಿನ ಹಕ್ಕಿ”,“ಹಣ್ಣು ಕಳ್ಲರು” ,“ ಎಲೆಲೆ ಎಲೆ ಕೀಟ”, ಹಿಮಮಣಿಗಳ ಅತೀಂ
ದ್ರಿಯ ಪ್ರಪಂಚ” ಇವು ಮಾಂತ್ರಿಕ ಶಕ್ತಿಯಿಂದ ಓದುಗರನ್ನು ಸೆರೆಹಿಡಿಯುತ್ತವೆ.




ಜೌಗಿನಲ್ಲಿ ಆಹಾರ ಹುಡುಕುತ್ತಿರುವ ಹುಂಡುಕೋಳಿ
ಪರಿಸರದಲ್ಲಿ ತಾನೂ ಒಂದಾಗಿ ಬದುಕಿದ ಅಪರೂಪದ ಸಾಹಿತಿ,ಚಿಂತಕ. ಮಾನವ ತನ್ನೊಂದಿಗೆ ಜೀವಜಗತ್ತಿದೆ ಎಂಬುದನ್ನು ಅರಿತು ಬಾಳಬೇಕು.ಸಹಜೀವಿಯ ಹಕ್ಕಿಗೆ ಧಕ್ಕೆ ತರದಂತಿರಬೇಕು ! ಇದು ತೇಜಸ್ವಿಯ ಆಶಯ !


ಮಳೆಯಲ್ಲಿ ವ್ಯಕ್ತಿಗಳೆಲ್ಲ ತಮ್ಮ ಹೆಸರು ಕುಲಗೋತ್ರ ಕಳೆದುಕೊಂಡು ಕೊಡೆಗಳಾಗಿಹೋಗಿರುವರು.

ಪ್ರತಿಯೊಂದನ್ನೂ ಕುತೂಹಲದಿಂದ ಕಾಣುವ ತೇಜಸ್ವಿ ನಮಗೆಲ್ಲ ಮಾದರಿಯಾಗಿದ್ದಾರೆ !ಈ ಕೃತಿಮೂಲಕ ಹೊಸ ದೃಷ್ಟಿ ನೀಡಿದ್ದಾರೆ !


ಸಾಧನಾ ಎಲ್.ಚಕ್ರಸಾಲಿ ಬಿ.ಎ. ೨