Saturday, August 7, 2010

Thursday, August 5, 2010

ಜ್ಞಾನ ಪೀಠ ಪುರಸ್ಕೃತ ಕನ್ನಡ ಸಾಹಿತಿಗಳು

ಕುವೆಂಪು:






ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳ್ಳಿ ವೆಂಕಟಪ್ಪನ ಮಗ ಪುಟ್ಟಪ್ಪನವರು ಮಲೆನಾಡ ಮಡಿಲಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯವರು. ೨೯ನೇ ಡಿಸೆಂಬರ ೧೯೦೪ ರಂದು ಜನಿಸಿದರು. ತಮ್ಮ ಫ್ರೌಡಶಾಲಾ ಮತ್ತು ಉನ್ನತ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಮೈಸೂರ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಿವೃತ್ತರಾದರು.೯ನೇ ನವೆಂಬರ ೧೯೯೪ ರಲ್ಲಿ ನಿಧನರಾದರು.


‘ಶ್ರೀ ರಾಮಾಯಣ ದರ್ಶನಂ’ ಈ ಯುಗದ ಮಹಾಕಾವ್ಯ. ಇದಕ್ಕೆ ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೮ ರಲ್ಲಿ ಭಾರತಿಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ.೧೯೫೭ ರಲ್ಲಿ ಧಾರವಾಡದಲ್ಲಿ ನಡೆದ ೨೯ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬೆಂಗಳೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್, ೧೯೯೨ರಲ್ಲಿ ಕರ್ನಾಟಕ ರತ್ನ ಮುಂತಾದ ಗೌರವಗಳು ಅವರಿಗೆ ಸಂದಿವೆ.


ಆಧುನಿಕ ಕನ್ನಡ ಸಾಹಿತ್ಯ ಹಿರಿಯ ಕವಿಗಳಲ್ಲಿ ಅಗ್ರಗಣ್ಯರಾದ ಕುವೆಂಪು ಅವರು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯು ಕೃತಿ ರಚಿಸಿದ್ದಾರೆ. ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ ಮುಂತಾದವು ಕವನ ಸಂಕಲನಗಳು. ‘ಸನ್ಯಾಸಿ ಮತ್ತು ಇತರ ಕಥೆಗಳು’ ಎಂಬ ಕಥಾ ಸಂಕಲನಗಳು, ಯಮನ ಸೋಲು, ಬೆರಳ್ಗೆ ಕೊರಳ್ ಮುಂತಾದ ನಾಟಕಗಳು. ‘ನೆನಪಿನ


ದೋಣಿಯಲ್ಲಿ’ ಎಂಬ ಆತ್ಮಕಥನ. ಅನುವಾದ ಮಹಾಕಾವ್ಯ ಮುಂತಾದ ಸುಮಾರು ೭೦ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ.

ಡಾ.ದ. ರಾ. ಬೇಂದ್ರೆ:






ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿದ್ದ ‘ದತ್ತಾತ್ರೇಯ ರಾಮಚಂದ್ರ ಬೇಂದ್ರೆ’ ಅವರು ಮನ್ಮಥನಾಮ ಸಂವತ್ಸರದ ಮಾಘವದ್ಯ ಪ್ರತಿಪದೆಯಂದು ೩೦-೦೧-೧೮೮೬ರಲ್ಲಿ ಧಾರವಾಡದ ಪೋತನಿಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು. ಅವರ ತಂದೆ ರಾಮಚಂದ್ರ ಪಂತರು, ತಾಯಿ ಅಂಬೂತಾಯಿ.


ಧಾರವಾಡದಲ್ಲಿ ಶಿಕ್ಷಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿ ಸೋಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾದರು. ನಿವೃತ್ತರಾದ ನಂತರ ಧಾರವಾಡದ ಆಕಾಶವಾಣಿಯಲ್ಲಿ ಕೆಲಸ ಮಾಡಿದರು.


ಬೇಂದ್ರೆಯವರು ಜ್ಞಾನಪೀಠ ಪ್ರಶಸ್ತಿಯನ್ನು ‘ನಾಕುತಂತಿ’ ಕವನ ಸಂಕಲನಕ್ಕೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ‘ಅರಳು ಮರಳು’ ಕವನ ಸಂಕಲನಕ್ಕೆ ಪಡೆದಿದ್ದಾರೆ. ಇದಲ್ಲದೆ ಶಿವಮೊಗ್ಗಾದಲ್ಲಿ ೧೯೪೩ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮೈಸೂರು ವಿಶ್ವವಿಧ್ಯಾನಿಲಯ ಹಾಗೂ ಕಾಶಿ ವಿದ್ಯಾಪೀಠಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ೨೬-೧೦೧೯೮೧ರಲ್ಲಿ ನಿಧನರಾದರು.


ಕನ್ನಡ ಕಾವ್ಯ ಪರಂಪರೆಯನ್ನು ಜೀವಂತವಾಗಿ ಮುಂದುವರೆಸುವದರಲ್ಲಿ ಅಂಬಿಕಾತನಯದತ್ತರ ಪಾತ್ರ ಹಿರಿದಾದುದು. ಅವರ ಮೊದಲನೆ ಕವನ ಸಂಕಲನವಾದ ‘ಗರಿ’ಯಲ್ಲಿ ಹೇಳಿದ ಮಾತುಗಳನ್ನು ಗಮನಿಸಿದರೆ ಕನ್ನಡದ ಅಶರೀರವಾಣಿಯು ಸಾವಿರ ಬಾಯಿಗಳಿಂದ ತನ್ನ ಕನಸನ್ನು ಕನ್ನಡಿಸುತ್ತದೆ. ಆ ಸಾವಿರ ಬಾಯಿಗಳಲ್ಲಿ ನನ್ನದೊಂದು. ಅದೇ ನನ್ನ ಧನ್ಯತೆ ಎಂದು ಸಹೃದಯರಿಗೆ ನಿವೇದಿಸಿಕೊಳ್ಳುವ ಮಾತು ಬೇಂದ್ರೆ ಅವರ ಪ್ರತಿಭೆಯ ದ್ಯೋತಕವಾಗಿದೆ.

ಶಿವರಾಮ ಕಾರಂತ :






“ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಬರೆಯದ ವಿಷಯವಿಲ್ಲ”, ‘ಕಾರಂತರು ಒಬ್ಬ ವ್ಯಕ್ತಿಯಲ್ಲ ಅವರೊಂದು ಸಂಸ್ಥೆ; ‘ಶಿವರಾಮ ಕಾರಂತರು ನಡೆದಾಡುವ ವಿಶ್ವಕೋಶ’ ಮುಂತಾದ ಮಾತುಗಳು ಕಾರಂತರನ್ನು ಕುರಿತು ಬರವಣಿಗೆಯಲ್ಲಿ ಈಗಾಗಲೇ ಕ್ಲೀಶೆಗಳಾಗಿ ಹೋಗಿವೆ. ಕಾರಂತರ ವೈಶಿಷ್ಟ್ಯವೆಂದರೆ ತಮ್ಮ ಬಗ್ಗೆ ಆಗಿಂದಾಗೆ ಬರುವ ಹೊಗಳಿಕೆ ತೆಗಳಿಕೆಗಳಿಗೆ ಮನಸ್ಸು ಕೊಡದೆ ತಮ್ಮ ಕೆಲಸವನ್ನು ಶ್ರದ್ಧೆಯಿಂದ, ಏಕಾಗ್ರತೆಯಿಂದ ಮಾಡಿಕೊಂಡು ಹೋಗುವದು.


ಕನ್ನಡದ ಪ್ರಸಿದ್ದ ಕಾದಂಬರಿಕಾರರಾದ ಡಾ. ಶಿವರಾಮ ಕಾರಂತರ ದಿನಾಂಕ ೧೦-೧೦-೧೯೦೨ರಂದು ದಕ್ಷಿಣ ಕನ್ನಡ ಜಿಲ್ಲೆಯ ‘ಕೋಟ’ದಲ್ಲಿ ಜನಿಸಿದರು. ಸಾಹಿತ್ಯ, ಕಲೆ, ವಿಜ್ಞಾನ ಮತ್ತು ಯಕ್ಷಗಾನ ಹೀಗೆ ಹಲವಾರು ಪ್ರಕಾರಗಳಲ್ಲಿ ಅವರು ಕೃತಿ ರಚನೆ ಮಾಡಿದ್ದಾರೆ.ಮರಳಿ ಮಣ್ಣಿಗೆ, ಅಳಿದ ಮೇಲೆ, ಜೋಮನ ದುಡಿ, ಮೂಕಜ್ಜಿಯ ಕನಸುಗಳು ಅವರ ಜನಪ್ರಿಯ ಕಾದಂಬರಿಗಳು. ಕಿಸಾಗೋತಮಿ, ಮುಕ್ತದ್ವಾರ, ಬುದ್ಧೋದಯ ಅವರ ಗೀತನಾಟಕಗಳು. ಯಕ್ಷಗಾನ, ಬಯಲಾಟ, ಕರ್ನಾಟಕದಲ್ಲಿ ಚಿತ್ರಕಲೆ ಮತ್ತು ಭಾರತೀಯ ಶಿಲ್ಪಯುತರು ಕಲಾ ಜಗತ್ತಿಗೆ ನೀಡಿದ ಅಪೂರ್ವ ಗ್ರಂಥಗಳು.


‘ಅಬೂವಿನಿಂದ ಬರಾಮಕ್ಕೆ’, ‘ಪಾತಳಕ್ಕೆ ಪ್ರಯಾಣ’, ‘ಪಶ್ಚಿಮ ಘಟ್ಟಗಳು’, ಇವರ ಪ್ರವಾಸಕಥಾನಗಳಾಗಿದ್ದು, “ಹುಚ್ಚು ಮನಸ್ಸಿನ ಹತ್ತು ಮುಖಗಳು” ಮತ್ತು ಸ್ಮೃತಿ ಪಟಲದಿಂದ ಆತ್ಮ ಕಥನಗಳಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಸ್ಪೀಡಿಶ್ ಅಕಾಡೆಮಿ, ಪಾರಿತೋಷಕ, ಭಾರತೀಯ ಜ್ಞಾನಪೀಠ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದುಕೊಂಡ ಕಾರಂತರು ‘ಚಲಿಸುವ ವಿಶ್ವಕೋಶ’, ‘ಕಡಲ ತೀರದ ಭಾರ್ಗವ’ರೆಂದೂ ಹೆಸರುವಾಸಿಯಾಗಿದ್ದಾರೆ.


ಮಾಸ್ತಿ ವೆಂಕಟೇಶ ಅಯ್ಯಂಗಾರ :




ಕನ್ನಡ ಸಾಹಿತ್ಯ ಪರಂಪರೆಯ ನಿರ್ಮಾಪಕರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಒಬ್ಬರು. ಅವರು ೬-೦೬-೧೮೯೧ರಲ್ಲಿ ಕೋಲಾರ ಜಿಲ್ಲೆಯ ‘ಮಾಸ್ತಿ’ ಗ್ರಾಮದಲ್ಲಿ ಹುಟ್ಟಿದರು.


ಮಾಸ್ತಿಯವರ ಕಥಾಸಾಹಿತ್ಯದಲ್ಲಿ ‘ಚೆನ್ನಬಸವನಾಯಕ’ ಮತ್ತು ‘ಚಿಕವೀರ ರಾಜೇಂದ್ರ’ ಕಾದಂಬರಿಗಳು ಶಿಖರ ಪ್ರಾಯಗಳಾಗಿವೆ. ಇವು ಕ್ರಮವಾಗಿ ೧೯೪೯ ಮತ್ತು ೧೯೫೬ರಲ್ಲಿ ಪ್ರಕಟವಾಗಿವೆ. ಇವೆರಡೂ ಐತಿಹಾಸಿಕ ಕಾದಂಬರಿಗಳು. ಮಾಸ್ತಿ ವೆಂಕಟೇಶ ಅಯ್ಯಂಗಾರ ಸಾಕಷ್ಟು ಕಾವ್ಯಗಳನ್ನು ಬರೆದಿದ್ದಾರೆ. ಅವರ ಕಾವ್ಯಗಳಲ್ಲಿ ‘ಶ್ರೀನಿವಾಸ ದರ್ಶನ’, ‘ಪ್ರಕೃತಿ ಸೌಂದರ್ಯ’, ‘ಕನ್ನಡ ಪ್ರೇಮ’, ನಾಡುನುಡಿ ವ್ಯಕ್ತಿಗಳಿಗೆ ಸಂಬಂಧಿಸಿದ ರಚನೆಗಳು ಭಾವಗೀತೆಗಳಲ್ಲಿ ಎದ್ದು ಕಾಣು
ತ್ತವೆ. ಇವರ ಕಾವ್ಯ ಸರಳವಾದುದು, ಸುಂದರವಾದುದು.


ಮಾಸ್ತಿಯವರ ಸಾಹಿತ್ಯದಂತೆ ಅವರ ಬದುಕು ದೊಡ್ಡದು. ಅವರ ಬದುಕು ಒಂದು ಮಹಾಕೃತಿ. ಅವರ ಬದುಕಿಗೂ, ಬರಹಕ್ಕೂ ಅಂತರ ಕಡಿಮೆ. ಬದುಕಿದಂತೆ ಬರೆಯಬೇಕು ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ. ಕನ್ನಡಕ್ಕೆ ಅಖಿಲ ಭಾರತ ಖ್ಯಾತಿ ದೊರಕಿಸಿಕೊಟ್ಟ ಕೀರ್ತಿ ಅವರದು.


ಡಾ.ವಿನಾಯಕ ಕೃಷ್ಣ ಗೋಕಾಕ:


ಕವಿ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಶಿಕ್ಷಣ ತಜ್ಞ ವಿನಾಯಕ ಕೃಷ್ಣ ಗೋಕಾಕರು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಕೃಷ್ಣರಾಯರು ಇವರ ತಂದೆ. ಶಾರದದೇವಿ ಇವರ ಪತ್ನಿ. ಸವಣೂರು ಧಾರವಾಡದಲ್ಲಿ ವಿದ್ಯಾಭ್ಯಾಸ ೧೯೯೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ ಹಾಗೂ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದರು.
ಗೋಕಾಕರು ನವ್ಯಕಾವ್ಯದ ಅಧ್ವರ್ಯಗಳಲ್ಲೊಬ್ಬರು. ಪರಂಪರೆಯಲ್ಲಿ ಉತ್ತಮವಾದದನ್ನು ಉಳಿಸಿಕೊಂಡು ನವ್ಯತೆಯನ್ನು ಪ್ರತಿಪಾದಿಸಿ ನವ್ಯತೆಯನ್ನು ಸಾಧಿಸಿದರು. ಇವರ “ತ್ರಿವಿಕ್ರಮರ ಆಕಾಶಗಂಗೆ” ಬಾಲ್ಯ ಯೌವನ ದೈವಭಕ್ತಿ ಸೌಂದರ್ಯಗಳಿಂದ ವಿವರಿಸುವ ಕಾವ್ಯ ಇಂದಲ್ಲ ನಾಳೆ ಕೃತಿ ಹೊರದೇಶಗಳ ಸಂಚಾರದಿಂದ ಅಲ್ಲಿನ ಸಂಸ್ಕ್ರತಿಯನ್ನು ಬಣ್ಣಿಸುತ್ತದೆ. ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು ಸಾಹಿತ್ಯದಲ್ಲಿ ಪ್ರಗತಿ ನವ್ಯತೆ ಹಾಗು ಕಾವ್ಯ ಜೀವನ


ವಿಮರ್ಶಾಸಂಕಲನಗಳು ಗೋಕಾಕರು ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲೀಷಿ
ನಲ್ಲೂ ಸಾಹಿತ್ಯ ರಚನೆ ಮಾಡಿದ್ದಾರೆ. ದಿ ಸಾಂಗ್ ಆಫ್ (ಹೈ)ಲೈಫ್,ಇನ್ ಲೈಫ್ ಚೆಂಪಲ್ ಇವರ ಇಗ್ಲೀಷ್ ಕವನಗಳು. ಇದಲ್ಲದೆ ಭಾರತ ಸಂಸ್ಕ್ರತಿ, ಸೌಂದರ್ಯ ಮಿಮಾಂಸೆ ಕನ್ನಡಸಾಹಿತ್ಯಚರಿತ್ರೆಗಳನ್ನು ಕುರಿತು ಸರ್ವಜ್ಞ ಬೇಂದ್ರೆ ಮುಂತಾದ ಕನ್ನಡ ಕವಿಗಳ ಬಗೆಗೂ ಇಗ್ಲೀಷ್‌ನಲ್ಲಿ ಬರೆದಿದ್ದಾರೆ.


ಗೋಕಾಕರ ಮಹಾಸೇವೆಗೆ ಕನ್ನಡನಾಡು ವಿವಿಧ ಬಗೆಯಲ್ಲಿ ಗೌರವಿಸಿದೆ. ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
ರಾಗಿದ್ದರು. ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಅವರನ್ನು ಗೌರವಿಸಿದೆ.’೧೯೬೧’ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದೆ. “ಯೂನಿವರ್ಸಿಟಿಆಫ್ಪೆಸಿಪಿಕ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿವೆ. ‘ವಿನಾಯಕ ವಾಙ್ಮಯ ಅಭಿನಂದನ ಗ್ರಂಥವನ್ನು ಗೌರವ ಪೂರ್ವಕವಾಗಿ ಅರ್ಪಿಸಲಾಗಿದೆ. ಅವರ ಮಹಾಕಾವ್ಯ ಭಾರತ ಸಿಂಧು ರಶ್ಮಿಗೆ ೧೯೯೦ರ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ವಿನಾಯಕ ಕೃಷ್ಣ ಗೋಕಾಕ ಅವರು ಮುಂಬೈಯಲ್ಲಿ ೨೮-೪-೧೯೯೨ರಂದು ನಿಧನರಾದರು.






ಯು.ಆರ್. ಅನಂತಮೂರ್ತಿ :




ಪ್ರಸಿದ್ಧ ಕಾದಂಬರಿಕಾರ, ಕಥೆಗಾರ, ವಿಮರ್ಶಕರಾದ ಯು. ಆರ್. ಅನಂತಮೂರ್ತಿ ತೀರ್ಥಹಳ್ಳಿ ತಾಲೂಕು ಮೇಳಗೆ ಹಳ್ಳಿಯಲ್ಲಿ ೨೧-೧೨-೧೯೩೨ ರಂದು ಜನಿಸಿದರು. ರಾಜಗೋಪಾಲಚಾರ್ಯ ಇವರ ತಂದೆ. ಸತ್ಯಭಾಯಿ ತಾಯಿ. ಕೋಣಂದೂರು, ಮೇಳಗೆ, ತೀರ್ಥಹಳ್ಳಿಯಲ್ಲಿ ಪ್ರಾರಂಭದ ವಿಧ್ಯಾಭಾಸ, ಮೈಸೂರಿನಲ್ಲಿ ಬಿ.ಎ.ಆನರ್ಸ ಹಾಗೂ ಇಂಗ್ಲೀಷ ಎಂ. ಎ. ಅನಂತರ ಬರ್ಮಿಂಗ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಕೇರಳದ ಕೊಟ್ಟಾಯಂನ ಮಹಾತ್ಮಗಾಂಧಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ, ದೆಹಲಿಯ ಜವರಲಾಲ ನೆಹರೂ ವಿಶ್ವವಿದ್ಯಾಲಯ ಮೂದಲಾದ ಕಡೆಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿದ್ದರು. ಅನಂತಮೂರ್ತಿಯವರು ನ್ಯಾಷನಲ್ ಬುಕ್ ಟ್ರಸ್ಟ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.


೧೯೬೩ರಲ್ಲಿ ಅನಂತಮೂರ್ತಿ ‘ಭಾವಲಿ’ ಕವನ ಸಂಕಲನವನ್ನು ಪ್ರಕಟಿಸಿದರು. ಅನಂತರ ‘೧೫ ಪದ್ಯಗಳು’, ‘ಅಜ್ಜನ ಹೆಗಲಸುತ್ತುಗಳು’,’ಮಿಥುನ’, ಸಂಕಲನಗಳು ಪ್ರಕಟಗೊಂಡವು. ಅನಂತಮೂರ್ತಿಯವರು ಬರೆದಿರುವ ಏಕೈಕ ನಾಟಕ ‘ಆಹಾವನೆ’ ಇದುವರೆಗೆ ಅವರ ಏಳು ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿ ತಮ್ಮ ವಿಮರ್ಶಾ ಹಾಗೂ ವೈಚಾರಿಕ ಬರಹಗಳ ಮೂಲಕ ಕನ್ನಡ ಭಾಷೆಯನ್ನು ಸಮರ್ಥವಾಗಿ ಹದಗೊಳಿಸಿದ್ದಾರೆ. ನಾನು ಹಿಂದು ಬ್ರಾಹ್ಮಣ, ಮೀಸಲಾತಿ ಮುಂತಾದ ವಿಷಯಗಳ ಕುರಿತು ಇವರ ಅಭಿಪ್ರಾಯಗಳಾಗಿ ಪ್ರಾಥಮಿಕ ಶಿಕ್ಷಣ, ಕನ್ನಡ ಭಾಷೆಯ ಅಗತ್ಯ ಕುರಿತು ಇವರ ಭಾಷಣಗಳು ಇಂದಿಗೂ ಅಲ್ಲಲ್ಲಿ ಚರ್ಚಾ ವಿಷಯಗಳಾಗಿವೆ. ಇವರ ಕೆಲವು ಮಹತ್ವದ ಕೃತಿಗಳೆಂದರೆ ‘ಪೂರ್ವಾಪರ’, ‘ಆಕಾಶ ಮತ್ತು ಬೆಕ್ಕು’, ‘ಕ್ಲಿಪ್ ಜಾಯಿಂಟ್’, ‘ಎರಡು ದಶಕದ ಕತೆಗಳು’,‘ ದಿವ್ಯ’,‘ ಸಮಕ್ಷಮ’, ‘ಸನ್ನಿವೇಶ’, ‘ಪ್ರಜ್ಞೆ ಮತ್ತು ಪರಿಸರ’, ‘ಘಟ ಶ್ರಾದ್ಧ’, ಒಂದು ಕಾಲದ ಅಗ್ರಗಣ್ಯ ಲೇಖಕರ ಸಾಲಿನಲ್ಲಿ ನಿಲ್ಲುವ ಬಹುಮುಖಿ ವ್ಯಕ್ತಿತ್ವದ ಯು.ಆರ್.ಅನಂತಮೂರ್ತಿ ಕನ್ನಡ ಸಾಹಿತ್ಯದ ಮುಖ್ಯ ಲೇಖಕರು.


ಡಾ.ಗೀರಿಶ ಕಾರ್ನಾಡ್ :




ಗಿರೀಶ ಕಾರ್ನಾಡ್ ಮಹಾರಾಷ್ಟ್ರದಲ್ಲಿ ೧೯ ಮೇ ೧೯೩೮ರಲ್ಲಿ ಜನಿಸಿದರು. ತಂದೆ ಡಾ .ರಘುನಾಥ ಕಾರ್ನಾಡ್. ತಾಯಿ ಕೃಷ್ಣಾಬಾಯಿ. ಕಾರ್ನಾಡರು ಧಾರವಾಡ ಮತ್ತು ಮುಂಬೈಗಳಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಆಕ್ಸಫರ್ಡ್ ವಿಶ್ವವಿದ್ಯಾ


ಲಯದಿಂದ ಎಂ ಎ ಪದವಿ ಪಡೆದರು. ಕಾರ್ನಾಡರ ಮೊದಲ ಕೃತಿ ಯಯಾತಿ ನಾಟಕ- ೧೯೬೧ ಇದುವರೆಗೆ ಕಾರ್ನಾಡರು ೯ ನಾಟಕಗಳನ್ನು ಬರೆದಿದ್ದಾರೆ.ಕಾರ್ನಾಡರು ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿರುವರು. ಕನ್ನಡದ ಪ್ರಸಿದ್ಧನಾಟಕಕಾರ. ನಟ, ನಿರ್ದೇಶಕ, ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟ್ ಕೇಂದ್ರ ನಾಟಕ ಶಾಲೆಗಳ ನಿರ್ದೇಶಕರಾಗಿದ್ದರು. ೧೯೯೮ರ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಕಾರ್ನಾಡರು ಮೊದಲಿಗರು.


ಚಲನ ಚಿತ್ರ ಕ್ಷೇತ್ರಕ್ಕೆ ಕಾರ್ನಾಡರ ಕೊಡುಗೆ ಅಪಾರವಾದದ್ದು. ೬೦ ರ ದಶಕದಲ್ಲಿ ಅವರು ಅಭಿನಯಿಸಿದ ಸಂಸ್ಕಾರ ರಾಷ್ಟ್ರಪ್ರಶಸ್ತಿಯನ್ನು ಗಳಿಸಿದ್ದಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿತು. ಕನ್ನಡ ಚಿತ್ರರಂಗದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ರಂಗದಲ್ಲಿ ಮನ್ನಣೆ ಗಳಿಸಿತು. ಬಿ.ವಿ.ಕಾರಂತರೊಡಗೂಡಿ ಅವರು ನಿರ್ದೇಶಿಸಿದ ಚಿತ್ರಗಳು- ವಂಶ ವೃಕ್ಷ, ತಬ್ಬಲಿ ನಿನಾದೆ ಮಗನೆ. ಕಾರ್ನಾಡರು ನಿರ್ದೇಶಿಸಿದ ಒಂದಾನೊಂದು ಕಾಲದಲ್ಲಿ, ಕಾಡು. ಹಿಂದಿಯಲ್ಲಿ ಉತ್ಸವ್, ಚೆಲ್ವಿ, ಇತ್ತಿಚೆಗೆ ಕಾನೂರು ಹೆಗ್ಗಡತಿ, ಚಿತ್ರರಂಗದಲ್ಲಿ ಅಪಾರ ಯಶಸ್ಸು, ಹುಮ್ಮಸ್ಸನ್ನು ತಂದು ಕೊಟ್ಟಿವೆ. ಕಾರ್ನಾಡರ ಸಾಧನೆಗಳನ್ನು ಗಮನಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಗಿರೀಶ ಕಾರ್ನಾಡ್‌ರು ಸಿನಿಮಾ ಮತ್ತು ದೂರದರ್ಶನಗಳಲ್ಲಿ ಸ್ಟಾರ್ ವ್ಯಾಲ್ಯೂ ಇರುವ ಬುದ್ದಿಜೀವಿ. ಭಾರತೀಯ ಪ್ರಾತಿನಿಧಿಕ ಪ್ರತಿಭಾವಂತರಾಗಿ ವಿದೇಶಗಳಲ್ಲಿ ನಾಟಕ, ಭಾಷಣ, ಸಿನಿಮಾಗಳ ಮೂಲಕ ಸದಾ ಕ್ರೀಯಾಶೀಲವಾಗಿರುವ ವ್ಯಕ್ತಿತ್ವ ಕಾರ್ನಾಡರದು.




ಶಕುಂತಲಾ ಹಿರೇಮಠ ಬಿ.ಎ. ೧

ಚಬನೂರಿನ ಅಮೋಘ ಸಿದ್ಧ - ಹಿನ್ನೆಲೆ ಮತ್ತು ಆಚರಣೆ





ವಿಜಾಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಚಬನೂರಿನಲ್ಲಿ ನೆಲೆಸಿರುವ ಆರಾಧ್ಯದೈವ ಅಮೋಘಸಿದ್ಧೇಶ್ವರ ಪರಮೇಶ್ವರನ ಮಗ, ಪಾರ್ವತಿಯ ಬೆವರಿನಿಂದ ಮಣ್ಣಲ್ಲಿ ಜನಿಸಿದ ಮಣ್ಣಿನ ಮಗ.


ಪಾರ್ವತಿ ಜಳಕ ಮಾಡುವಾಗ ಬಾಗಿಲ ಕಾಯುತ್ತಿದ್ದ ಬಾಲಕ ಪರಮೇಶ್ವರನಿಗೆ ಒಳಗೆ ಬಿಡಲಿಲ್ಲ . ಸಿಟ್ಟಿಗೆದ್ದ ಶಿವ ರುಂಡ ಕತ್ತರಿಸಿದ. ರುಂಡ ಹಾರಿ ಮರದ ಕಂಟಿಯ ಕೆಳಗೆ ಬೀಳುತ್ತದೆ. ಆ ಕಂಟಿಗೆ ಒಡೆಯರ ಕಂಟಿ ಎಂದು ಪ್ರತೀತಿ ಇದೆ. ಪಾರ್ವತಿಯ ಬೇಡಿಕೆ ಯಂತೆ ಆ ರುಂಡಕ್ಕೆ ಜೀವ ತುಂಬುತ್ತಾನೆ. ಇಬ್ಬರೂ ಕೂಡಿ ಸಿದ್ಧ ಎಂದು ನಾಮಕರಣ ಮಾಡುತ್ತಾರೆ.


ಆ ಸಿದ್ಧನೆ ಇಲ್ಲಿ ನೆಲೆಸಿ ‘ಆಮೊಗ ಸಿದ್ಧ’ ನಾಗುತ್ತಾನೆ; ಆನೆಮೊಗ ಸಿದ್ಧ ‘ಅಮೋಘ ಸಿದ್ಧ’ನಾಗಿ ರಲೂಬಹುದು.


ಚಬನೂರಿನಲ್ಲಿ ಈ ದೇವರನ್ನು ಪ್ರತಿಷ್ಠಾಪಿಸಿ ಊರಿನ ಗೌಡರು ಅದನ್ನು ಪೂಜಿಸುತ್ತಾ ಬಂದರಂತೆ. ಆದರೆ ಯಾವುದೋ ಒಂದು ಸಂದರ್ಭದಲ್ಲಿ ಅಪಶಕುನಗಳಾಗಿ ಗೌಡರು ನಡೆಸುವ ಪೂಜೆ ನಿಲ್ಲುತ್ತದೆ. ಹಿಜೇರಿ ನಿಂಗ ಎಂಬವ್ಯಕ್ತಿ (ಹಿರಕಾರ ) ಈ ದೇವರನ್ನು ಒಡೆಯರು ಪೂಜಿಸಬೇಕು ಎಂದಾಗ ಮುಧೋಳ ತಾಲೂಕಿನ ಬಿದರಿಯಿಂದ ಒಡೆಯರನ್ನು ಕರೆತರುತ್ತಾರೆ.ಅಂದಿನಿಂದ‘ಹೇಳಿಕೆ ‘ಪ್ರಾರಂಭವಾಗಿದೆ. ಮೊದಲ ಸಲ ಡವಳರ ಮುತ್ಯಾನಿಗೆ ಮುಖವಾಡ ಕಟ್ಟಿ ಹೇಳಿಕೆ ಹೇಳಿಸಿದರಂತೆ. ಅಂದಿನಿಂದಲೇ ‘ಕಟಾಂಬಲಿ’ ಪದ್ಧತಿ ರೂಢಿಗೆ ಬಂದಿದೆ. ಮೊದಲು ಈ ಕಟಾಂಬಲಿ ನುಚ್ಚನ್ನು ಕೇವಲ ೭ ಗಡಿಗೆ ಮಾಡುತ್ತಿದ್ದರು. ಈಗ ೨೫-೩೦ ಕ್ಕೇರಿದೆ.


ಹೀಗೆ ಪೂಜೆಗೆಂದು ಬಂದವನೇ ಮಲಿಕಾರಪ್ಪ. ಇವನ ನಂತರ ಪೂಜೆಯನ್ನು ಇವನ ಮಕ್ಕಳು ಮುಂದುವರೆಸುತ್ತಾರೆ. ಮಲ್ಲಪ್ಪ , ಸಿದ್ರಾಮಪ್ಪ ಇವರ ತಲೆಮಾರಿನ ಅನಂತರ ಸಿದ್ದಪ್ಪ ಮುತ್ಯ ಶಿವುಮುತ್ಯಾ ಮತ್ತು ಪ್ರಕಾಶ ಮುತ್ಯಾ ಮುಂದುವರೆಸುತ್ತಾರೆ.


ಹೂ ತರುವ ಆಚರಣೆ :


ವಿಜಾಪುರಕ್ಕೆ ಹೋಗಿ ಅಲ್ಲಿಂದ ಹೂ ತರಬೇಕು. ಹೋಗುವಾಗ ಮಡಿ ಹುಡಿಯಿಂದ ಹೋಗಬೇಕು. ದಾರಿಯಲ್ಲಿ ಸಿಕ್ಕ ವಸ್ತುಗಳು ಹೇಳಿಕೆಯ ಮುನ್ಸೂಚನೆ ನೀಡುತ್ತವೆಯಂತೆ. ಸಾಮಾನ್ಯವಾಗಿ ಶೇಂಗಾ, ಬುತ್ತಿ,ಈರುಳ್ಳಿ, ಹಣ ಸಿಕ್ಕಿರುತ್ತವೆ. ಮೊದಲಸಾರೆ ವಿಜಾಪುರದಿಂದ ಹೂ ತಂದವರೆಂದರೆ ಕೊಂಡಗುಳಿ ನಿಂಗಪ್ಪ. ಅನಂತರ ಬಸಪ್ಪ ಮುಂದುವರಿಸಿದ್ದನು. ಹೂವಿಗೆ ಹೋಗುವಾಗ ಜಾತ್ರೆನಡೆಯುವಾಗ, ಹೇಳಿಕೆ ಹೇಳುವಾಗ ಡೊಳ್ಳಿನ ಮಜಲು ನಡೆಯಲೇಬೇಕು. ಹೂವಿಗೆ ಹೋಗುವಾಗಿನ ಚಾಜನ್ನು ಸ್ವಂತಕ್ಕೆ ಬಳಸಿಕೊಂಡ ಬಸಪ್ಪನಿಗೆ ಸ್‌ವು ಸಂಭ


ವಿಸುತ್ತದೆ. ಅದೇ ವರ್ಷ ಹೇಳಿಕೆ ಈ ರೀತಿಯಾಗುತ್ತದೆ. ‘ಕುರುಬ ಇಸಾಬ ಮುರದನಲೇ! ’ ಈಗ ಬಾಳಪ್ಪ, ಮಲ್ಲಪ್ಪ, ತಿಪ್ಪಣ್ಣ ಮುಂದುವರೆಸಿಕೊಂಡು ನಡೆದಿದ್ದಾರೆ.










ಕಟಾಂಬಲಿ :


ಈ ಜಾತ್ರೆಯಲ್ಲಿ ಕಟಾಂಬಲಿ ಮಾಡುವ ವಿಧಾನ ವಿಶಿಷ್ಟವಾದುದಾಗಿದೆ. ಸುಂಕಸಹಿತವಾದ ಜೋಳವನ್ನು ಕುಟ್ಟಿ ಜೋಳದ ಅಕ್ಕಿ ತಯಾರಿಸುತ್ತಾರೆ. ಹೊಸ ಗಡಿಗೆಗಳಲ್ಲಿ ಮಾತ್ರ ಈ ಕಟಾಂಬಲಿ ತಯಾರಿಸುತ್ತಾರೆ. ಕಾಕುಳ್ಳು ತಂದು ಅದರ ಬೆಂಕಿಯಲ್ಲಿ ನಿಧಾನವಾಗಿ ಬೇಯಿಸು ತ್ತಾರೆ. ಇಲ್ಲವಾದರೆ ಗಡಿಗೆ ಬಿಚ್ಚಿ ಕಟಾಂಬಲಿ ಚೆಲ್ಲಿಹೋಗುತ್ತದೆ.


ಹೇಳಿಕೆಯಾಗುವದಕ್ಕಿಂತ ಮುಂಚೆ ಈ ಕಟಾಂಬಲಿಯನ್ನು ಎಲ್ಲರಿಗೂ ಪ್ರಸಾದರೂಪದಲ್ಲಿ ಹಂಚುತ್ತಾರೆ. ಅಂಬಲಿಗೆ ಹದವಾದ ರೀಯಲ್ಲಿ ಕುಸುಬೆ ಎಣ್ಣೆ ಸೇರಿಸಿ ಉಂಡಿಯಂತೆ ಮಾಡಿ ಕೈಯಲ್ಲಿಯೇ ಪ್ರಸಾದವನ್ನು ನೀಡುತ್ತಾರೆ. ಪ್ರಸಾದದ ಜೊತೆಗೆ ಉಳ್ಳಾಗಡ್ಡಿ (ಈರುಳ್ಳಿ)


ಇರಲೇಬೇಕು.


ಹೇಳಿಕೆ :


ಈಗ ಹೇಳಿಕೆ ಹೇಳುತ್ತಿರುವವರು ಮುದುಕಪ್ಪ ಮುತ್ಯಾ. ಹೇಳಿಕೆ ನಡೆಯುವ ಸಮಯ ಬೆಳಗಿನ ೪.೦೦ ಗಂಟೆಗೆ. ಡೊಳ್ಳಿನ ಮಜಲಿನ ಆರ್ಭಟದಲ್ಲಿ ಅವರೊಂದಿಗೆ ಕುಣಿಯುತ್ತ ಕುಣಿಯುತ್ತ ಬೆತ್ತದಿಂದ ಏಟು ಹಾಕುತ್ತ ಅವರ ಡೊಳ್ಳಿನ ಮೇಲೆ ಹತ್ತಿ ಕೂಗಿ ಹೇಳಿಕೆಯನ್ನು ಹೇಳಲಾಗುತ್ತದೆ. ಹೇಳಿಕೆಯ ವೇಳೆ ಎಂತಹ ಗದ್ದಲವಿದ್ದರೂ ತಕ್ಷಣ ನಿಶ್ಶಬ್ದವಾಗುತ್ತಾರೆ. ಹೇಳಿಕೆ ಹೇಳುವಾಗ ಇಬ್ಬರು ಮುಖವಾಡ ಧರಿಸಿರುತ್ತಾರೆ. ಹಿರಿಮುಖ ಧರಿಸಿದವರು ಹೇಳಿಕೆ ನೀಡುತ್ತಾರೆ.


ಈ ಹೇಳಿಕೆಯನ್ನು ಮೈಲಾರ ದೇವರ ಕಾರ್ಣಿಕದಂತೆ ನಂಬಲಾಗುತ್ತದೆ. ಇಲ್ಲಿ ಮೂರು ವಿಷಯಗಳಿಗೆ ಸಂಬಂಧಿಸಿದ ಮುನ್ಸೂಚನೆ ಇರುತ್ತದೆ.


ರಾಜಕೀಯ,ಮುಂಗಾರು ಮತ್ತು ಹಿಂಗಾರು.ಒಂದೇ ನಿಮಿಷದಲ್ಲಿ ಹೇಳಿಕೆ ಮುಗಿದು ಬಿಡುತ್ತದೆ. ಇಲ್ಲಿ ೧೯೮೪ ರಿಂದ ನೀಡಿದ ಹೇಳಿಕೆಗಳನ್ನು ಸಂಗ್ರಹಿಸಿಲಾಗಿದೆ.


೨೮-೦೫-೧೯೮೪ ಎಲೆ ಎಚ್ಚರ ಬಲು ಎಚ್ಚರ


ಮುಂಗಾರಿ ಮರಿಯಲೆ


ಹಿಂಗಾರಿ ಶರಿ ಚೆಲ್ಲಾಡಿನಲೆ


೧೭-೦೫-೧೯೮೫ ಹುಶಿ ನುಡಿದವನಿ ಖುಷಿಯಿಂದ ಕೋಂಡಾಡಿನಲೆ ಎಚ್ಚರ


ಮುಂಗಾರಿ ಬಡಿ


ಹಿಂಗಾರಿ ಚೆಲ್ಲಾಡಿನಲೆ


೦೫-೦೬-೧೮೮೬ ಮನಸಿನಾಗ ಮಾಡಿದ್ದು ಕನಸಿನಾಗ ಕಂಡಿನಲೆ


ಮುಂಗಾರಿ ಮಡಿಯಲಿ


ಹಿಂಗಾರಿ ಉಡಿಯಾರ ಸೋಶಿ ಬಿತ್ತಿನಲೆ


೨೨-೦೫ ೧೯೮೮ ನನ್ನ ಮರತವಗ ಮುರದ ಮುಟಗಿ ಮಾಡಿನಲೆ


ಮುಂಗಾರಿ ಬಂಗಾರ


ಹಿಂಗಾರಿ ಹುದುಗಿನಾಗ


೦೧-೦೬-೧೯೮೯ ಕುರುಬನ ಕುರುಹು ಹುಡುಕಬ್ಯಾಡಲೆ


ಮುಂಗಾರಿ ಕತ್ತಲಾಗಿ ಹೋತಲೆ


ಹಿಂಗಾರಿ ನಕ್ಷತ್ರ ಹೊಳದಂಗ ಹೊಳಿತೈತಲೆ


೨೨-೦೫ ೧೯೯೦ ಆಡು ಕಂದನ್ನ ಕಡ್ಯಾಕ ಮಾಡಿನಲೆ ನೀವು ಬಲು ಎಚ್ಚರಲೆ


ಮುಂಗಾರಿ ಮುತ್ತಾಗಿ ಹೋಯಿತದೆ.


ತುತ್ತ ಸಂದಿ ಹುಡುಕ್ಯಾರಲೆ


೧೦-೦೬-೧೯೯೧ ಮುಂದಿನವರು ಬಹು ಎಚ್ಚರಲೆ


ಮುಂಗಾರಿ ಮುತ್ತು


ಹಿಂಗಾರಿ ಖುಷಿ ಬಂದಂಗ ಬೆಳದಿರಲೆ






೨೬-೦೫-೧೯೯೩ ಹಿಂದೆ ಮುಂದೆ ಮಾತಾಡಿದವಗ ಎಚ್ಚರಲೆ


ಮುಂಗಾರಿ ಮುಂದಾತು


ಹಿಂಗಾರಿ ಹಿಂದಿನಿಂದ ಬೆಳದಿರಲೆ


೦೭-೦೬-೧೯೯೪ ಹಾಲಿನಂತಹ ಮನುಷ್ಯನಿಗೆ ಬೆಳ್ಳಿ ಬಂಗಾರ ಕೊಟ್ಟಿನಲೆ


ಮುಂಗಾರಿ ಸಾಕಷ್ಟು ಕೊಟ್ಟನಲೆ


ಹಿಂಗಾರಿ ತೊಟ್ಟಿಲನಾಗ ಇಟ್ಟು ತೂಗಿನಲೆ


೩೧-೦೫೧೯೯೫ ನನ್ನ ಮ್ಯಾಲ ವಿಶ್ವಾಸ ಇಟ್ಟು ನಡಿರಲೆ


ಮುಂಗಾರಿ ನಿಮ್ಮ ಇಷ್ಟದಂತೆ


ಹಿಂಗಾರಿ ಬೇಕಾದಷ್ಟು ಕೊಟ್ಟಿನಲೆ


೧೯-=೦೫-೧೯೯೬ ಹುಸಿ ನುಡಿದವನಿಗೆ ಖುಷಿಯಿಂದ ಕೊಂಡಾಡನಲೆ


ಮುಂಗಾರಿ ಚೀಲತುಂಬ ಚೆಲ್ಲಾಡನಲೆ


ಹಿಂಗಾರಿ ತೊಂಬತ್ತು ಪೈಸೆ ಕೊಟ್ಟಿನಲೆ


೦೩-೦೬-೧೯೯೭ ನನ್ನ ಮ್ಯಾಲ ನಂಬಿಗಿ ಇಟ್ಟವಗ ಬಂಗಾರ ಕೊಟ್ಟಿನಲೆ


ಮುಂಗಾರಿ ಎಪ್ಪತ್ತೈದು ಪೈಸೆ


ಹಿಂಗಾರಿ ಬಂಗಾರ ಕೊಟ್ಟಿನಲೆ


೨೩-೦೫-೧೯೯೮ ನನಗ ನಡಕೊಂಡವನಿಗೆಬೇಕಾದ್ದ ಕೊಟ್ಟಿನಲೆ


ಮುಂಗಾರಿ ಉಡಿತುಂಬ ಚೆಲ್ಲಾಡಿನಲೆ


ಹಿಂಗಾರಿ ಬೇಕಾದಷ್ಟ ಬಿತ್ತಿ ಬೇಕಾದ ಷ್ಟ ಬೆಳಕೊಳ್ಳರಲೆ






೧೩-೦೫-೧೯೯೯ ಕತ್ತಿಯಂಗ ಮಾಡಿದವರ ಲತ್ತಿ ಪೆಟ್ಟ ತಿಂತಿರಲೆ


ಮುಂಗಾರಿ ನಿಟ್ಟಿನಮ್ಯಾಲೆ ನಿಟ್ಟು ಕಟ್ಟಿನಲೆ


ಹಿಂಗಾರಿ ಸಾಕಷ್ಟ ಕೊಟ್ಟಿನಲೆ


೩೦-೦೫-೨೦೦೦ ನನ್ನ ನಂಬಿದವರಿಗೆ ಬಂಗಾರ ಹಾಸಿನಲೆ


ಮುಂಗಾರಿ ಅರ್ಧಲೆ


ಹಿಂಗಾರಿ ತೊಂಬತ್ತ ಪೈಸಾ ಕೊಟ್ಟಿನಲೆ


೨೦-೦೫-೨೦೦೧ ಕತ್ತಿ ಹಂಗ ಮಾಡಿದವರು ಲತ್ತಿ ಪೆಟ್ಟ ತಿಂತಿರಲೆ


ಮುಂಗಾರಿ ಮೂವತ್ತೈದು ಪೈಸಾ


ಹಿಂಗಾರಿ ಸಾಕಷ್ಟು ಕೊಟ್ಟಿನಲೆ


೧೦-೦೬-೨೦೦೨ ನನ್ನ ನಂಬಿದವನ ಬೆನ್ನ ಹಿಂದ ಅದಿನಲೆ


ಮುಂಗಾರಿ ಅರವತ್ತು ಪೈಸೆ


ಹಿಂಗಾರಿ ಚೀಲತುಂಬ ಚೆಲ್ಲಾಡಿನಲೆ


೩೧-೦೫-೨೦೦೩ ನೆರೆ ಹಾಲಿನಂಗ ಇದ್ದವಗ ಬೆಳ್ಳಿ ಬಂಗಾರಲೆ


ಮುಂಗಾರಿ ಹಿಂದಿನಿಂದ ಬೆಳದಿರಲೆ


ಹಿಂಗಾರಿ ಚೀಲ ತುಂಬಿ ಓಣಿ ಓಣಿ ಚೆಲ್ಲಾಡಿರಲೆ


೧೯-೦೫-೨೦೦೪ ಕತ್ತಿ ಹಂಗ ಮಾಡಿದವನಿಗೆ ಲತ್ತಿ ಪೆಟ್ಟ ತಿಂತಿರಲೆ


ಮನಸ ಮಾಡಿ ಮಾಡಿ ಬೇಕಾದ ಬೀಜ ಬಿತ್ತಿ ಬೆಳಿರಲೆ


ಹಿಂಗಾರಿ ಸಾಕಷ್ಟು ಕೊಟ್ಟಿನಲೆ






೦೪-೦೬-೨೦೦೫ ನನ್ನ ಮರಾವಗ ಇಂಗಳ ಗೂಟಲೆ


ಮುಂಗಾರಿ ಹಿಂದಲಿಂದ ಬೆಳದಿರಲೆ


ಹಿಂಗಾರಿ ಬೇಕಾದಷ್ಟ ಕೊಟ್ಟಿನಲೆ


೨೭-೦೫-೨೦೦೬ ನೊರೆ ಹಾಲಿನಂತ ಮನಸ ಇದ್ದವಗ ಬೆಳ್ಳಿ ತೊಟ್ಟಿಲದಾಗ ತೂಗಿನಲೆ


ಮುಂಗಾರಿ ಮುತ್ತಾಗಿ ಹೋಯಿತಲೆ


ಹಿಂಗಾರಿ ಎಂಬತ್ತೊಂಬತ್ತು ಪೈಸಾ ಕೊಟ್ಟಿನಲೆ


೧೭-೦೫-೨೦೦೭ ನಾ ಅಂದವಗ ನರಕಕ್ಕ ಕಳಿಸಿನಲೆ


ಮುಂಗಾರಿ ಅರ್ಧ ಕೊಟ್ಟಿನಲೆ


ಹಿಂಗಾರಿ ಹರಿ ಹರಿ ಚೆಲ್ಲಾಡನಲೆ


೧೬-೦೫-೨೦೦೯ ನನ್ನ ನಂಬಿ ನಡದವಗ ಬೆನ್ನ ಹಿಂದ ಅದಿನಲೆ


ಮುಂಗಾರಿ ಉಡಿತುಂಬ ಚೆಲ್ಲಾಡಿನಲೆ


ಹಿಂಗಾರಿ ಜೋಳ ಓಣಿ ಓಣಿ ಚೆಲ್ಲಾಡಿನಲೆ


*****


ಮಲ್ಲಿಕಾರ್ಜುನ ಹಿಪ್ಪರಗಿ ಬಿ.ಎ.೧

ಗೋಟಖಿಂಡ್ಕಿ ದೇವಿ ಜಾತ್ರೆ

ನಮ್ಮೂರ ದೇವಿ ಪುರಾಣ ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೋಟಖಿಂಡ್ಕಿ ಗ್ರಾಮ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅಂತಹ ವೈಶಿಷ್ಟ್ಯಗಳಲ್ಲಿ ೧೪೮ ವರ್ಷ ಗಳಿಂದ ನಡೆದುಕೊಂಡು ಬರುತ್ತಿರುವ ದೇವಿ ಪುರಾಣವೂ ಒಂದು.




ಪ್ರತಿ ವರ್ಷ ಮಹಾನವಮಿ ಅಮವಾಸ್ಯೆಯಂದು ಪ್ರಾರಂಭವಾಗಿ ದೀಪಾವಳಿ ಅಮವಾಸ್ಯೆಯ ಅನಂತರ ಬರುವ ತ್ರಯೋದಶಿಯಂದು ಮುಕ್ತಾಯವಾಗುತ್ತದೆ. ಸುಮಾರು ಒಂದುವರೆ ತಿಂಗಳ ವರೆಗೆ ನಡೆಯುವ ಈ ಕಾರ್ಯಕ್ರಮ ಜಾತ್ರೆಯೊಂದಿಗೆ ಮುಕ್ತಾಯವಾಗುತ್ತದೆ. ಚಿದಾನಂದ ಅವಧೂತರಿಂದ ರಚಿಸಲ್ಪಟ್ಟ ‘ಶ್ರೀ ಮನ್ ಮಹಾದೇವಿ ಮಹಾತ್ಮೆ ’ಪುರಾಣವನ್ನು ಪಠಿಸಲಾಗುತ್ತದೆ.



ಗ್ರಾಮದ ಕುಲಕರ್ಣಿ ಮನೆತನದ ಚಿಂತಪ್ಪ ಮುತ್ಯಾ ಅವರು ೧೦೦ ವರ್ಷಗಳ ಕಾಲ ತಮ್ಮ ಮನೆಯಲ್ಲಿಯೇ ಈ ಪುರಾಣವನ್ನು ನಡೆಸಿಕೊಂಡು ಬಂದಿದ್ದಾರೆ. ಪಾರಂಭದಿಂದಲೂ ಒಂದೇ ಪುರಾಣ ಪುಸ್ತಕವನ್ನು ಬಳಸುತ್ತ ಬಂದಿದ್ದಾರೆ.


ಈ ಪುರಾಣ ಕೃತಿಯ ಬಗ್ಗೆ ಅನೇಕ ವದಂತಿಗಳಿವೆ. ಈ ಪುರಾಣಕ್ಕಾಗಿ ಸಂಗ್ರಹಿಸಿದ ಹಣ ಬಳಸಿದ ವ್ಯಕ್ತಿ ಆರ್ಥಿಕವಾಗಿ ಸರ್ವ ನಾಶವಾಗಿ ಊರನ್ನೆ ಬಿಡಬೇಕಾದ ಪ್ರಸಂಗ ಬಂತಂತೆ. ಇನ್ನೊಂದು ಊರಿಗೆ ಪ್ಲೇಗ್ ಬಂದಾಗ ಊರಹೊರಗೆ ಗುಡಿಸಲಲ್ಲಿ ಈ ಗ್ರಂಥ ಇಟ್ಟು ಪೂಜಿಸುತ್ತಿದ್ದರಂತೆ. ಆಕಸ್ಮಿಕವಾಗಿ ಬೆಂಕಿ ಬಿದ್ದು ಗುಡಿಸಲು ಸುಟ್ಟರೂ ಈ ಗ್ರಂಥಕ್ಕೇನೂ ಆಗಿರಲಿಲ್ಲವಂತೆ.


ಚಿಂತಪ್ಪ ಮುತ್ಯಾ ಊರು ಬಿಡುವ ಮುಂಚೆ ಈ ಗ್ರಂಥವನ್ನು ಊರ ಹಿರಿಯರಾದ ಶಂಕರಗೌಡ ಗುರುಸಂಗಪ್ಪಗೌಡ ಕೋಣ್ಯಾಳ ಇವರಿಗೆ ಒಪ್ಪಿಸಿ ಪುರಾಣ ಪಠಣ ಮುಂದುವರೆಸುವಂತೆ ತಿಳಿಸಿದರಂತೆ.


ಅದನ್ನು ಪಾಲಿಸಲು ಊರ ಮುಂದಿನ ಹೊಲದಲ್ಲಿ ಸಚ್ಚಿದಾನಂದ ಮಠ ಕಟ್ಟಿಸಿ ಚಂದ್ರಶೇಖರ ಸ್ವಾಮಿಗಳಿಂದ ಪುರಾಣ ಪ್ರವಚನವನ್ನು ಮುಂದುವರೆಸಿದರಂತೆ.


೧೯೬೪ ಇಸ್ವಿಯಿಂದ ಈ ಮಠ ಅಧ್ಯಾತ್ಮದ ಪ್ರಸಾರ ಮಾಡುತ್ತ ಬಂದಿದೆ. ಈಗಲೂ ಪ್ರಸಾರ ಕಾರ್ಯವನ್ನು ಮುಂದುವರೆಸಿದೆ.


ಚಂದ್ರಶೇಖರ ಶಿವಯೋಗಿಗಳ ಮರಣಾನಂತರ ಶಂಕರಗೌಡರೆ ಶರಣರಾಗಿ ಪುರಾಣ ಪ್ರವಚನ ಮಾಡಿದರು. ಈಗ ಊರ ಮುಂದೆ ಶ್ರೀ ಮನ್ ಮಹದೇವಿ ಮಂದಿರ, ಚಿಂತಪ್ಪ ಮುತ್ಯಾ ಮಂದಿರ, ಶ್ರೀ ಚಂದ್ರಶೇಖರ ಶಿವಯೊಗಿ ಮಂದಿರ ಕಟ್ಟಿಸಿ ಸುಂದರ ಪರಿಸರ ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಜಾತ್ರೆಯ ಸಂದರ್ಭದಲ್ಲಿ ತೇರನ್ನು ಎಳೆಯಲಾಗುತ್ತದೆ.ಇದರ ವಿಶೇಷತೆಯಂದರೆ ಊರಿನ ಹೆಣ್ಣುಮಕ್ಕಳು ೨ ಲಕ್ಷಕ್ಕಿಂತಲೂ ಹೆಚ್ಚು ಹಣ ಸೇರಿಸಿ ಈ ತೇರನ್ನು ಮಾಡಿಸಿದ್ದಾರೆ ಅಷ್ಟೆ ಅಲ್ಲ ತೇರನ್ನು ಈ ಹೆಣ್ಣುಮಕ್ಕಳೇ ( ಈ ಊರಲ್ಲಿ ಹುಟ್ಟಿದ, ಪರ‌ಊರಿಗೆ ಕೊಟ್ಟ ಹೆಣ್ಣುಮಕ್ಕಳು ) ಎಳೆಯುತ್ತಾರೆ.



ಹೀಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ ಈ ಊರು ಸದಾ ಸುಭಿಕ್ಷವಾಗಿದೆ. ಬೇರೆಲ್ಲಿ ಮಳೆಯಾಗಿರದಿದ್ದರೂ ಇಲ್ಲಿ ಮಳೆಯಾಗಿ ಉತ್ತಮ ಫಸಲು ಬರುತ್ತದೆಂಬುದು ಇಲ್ಲಿಯ ಭಕ್ತರ ನಂಬಿಕೆ.

ನೀಲಮ್ಮ ಕೋಣ್ಯಾಳ ಬಿ,ಎ,೨

Sunday, August 1, 2010

ನಮ್ಮೂರ ಪುರಾಣ ಕವಿ ವೀರಸಂಗಪ್ಪ ಹಗರಟಗಿ

ಕವಿಯ ಪರಿಚಯ :


ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹಗರಟಗಿ  ಗ್ರಾಮದಲ್ಲಿ ಭೀಮಪ್ಪ ಮತ್ತು ಬಸಮ್ಮ ಎಂಬ ದಂಪತಿಗಳ ಉದರದಲ್ಲಿ ದಿನಾಂಕ: ೨೫-೦೬-೧೯೩೨ ರಂದು ಜನಿಸಿದರು.


‘ಭಾವ ತರಂಗಿಣಿ’ ಹಾಗೂ ‘ಶ್ರೀ ಪವಾಡ ಬಸವೇಶ್ವರ ಸುಪ್ರಭಾತ ’ಈ ಎರಡು ಭಾವ ಕುಸುಮಗಳ ಸಮ್ಯಕ್ಯ್ ಸಂಕಲನದಿಂದ ಶ್ರೀ ವೀರಸಂಗಪ್ಪ ಹಗರಟಗಿಯವರು ಸಾಹಿತ್ಯ ಪ್ರಪಂಚಕ್ಕೆ ಪರಿಚಿತರು. ವೃತ್ತಿಯಿಂದ ಶಿಕ್ಷಕರು, ಪ್ರವೃತ್ತಿಯಿಂದ ಕವಿಗಳು ಸ್ವಭಾವತ: ಸಾತ್ವಿಕರು ದುಡಿಮೆಯೇ ದೈವ ಎಂದು ನಂಬಿದವರು. ಆದರೆ ವೀರಸಂಗಪ್ಪ ಹಗರಟಗಿಯವರು ಯಾರಿಗೂ ಕಾಣದ ಲೋಕಕ್ಕೆ ತೆರಳಿದ್ದಾರೆ.



ವಿದ್ಯಾಭ್ಯಾಸ


ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಾದ ಹಗರಟಗಿಯಲ್ಲಿಯೇ ಮುಗಿಸಿ ನಂತರ ಮಾಧ್ಯಮಿಕ ಶಿಕ್ಷಣವನ್ನು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಎಂಬ ಮಾಧ್ಯಮಿಕ ಶಾಲೆಯಲ್ಲಿ ಮುಗಿಸಿದರು. ಹೆಚ್ಚಿನ ವ್ಯಾಸಂಗಕ್ಕಾಗಿ ‘ಕವಿಗಳ ಬೀಡು’ ಎಂದೇ ಖ್ಯಾತಿ ಪಡೆದಿರುವ ಧಾರವಾಡ ವಿಶ್ವವಿಧ್ಯಾನಿಲಯದಲ್ಲಿ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು.


ಸೇವೆ :


ವೀರಸಂಗಪ್ಪ ಹಗರಟಗಿಯವರು ಹಗರಟಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ (೧೯೫೪), ವಜ್ಜಲದಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ (೧೯೮೦), ಹಾಗೂ ಕೆಂಭಾವಿಯಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಕರಾಗಿ ಸೇವೆ ಸಲ್ಲಿಸಿದರು.


ಹಗರಟಗಿಯವರ ಸಾಹಿತ್ಯ ಚಿಂತನ-ಸನ್ಮಾನ:
೧. ೧೯೯೭ ರಲ್ಲಿ ಪ್ರಜ್ಞಾ ಪ್ರಕಾಶನ ಹುಣಸಗಿ,




೨. ಕನ್ನಡ ಸಾಹಿತ್ಯ ಪರಿಷತ್, ಮುದ್ದೇಬಿಹಾಳ,


೩. ಸ್ವಾಮಿ ವಿವೇಕಾನಂದ ತರುಣ ಸಂಘ, ಬಿಳೇಭಾವಿ


೪. ಶ್ರೀ ಪವಾಡ ಬಸವೇಶ್ವರ ಸಮಿತಿ ಸಾ.ಬಸರಕೋಡ


೫. ಗಡಿ ಸೋಮನಾಳ ಬಸವ ಸಮಿತಿ


೬. ಕೊಡೇಕಲ್ಲ್ ಶ್ರೀ ದುರದುಂಡೇಶ್ವರ ಮಠಾಧೀಶರಿಂದ


೭. ಸುರಪುರ ತಾಲೂಕಾ ಕನ್ನಡ ಸಾಹಿತ್ಯ ಸಂಘ, ರಂಗನಪೇಟ


೮. ಕನ್ನಡ ಸಾಹಿತ್ಯ ಪರಿಷತ್ , ಸುರಪುರ (ಕೆಂಭಾವಿಯಲ್ಲಿ)


೯. ಬಬಲಾದಿ ಶ್ರೀ ಚನ್ನವಿರೇಶ ಮಠಾಧೀಶರು ಜಿಲ್ಲಾ.ಗುಲ್ಬರ್ಗಾ


೧೦. ಕೋರಿಸಿದ್ದೇಶ್ವರ ಮಹಾ ಸಂಸ್ಥಾನ, ನಾಲವಾರ ಜಿಲ್ಲಾ. ಗುಲ್ಬಾರ್ಗಾ


೧೧. ಗುಂಡಕನಾಳ ತಾ. ಮುದ್ದೇಬಿಹಾಳ ಮಠದ ಸದ್ಭಕ್ತರಿಂದ


೧೨. ಕೊಡೇಕಲ್ಲ್ ಸಮಾಜ ಸೇವಾ ಬಳಗ (ಬಿಳೇಭಾವಿಯಲ್ಲಿ)


೧೩. ೧೦ನೇ ವಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ


೧೪. ಕಲ್ಯಾಣ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ


೧೫. ೧೦ ಸ್ಥಳಿಯ ರೋಟರಿ ಕ್ಲಬ್‌ರವರಿಂದ ಸನ್ಮಾನ




ಕೃತಿಗಳು :


ಭಾಮಿನಿ ಷಟ್ಪದಿಯಲ್ಲಿ ಜನಪದ ಸಂಸ್ಕೃತಿಯ ಹರಿಕಾರರಾದ ಸಾಧು-ಸಂತರ ಶರಣರ ಕುರಿತು ಪುರಾಣ ರಚಿಸಿದ್ದಾರೆ, ಸುಪ್ರಭಾತ ರಚಿಸಿದ್ದಾರೆ. ಒಟ್ಟು ಮಹತ್ವದ ೨೫ ಕೃತಿಗಳಿವೆ. ಅವುಗಳಲ್ಲಿ ಕೆಲವು ಮಾತ್ರ ಪ್ರಕಟವಾಗಿವೆ. ಉಳಿದ ಕೆಲವು ಕೃತಿ ಪ್ರಕಟಮಾಡಲು ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸುವ ಅಗತ್ಯವಿದೆ.


೧. ಭಾವತರಂಗಿಣಿ - ಕವನ ಸಂಕಲನ


೨. ಬಸವ ಸುಪ್ರಭಾತ - ಭಕ್ತಿಗೀತೆ


೩. ಪವಾಡ ಬಸವೇಶ್ವರ ಭಜನಾಮೃತ - ಭಾವಗೀತೆ


೪. ವಚನ ಭ್ರಹ್ಮದೇವ ದಾಸಿಮಯ್ಯ - ಸುಪ್ರಭಾತ


೫. ಚಂದ್ರಶೇಖರ ಶಿವಯೋಗಿಗಳು - ಜನಪದ ಶೈಲಿ


೬. ಕೆಂಭಾವಿ ಭೋಗೇಶ ಭಾವಗೀತೆ - ಭಾವಗೀತೆ


೭. ಬಬಲಾದಿ ಚನ್ನವಿರೇಶ ಸುಪ್ರಭಾತ - ನೂರೆಂಟು ನಾಮಾವಳಿ


೮. ಮಹಾಮಾತೆ ಮಾಣಿಕೇಶ್ವರಿ ಸುಪ್ರಭಾತ - ನೂರೆಂಟು ನಾಮಾವಳಿ


೯. ಕೊಡೇಕಲ್ಲ್ ಬಸವ ಸುಪ್ರಭಾತ


೧೦. ಕಡಕೋಳ ಮಡಿವಾಳೇಶ್ವರ ಸುಪ್ರಭಾತ


೧೧. ಸದ್ಗುರು ರಾಮಲಿಂಗೇಶ್ವರ ನೂರೆಂಟು ನಾಮಾವಳಿ - ಭಕ್ತಿಗೀತೆ


೧೨. ಶ್ರೀ ಪವಾಡ ಬಸವೇಶ್ವರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೩. ಶ್ರೀ ಸದ್ಗುರು ರಾಮಲಿಂಗೇಶ್ವರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೪. ಬಸವ ಲಿಂಗಪ್ಪನವರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೫. ಬಬಲಾದಿ ಚನ್ನವಿರೇಶ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೬. ಮಹಾಮಾತೆ ಮಾಣಿಕೇಶ್ವರಿ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೭. ಸುವರ್ಣಲಿಂಗ ಶಿವಾಚಾರ್ಯರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೧೮. ಕೋರಿ ಸಿದ್ದೇಶ್ವರ ಮಹಾಕಾವ್ಯ - ಭಾಮಿನಿ ಷಟ್ಪದಿ ಕಾವ್ಯ


೧೯. ಭೀಮಾಶಂಕರ ಪುರಾಣ - ಭಾಮಿನಿ ಷಟ್ಪದಿ ಕಾವ್ಯ


೨೦. ದುಧನಿಯ ಶ್ರೀ ಗುರು ಶಾಂತಲಿಂಗರ ಚರಿತ್ರೆ - ಜೀವನ ಚರಿತ್ರೆ


ಅಪ್ರಕಟಿತ ಕೃತಿಗಳು


೧. ದಿವ್ಯದರ್ಶನ - ಜೀವನ ಚರಿತ್ರೆ


೨. ಗಂಗೆಯ ಮಂಗಳದಂಗಳ


೩. ಮಾತೆ ಮಾಣಿಕೇಶ್ವರಿ ಮಹಿಮೆ - ಜನಪದ


೪. ಶರಣ ಚರಿತಾಮೃತ - ಜೀವನ ಚರಿತ್ರೆ




ಭಾಮಿನಿ ಷಟ್ಪದಿಯಲ್ಲಿ ರಚನೆಯಾದ ಹಲವಾರು ಪುರಾಣಗಳಲ್ಲಿ “ಶ್ರೀ ಪವಾಡ ಬಸವೇಶ್ವರ ಪುರಾಣ” ವು ಸಹ ಒಂದಾಗಿದೆ. ಈ ಪುರಾಣವು ೨೧೮ ಪುಟಗಳನ್ನು ಹಾಗೂ ೨೮ ಸಂಧಿಗಳನ್ನು ಒಳಗೊಂಡಿದೆ.


ಶ್ರೀ ಪವಾಡ ಬಸವೇಸ್ವರ ಪುರಾಣ :


ಈ ಪುರಾಣದ ಎರಡು ಮುಖ್ಯ ಸಾಲುಗಳ ಈ ರೀತಿಯಾಗಿದೆ.


‘ವಂದಿಸುವೆ ಬಸವೇಶನಂಘ್ರಿಗೆ


ಯಿಂದುಧರ ಲೀಲೆಗಳ ನೆನೆಯುತ


ತಂದೆ ನೀ ಜಗದೊಡೆಯ ಲಿಲಾಪುರುಷ ಬಸವೇಶ


ಅಂದವಾದೀ ದೈವಕಥೆಯನ್ನು


ಮುಂದುವರಿಸುವ ವೀರಸಂಗನು


ಸಂಧಿಯರಡನು ಮುಗಿಸಲೆಳಸುವ ದೇವನನುತಿಸಿ’


‘ಜಲದಿ ಕಮಲವು ಹುಟ್ಟಿಬೆಳೆದರೆ


ಜಲಕೆ ಸೋಂಕದೆ ತೇಲುವಂದದಿ


ನೆಲದಿ ನಮ್ಮೊಳು ದೇವಪುರುಷರು ಬೆರೆತು ಬೇರಿಹರು


ಮಲಿನಗೊಂಡಿಹ ಮನುಜ ಲೋಕದಿ


ಬೆಲೆಯನರಿಯದೆ ನೈಜಸಿರಿಯನು


ಕುಲವನೆಣಿಸುತ ಕೀಳುಭಾವದ ಮನುಜರಿಲ್ಲಿಹರು’


ಶ್ರೀ ಬಸಲಿಂಗಪ್ಪನವರ ಪುರಾಣಂ :


ಈ ಪುರಾಣವು ಸಹ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ. ಈ ಪುರಾಣವು ೩೩೬ ಪುಟಗಳನ್ನು ಹಾಗೂ ೨೫ ಸಂಧಿಗಳನ್ನು ಒಳಗೊಂಡಿದೆ. ಈ ಪುರಾಣವು ಪ್ರಸ್ತುತ ಊರಾದ ಶರಣ ಸೋಮನಾಳದ ಶ್ರೀ ಬಸಲಿಂಗಪ್ಪನವರ ಕುರಿತಾದ ವಿವರಣೆಯಿದೆ. ಪ್ರಸ್ತುತ ಪುರಾಣದಲ್ಲಿ ೮ ಸಂಧಿಗಳನ್ನು ಮಾತ್ರ ರಚಿಸಿದ್ದಾರೆ.


ಈ ಪುರಾಣದ ಎರಡು ಮುಖ್ಯ ಸಾಲುಗಳು ಈ ಕೆಳಗಿನಂತಿವೆ.


‘ಎಷ್ಟು ದಿನ ಬದುಕಿದರು ಕೊನೆಯಲ್ಲಿ


ನಷ್ಟವಾಗುವ ದೇಹವಿದು ಮನ


ದಿಷ್ಟದಂದದಿ ಗಂಗೆಯಲಿ ಕೊನೆಯಾಗಲೆಂದಿಹರು


ಕಷ್ಟವಾಯಿತು ಕೇಳಿದಿವರಗೆ


ದೃಷ್ಟಿಬೀರುತಲೆಲ್ಲ ರಾಜನ


ಸೃಷ್ಟಿಗೊಂಡಿಹ ಶರಣನಿಶ್ಚಯ ತಿಳಿಯದಾಗಿಹರು’


ಶ್ರೀ ಪವಾಡ ಬಸವೇಶ್ವರ-“ಭಜನಾಮೃತ” :


ವೀರಸಂಗಪ್ಪ ಹಗರಟಗಿ ಕವಿಗಳು ಬಸರಕೊಡದ ಬಸವೇಶ್ವರರನ್ನು ಕುರಿತು ‘ಭಜನಾಮೃತ’ ಕವನ ಸಂಕಲನವನ್ನು ರಚಿಸಿದ್ದಾರೆ. ಈ ಸಂಕಲನವು ೪೪ ಪುಟಗಳನ್ನು ಒಳಗೊಂಡಿದೆ.


‘ಪುರ ಬಸರಕೋಡಕ್ಕೆ ಸಾಗೋಣ’


ರಾಗ-ಯಮನ   : ತಾಳ-ಕೇರವ


‘ಸ್ವಾಮಿ ಪವಾಡನ


ನಾಮದ ನೆನೆಯುತ


ಪ್ರೇಮದಿ ಜಗದೊಳು ಬಾಳೋಣ


ಕಾಮಿತ ಫಲಗಳ


ನೇಮದಿ ನೀಡುವ


ಸೀಮಾತೀತನ ಸ್ಮರಿಸೋಣ’


ವ್ಯಕ್ತಿತ್ವ  :


ವೀರಸಂಗಪ್ಪ ಹಗರಟಗಿಯವರ ಜೀವನ, ಸಾಹಸ, ಶೌರ್ಯ, ಕಾರ್ಯ, ಸಾಧನೆ ಮಹತ್ತಾದುದು. ಹಗರಟಗಿಯವರು ಕೇವಲ ಒಬ್ಬ ಕವಿಯಾಗಿರದೆ ಒಬ್ಬ ಉತ್ತಮ ಅಸಾಧಾರಣ, ಪ್ರಭಾವಿಶಾಲಿ ವ್ಯಕ್ತಿಯಾಗಿದ್ದರು.


ವೀರಸಂಗಪ್ಪ ಹಗರಟಯವರು ಗಿಡ್ಡನೆಯ ದೇಹ, ಬಾಗಿದ ಬೆನ್ನು ಹೊಂದಿದ್ದರು. ಎಲ್ಲರೊಂದಿಗೆ ಬೆರತು ಸಂತೋಷದಿಂದ ಆಡಿ-ನಲಿದಾಡುತ್ತಿದ್ದರು. ಹಗರಟಗಿಯವರು ಯಾವಾಗಲು ಹಣ್ಣು-ಹಂಫಲಗಳನ್ನೆ ಹೆಚ್ಚಾಗಿ ಸೇವಿಸುತ್ತಿದ್ದರು.
ಇಂಥ  ಮಹನೀಯರು ನಮ್ಮೂರಲ್ಲಿದ್ದರೆಂಬುದೇ ನಮ್ಮ ಭಾಗ್ಯ !

ಬಿ.ಎನ್.ಬಾವೂರ  ಬಿ.ಎ. ೧

Thursday, July 29, 2010

ಬದುಕು- ಅವಲೋಕನ

ಬದುಕು


ಅಪ್ಪಟ ಗ್ರಾಮೀಣ ಭಾಷೆಯ ಸೊಗಡಿನಲ್ಲಿ ಉತ್ತರ ಕರ್ನಾಟಕದ ಅದರಲ್ಲು ಹೈದರಾಬಾದ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಮೊಗಲಾಯಿ ಭಾಷೆಯನ್ನು ಖಡಕ್ಕಾಗಿ ಬಳಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ನಮ್ಮ ಕಲ್ಬುರ್ಗಿ ಜಿಲ್ಲೆಯ ಭಾಷೆ
ಯನ್ನು ಕೊಂಡೊಯ್ದ ಕೀರ್ತಿ ಗೀತಾ ನಾಗಭೂಷಣ ಅವರಿಗೆ ಸಲ್ಲುತ್ತದೆ. ಹಿಂದುಳಿದ ಜಿಲ್ಲೆ ಎಂದು ಕರೆಯಿಸಿಕೊಳ್ಳುವ
ಕಲ್ಬುರ್ಗಿ ತನ್ನದೆ ಆದ ವಿಶಿಷ್ಟ ಭಾಷಾಸೊಬಗನ್ನು ಹೊಂದಿದೆ. ಇಂತಹ ಒಂದು ಮೊಗಲಾಯಿ ಭಾಷೆ ಕನ್ನಡ ಸಾಹಿತ್ಯ ಚರಿ
ತ್ರೆಯಲ್ಲಿ ಕಥೆ ಕಾದಂಬರಿಗಳಲ್ಲಿ ಬಳಕೆಯಾದದ್ದು ಬಹುಶ: ಗೀತಾ ನಾಗಭೂಷಣರವರಿಂದಲೆ ಇರಬೇಕು. ತಮ್ಮ ಕಥೆ ಕಾದಂಬರಿ ಲೇಖನಗಳ ಮೂಲಕ ಸಾಹಿತ್ಯದಲ್ಲಿ ವಿಶಿಷ್ಟವಾದ ತಳಹದಿಯ ಮೇಲೆ ತಮ್ಮದೆ ಆದ ಛಾಪವನ್ನು ಮೂಡಿಸಿದವರು.


ಗೀತಾ ನಾಗಭೂಷಣರ ಕಾದಂಬರಿಗಳಲ್ಲಿ ಸ್ತ್ರೀ ಪರ ನಿಲುವು, ಸಮಾನತೆ, ಜಾತಿ ಮೌಢ್ಯತೆ, ಮೇಲ್ವರ್ಗ, ಕೇಳ ವರ್ಗಗಳ ರೀತಿ-ರಿವಾಜು, ಆಚಾರ-ವಿಚಾರ, ಪ್ರಕೃತಿ ವರ್ಣನೆಗಳ ರಚನೆಗಳು ಅತ್ಯಂತ ವಿಶಿಷ್ಟ ರೀತಿಯಲ್ಲಿ ಚಿತ್ರಿತವಾಗಿದೆ.


“ಹಾಡ್ರೆ ದುರ್ಗಿ ಅಂದ್ರ ಏಟಕಿ ನಖರಾ


ಮಾಡ್ತಿರಲ್ರೆ ಹೊಯ್ಮಲ್ಲೇರೇ...


ಮ್ಯಾಲ ನೋಡಿದರ ಮುಗಲ ತುಂಬ


ಚುಕ್ಕಿಗೊಳ ನೆರೆದಾವ


ತೆಳಗ ನೋಡಿದರ ಬಯಲು ತುಂಬಾ


ಸಿಂದಿ ಬುರುಗಿನಂತ ಬೆಳ್ಳನ ಬೆಳದಿಂಗಳ ಬಿದ್ದಾದ


ನಿಮ್ಮುಂದ ತುಂಬಿದ ಸಿಂದಿ ಮಗಿಗೊಳು


ಎಲ್ಲೋರ ತಲ್ಯಾಗ ನಿಶಾ ಏರಾದ ... ಹಾಡ್ರಿ ಚೌಡಕಿ


ಬಾರಸ್ಗೋತ ಒಂದೆಡ್ಡು ಹಾಡ ಹಾಡ್ರಿ ನಿಮ್ಮದನಿ ಕೇಳಿ


ಬಾಳದಿನ ಆಯ್ತು”


ಇಂತಹ ಜವಾರಿ ಶೈಲಿಯ ಭಾಷೆ ಮತ್ತು ಕೆಳಮಂದಿಯ ಖುಲ್ಲಂ-ಖುಲ್ಲಾ ಬದುಕಿನ ಚಿತ್ರಣಗಳು ಗೀತಾರವರ ಕಾದಂಬರಿಗಳಲ್ಲಿ ಎದ್ದುಕಾಣುತ್ತದೆ.


ಪ್ರಾದೇಶಿಕ ತಳಿಯ ಬದುಕು ಮೊಘಲಾಯಿ ಏರಿಯಾದ ಟಿಪಿಕಲ್ ಭಾಷೆಯಿಂದಾಗಿಯೇ ಗೀತಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಲೇಖಕಿಯರ ಸಾಲಿನಲ್ಲಿ ವಿಶಿಷ್ಟರೆನಿಸಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯ ಘಟ್ಟಗಳ ಸೆರಗಿಡಿದೇ ಬಂದ ಬಂಡಾಯ-ದಲಿತ ಸಾಹಿತ್ಯ ಚಳುವಳಿಯು ಈ ತೆರನಾದ ಸಂವೇದನೆಗಳಿಂದಾಗಿಯೇ ಗಮನ ಸೆಳೆದವು.


ಉತ್ತರ ಕರ್ನಾಟಕದ ಖಡಕ್ಕ ಭಾಷೆ ಕಲ್ಬುರ್ಗಿಯ ಮೊಗ ಲಾಯಿ ಭಾಷೆಯನ್ನು ತನ್ನ ಕಾದಂಬರಿ ‘ಬದುಕು’ವಿನಲ್ಲಿ ಅತ್ಯಂ ತ ಮಹತ್ವದ ರೀತಿಯಲ್ಲಿ ಬಳಸಿದ್ದಾರೆ. ಇಂಥ ಕಾಲ ಘಟ್ಟದಲ್ಲಿ ಪ್ರಥಮ ಬಾರಿಗೆಯೆಂಬಂತೆ ದಲಿತ ಹಿಂದುಳಿದ ಮತ್ತು ಶೋಷಿ ತ  ಸಮುದಾಯಗಳ ಅದರಲ್ಲಿಯೂ ಮಹಿಳೆಯರು ತಮ್ಮ ಬದು ಕು ಬವಣೆಯನ್ನು ಕುರಿತು ಈ ಕಾದಂಬರಿಯಲ್ಲಿ ಅತ್ಯಂತ ವಿಶಿ ಷ್ಟ ರೀತಿಯಲ್ಲಿ ತಮ್ಮ ನೋವಿನಂತೆಯೇ ಅದರಲ್ಲಿ ನಲಿವು ಕಂ ಡು ಕೊಂಡ ಅನೇಕ ಪಾತ್ರಗಳು ಬರುತ್ತವೆ. ಗೀತಾ ಕಥೆಯನ್ನು ಹೇಳುತ್ತಾರೆ ಆದರೆ ಕಥೆಕಟ್ಟುವದಿಲ್ಲ ಎಂಬ ಹೇಳಿಕೆ ವಿಮರ್ಶ ಕರ ಶಾಸ್ತ್ರಿಯ ಮಾನದಂಡಗಳ ಬಗೆಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ತಮ್ಮ ಪಾಡಿಗೆ ತಾವು ಬರವಣಿಯಲ್ಲಿ ತೊಡಗಿದರು.


ಕೇವಲ ತಳವಾರ ಜಾತಿ ಹುಡುಗಿಯೊಬ್ಬಳು ತಾನು ಓದಬೇಕು ಪದವಿ ಪಡೆಯಬೇಕು ಎಂಬ ಮಹಾದಾಸೆಯೊಂದಿಗೆ ತನ್ನೂ ರಿನಿಂದ ಕಲ್ಬುರ್ಗಿಯಂತಹ ಪಟ್ಟಣಕ್ಕೆ ಬಂದು ಬಿ.ಎ ಬಿ.ಎಡ್, ಎಂ,ಎ ಪದವಿ ಪಡೆದು ಸಾಹಿತ್ಯದಲ್ಲಿ ಕೃಷಿ ಮಾಡಿದವರು. ಬಡ ವರ ಶೋಷಿತರ ನಿರಾಶ್ರಿತರ ಕೆಳವರ್ಗದವರ ಪರ ನ್ಯಾಯ ದೊ ರಕಿಸಲು ಹೋರಾಡದೆ ತಮ್ಮಲೇಖನಿಯ ಲೇಖನಗಳ ಮೂಲಕ ಉತ್ತರಿಸಿದರು. ಕೆಳವರ್ಗದ ಮಂದಿಯ ನೋವು-ನಲಿವುಗಳು ದೇವದಾಸಿಯರ [ಜೋಗಣಿಯರ] ಪಟ್ಟಕ್ಕೆ ಹಾಕಿ ಮುತ್ತುಕಟ್ಟುವ ಆ ಅನಿಷ್ಟ ಪದ್ಧತಿಯ ಬೇರು ಸಹಿತ ಬುಡ ಮೇ ಲು ಮಾಡಲು ‘ಬದುಕು’ ಕಾದಂಬರಿ ಮೂಲಕ ತಿಳಿಸಿದ್ದಾರೆ.


ಬದುಕು ಕಾದಂಬರಿಯಲ್ಲಿ ವಿಭಿನ್ನ ರೀತಿಯಲ್ಲಿ ಚಿತ್ರಿತವಾಗಿ ರುವದು. ಕೆಳವರ್ಗದ ನಿರ್ಗತಿಕರ ಬಗೆಗಿನ ಕಥೆಯಾದರು ಇದು  ಮೆಲ್ನೋಟಕ್ಕೆ ಶಿವಳ್ಳಿಯ ಜಮಾದಾರ ಮಲ್ಲಪ್ಪನ ಮನೆ ಕಥೆಯಂತೆ ಕಂಡುಬರುತ್ತದೆ. ಆದರೆ ಇದೊಂದು ಕೆಳವರ್ಗದ ಶೋಷಿತರ ನಿರಾಶ್ರಿತರು ಹಿಂದುಳಿದವರು ದೇವದಾಸಿಯವ ರಂತಹ ದಾರುಣ ಜೀವನ ನಡೆಸುವವರತ್ತ ಈ ಕಥೆ ಹೆಣೆದು
ಕೊಳ್ಳಲಾಗಿದೆ.


ಇಲ್ಲಿ ಕೆಳವರ್ಗದ ರೀತಿ ರಿವಾಜು, ಆಚಾರ-ವಿಚಾರ , ಪ್ರೀತಿ-ಪ್ರೇಮ, ಪ್ರಣಯ, ಕಾಮ,ಹಾದರ, ನಗು-ಅಳು, ಕಳುವು, ಹಸಿ ವು ,ಮುಂತಾದವುಗಳೇಲ್ಲ ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಣವಾಗಿವೆ.


೨೦೦೧ರಲ್ಲಿ ಪ್ರಕಟವಾದ ಈ ಬದುಕು ಕಾದಂಬರಿ ಇಲ್ಲಿಯ ವರೆಗು ಅಂದರೆ ೨೦೧೦ರ ವೇಳೆಗೆ ಮೂರು ಸಲ ಮರು ಮುದ್ರ ಣ ಕಂಡಿದೆ. ೨೦೦೧ ನಂತರ ೨೦೦೫,೨೦೦೭,೨೦೧೦. ೨೦೧೦ ರಲ್ಲಿ ನಡೆದ ೭೬ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸ ಮ್ಮೇಳನದಲ್ಲಿ ಗೀತಕ್ಕನವರ ಬಹುತೇಕ ಎಲ್ಲಾ ಕಥೆ ಕಾದಂಬ ರಿಗಳು ಗದಗನ ಕನ್ನಡ ಜಾತ್ರೆಯಲ್ಲಿ ಒಂದೂ ಬಿಡದೆ ಮಾರಾ
ವಾಗಿದ್ದವು. ೭೬ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಗೀತಾನಾಗಭೂಷಣ ಅವರೆ ಆಗಿದ್ದರು.


ಬದುಕು ಕಾದಂಬರಿ ಕೆಳವರ್ಗದ ಖುಲ್ಲಂ ಖುಲ್ಲಾ ಭಾಷೆ ಬಳಸಿ
ರುವದರಿಂದ ಇದು ಯಲ್ಲಿಯೂ ಅಶ್ಲೀಲವೆಂಬಂತೆ ಭಾಸವಾ
ಗುವುದಿಲ್ಲ. ಈ ಕಾದಂಬರಿ ಪ್ರಕಟವಾದ ನಂತರ ಅನೇಕ ಕವಿ
ಗಳು ಲೇಖಕರು,ವಿಮರ್ಶಕರು ತಮ್ಮ ಅಭಿಪ್ರಾಯಗಳನ್ನು ಕಾದಂಬರಿ ಓದಿದ ನಂತರ ತಿಳಿಸಿದ್ದಾರೆ. ೪೯೧ ಪುಟಗಳ ಈ ಕಾದಂಬರಿ ಅತ್ಯಂತ ಮಹತ್ವದ ರೀತಿಯಲ್ಲಿ ಬರೆದಿದ್ದಾರೆ. ಗೀತಾರವರು ಇಂತಹ ಒಂದು ವಿಶಿಷ್ಟವಾದ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕೆಡಮಿ ಪ್ರಶಸ್ತಿ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯ.


ಪಾತ್ರಗಳು:


ಮಲ್ಲಪ್ಪ - ಶಿವಳ್ಳಿಯ ಜಮಾದಾರ ಕೆಳಮಂದಿಯ ಪ್ರಭಾವಿ ವ್ಯಕ್ತಿ .


ಮಲ್ಲಮ್ಮ - ಮಲ್ಲಪ್ಪ ಜಮಾದರನ ಹೆಂಡತಿ.


ಶಾಣಮ್ಮ - ಮಲ್ಲಪ್ಪ ಜಮಾದರನ ಮೊದಲ ಮಗಳು ಬಟ್ಟಿ ಗಿರಣಿ ಕೆಲಸದಲ್ಲಿ ಇರುವ ಹಾಲಪ್ಪನ ಹೆಂಡತಿ ಶಾಣಮ್ಮನ ಮಕ್ಕಳು ಬೆಳ್ಳಿ ಮತ್ತು ಶಿವು


ಕೌಶಮ್ಮ - ಮಲ್ಲಪ್ಪ ಜಮಾದರನ ಎರಡನೇ ಮಗಳು ಸೊಲ್ಲಾಪುರದ ಮಾರ್ತಾಂಡನ ಹೆಂಡತಿ ಸಾಹುಕಾರ ಲಿಂಗರಾಜನ ಪ್ರೇಯಸಿ


ಕಲ್ಯಾಣಿ - ಜಮಾದಾರ ಮಲ್ಲಪ್ಪನ ಕೊನೆ ಮಗ. ಶಾಣಮ್ಮನ ಮಗಳು ಬೆಳ್ಳಿಯ ಗಂಡ


ಪತರು ನಜಮಾ - ಮಲ್ಲಪ್ಪ ಜಮಾದಾರನ ಸಾಕು ಮಗ ಮುಸ್ಲೀಂ ಆದರು ಸ್ವಂತ ಮಗನಂತೆ ಬೆಳೆಸಿದ. ಪತರನ ಹೆಂಡತಿ ನಜಮಾ


ಈ ಪ್ರಮುಖ ಪಾತ್ರಗಳಲ್ಲದೆ ಇನ್ನೂ ಅನೇಕ ಪಾತ್ರಗಳು ಬರು
ತ್ತವೆ. ಕಲ್ಯಾಣಿ ಬೆಳ್ಳಿಯರ ಮಗ ಸಣ್ಣ ಮಲ್ಲು. ಮಲ್ಲಪ್ಪನ ನೆರೆ
ಮನೆಯ ನಾಗವ್ವ ಆಯಿ ಹಾಲಪ್ಪ ಮತ್ತು ಮಾರ್ತಾಂಡನ ಸಂ
ಬಂಧಿಕರು. ಕಾಶಮ್ಮಳ ಗೆಳತಿಯರು ಮಲ್ಲಪ್ಪ ಜಮಾದಾರನ ಗೆಳೆಯರು ಮುಂತಾದ ಚಿಕ್ಕ ಚಿಕ್ಕ ಪಾತ್ರಗಳು ಬರುತ್ತವೆ. ಈ ಚಿಕ್ಕ ಪಾತ್ರಗಳು ಆಯಾ ಸನಿವೇಶದ ರೂಪುಗಳಿಗೆ ನಿದರ್ಶನ
ವಾಗಿವೆ.


ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಕೇ
ವಲ ಕಾಲ್ಪನಿಕವಾದರು ಅದರಲ್ಲಿ ಬರುವ ಪಾತ್ರಗಳು ಸನ್ನಿ
ವೇಶಗಳು ಜೀವಂತಿಕೆಯನ್ನು ತಳೆದು ನಿಂತಿದೆ. ಅಲ್ಲಿ ಇಲ್ಲಿ ನೋಡಿ ಬಂದದ್ದು ಹೇಳದೆ ಕಣ್ಣಿಗೆ ಕಟ್ಟಿದ ಹಾಗೆ ಬರೆದಿರುವ ಈ ಕಾದಂಬರಿಯಲ್ಲಿ ಹಬ್ಬ-ಹರಿದಿನಗಳು, ದೇವರು-ದಿಂಡರು, ಊರು ಕೇರಿ, ಜಾತಿ-ಮತ, ಆಹಾರ-ವಿಹಾರ, ಮತ್ತು ಬಟ್ಟೆ-ಬರೆಗಳನ್ನು ಅತ್ಯುತ್ಯಮವಾಗಿ ಇಲ್ಲಿ ವಿವರಿಸಿದ್ದಾರೆ. ಪ್ರಕೃತಿಯ ವರ್ಣನೆಯಂತು ಅಸಾಧ್ಯವಾಗಿ ಈ ಕಾದಂಬರಿ ವರ್ಣಿಸಿದ್ದಾರೆ.


ಊರು-ಕೇರಿ :


ಈ ಬದುಕು ಕಾದಂಬರಿಯಲ್ಲಿ ಮುಖ್ಯವಾಗಿ ಬರುವ ಹಳ್ಳಿ
ಯಂದರೆ ಶಿವಳ್ಳಿ, ಶಿವಳ್ಳಿಯಲ್ಲಿ ಮೂರು ಕೇರಿಗಳಿದ್ದವು ಮ್ಯಾ
ಗೇರಿ, ಕೆಳಗೇರಿ, ಮತ್ತು ಹೋಲಗೇರಿ.


ಈ ರೀತಿಯಾಗಿ ಮೂರು ಕೇರಿಗಳಲ್ಲಿ ಜನರು ವಾಸಿಸುತ್ತಿದ್ದರು. ಅವರಲ್ಲಿ ಗೌಡ, ಕುಲಕರ್ಣಿ, ಜಮಾದಾರ, ರೆಡ್ಡಿ, ಸುಬೇದಾರ, ನಾಯಕ, ಸಾವುಕಾರ ಇಂಥವರು ತಮ್ಮ ತಮ್ಮ ಕೇರಿಗಳ ನಾಯಕರಾಗಿದ್ದರು.


ಕೇರಿಗಳಲ್ಲಿ ತಮ್ಮ ತಮ್ಮ ಇಷ್ಟಾನುಸಾರ ಶಕ್ಯಾನುಸಾರ ಮನೆ
ಗಳನ್ನು ನಿರ್ಮಿಸಿಕೊಂಡಿದ್ದರು. ಅವು ಕೆಲವು ಗಚ್ಚಿನ ಮನೆ, ಹೆಂಡಿಮನೆ, ಅರಜಪ್ಪನಮನೆ, ಮಣ್ಣಿನಮನೆ, ಝೋಪಡಿಮನೆ, ಮತ್ತು ಸಿಂದಿ ಪೊರಕೆ ಮನೆಗಳು ಅದ್ದವು.


ಜಾತಿ-ಮತ:


ಊರು ಎಂದ ಮೇಲೆ ಅಲ್ಲಿ ಜಾತಿ ಮತ ಇದ್ದೇ ಇರುತ್ತೆ ಅಂದ ಹಾಗೆ ಈ ಕಾದಂಬರಿಯಲ್ಲಿ ಅನೇಕ ಜಾತಿಯ ಜನ ಇದ್ದರು. ಅವರು ಲಿಂಗಾಯತರು, ಕುಲಕರ್ಣಿಯರು, ಮ್ಯಾಗೇರಿ
ಯಲ್ಲಿದ್ದರೆ, ಕಬ್ಬಲಗೇರು, ಕುರುಬರು, ಗೊಲ್ಲರು, ಪಿಂಜಾರರು, ಬುಡಬುಡಿಕೆಯವರು, ಬ್ಯಾಡರು, ಮುಂತಾದವರು ಕೆಳಗೇರಿ
ಯಲ್ಲಿ ವಾಸಿಸುತ್ತಿದ್ದರು.


ಬಟ್ಟೆ-ಬರೆ:


ಊರು-ಕೇರಿ, ಜಾತಿ-ಮತಗಳ ನಡುವೆ ಬಟ್ಟೆ ಬರೆಗಳ ಉಲ್ಲೇ
ಖವಿದೆ. ನಾರಿಯರು ಉಟ್ಟುಕೊಳ್ಳುವ ಸೀರೆಗಳ ವಿಧಗಳ ವಿಧ
ಗಳು ಸೇರಿವೆ. ಇಂದಿನ ಈ ಪ್ಯಾಷ್ಯನ ಯುಗದಲ್ಲಿ ವಿವಿಧ ಜರ
ತಾರ ಸೀರೆಗಳ ನಡುವೆಯು ಅಂದಿನ ಸೀರೆಗಳ ಅಂದ ಚೆಂದ ಬಣ್ಣಿಸುತ್ತವೆ. ಕರಿ ಚಂದ್ರಕಾಳಿ ಸೀರೆ, ಇಲಕಲ್ಲ್ ಸೀರೆ, ಕೆಂಪು ಜರಿಯಂಚಿನ ಸೀರೆ, ಕಾದಿಗೆಗಪ್ಪಿನ ಸೀರೆ, ಜರದಮ ಸೀರೆ, ದಡಿ ಸೀರೆ, ಟೋಪ ಸೇರಗಿನ ಸೀರೆ, ರೆಸಮಿ ಸೀರೆ, ಶಾಂ
ಪೂರಿ ಸೀರೆ ಮತ್ತು ಕಾಟನ ಸೀರೆ ಇವುಗಳ ಜೊತೆಗೆ ಗುಳೇ
ದಗುಡ್ಡದ ಸೂರ್ಯನ ಮತ್ತು ಥೇರಿನ ಛಾಪಿರುವ ಕುಪ್ಪಸಗಳ ವರ್ಣನೆ ಇದೆ.


ಸೀರೆಗಳ ಜೊತೆಗೆ ಪುರುಷರ ದೋತುರ, ರುಮಾಲು, ಶಲ್ಯಗಳ ಸಹ ಈ ಕಾದಂಬರಿಯಲ್ಲಿ ಬಂದಿವೆ.


ಆಹಾರ-ವಿಹಾರ [ಸಸ್ಯಹಾರಿ] :


ಈ ಕಾದಂರಿಯಲ್ಲಿ ಅಪ್ಪಟ ಉತ್ತರ ಕರ್ನಾಟಕದ ಊಟದ ಬಗ್ಗೆ ಹೇಳಲಾಗಿದೆ. ಜಮಾದಾರ ಮಲ್ಲಪ್ಪನ ಮನೆಯಲ್ಲಿ ಮಾಡುವ ಆಹಾರ-ವಿಹಾರಗಳ ಬಗ್ಗೆ ತಿಳಿಸಲಾಗಿದೆ. ಪುಂಡಿಪಲ್ಯ, ಹುಣಚಿ
ಕಾಯಿ, ಕಾರ ಕೆನೆಮೊಸರು, ಜೋಳದರೊಟ್ಟಿ, ಹುಳಬಾನ, ಗೋಧಿ ಚಪಾತಿ ಗಟ್ಟಿಬ್ಯಾಳಿ, ತಾಳಸಿದ ಕಡ್ಲಿಪಲ್ಯ,ಅಕ್ಕಿಬಾನ, ಹೋಳಿಗೆ,ಸಜ್ಜಿ ರೊಟ್ಟಿ,ಸಜ್ಜಕ,ಉಪ್ಪಿಟ್ಟು,ಮಂಡಕ್ಕಿ,ಸಂಡಿಗೆಗಳ ಬಗ್ಗೆ ಹೇಳಲಾಗಿದೆ.


ಆಹಾರ ವಿಹಾರ ( ಮಾಂಸಾಹಾರ):


ಮಾಂಸಾಹಾರದಲ್ಲಿ ಕೋಳಿಪಲ್ಲ್ಯ,ಕುರಿಖಂಡದ ಪಲ್ಯ, ಮೀನು,
ಟಗರು,ಉಡ,ಮೊಲ,ಪಾರಿವಾಳಗಳಂತಹ ಪ್ರಾಣಿಗಳ ಊಟದ ರುಚಿಯನ್ನು ವರ್ಣಿಸಲಾಗಿದೆ. ಸಸ್ಯಾಹಾರಿ,ಮಾಂಸಾಹಾರಿಗಳೆನ್ನದೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಪದ್ಧತಿ ಇತ್ತು. ಮತ್ತು ಸಿಂದಿ ಕುಡಿಯುವಾಗ ನೆಂಜಿಕೊಳ್ಳುವುದಕ್ಕೆ ಶೇಂಗಾ ಬೀಜಗಳನ್ನು ಎಣ್ಣೆಯಲ್ಲಿ ಉಪ್ಪು ಖಾರ ಹಾಕಿ ಹುರಿಯುತ್ತಿದ್ದರು.


ಹಬ್ಬ - ಹರಿದಿನ :


ಹೋಳಿಹುಣ್ಣಿಮೆ ,ಶಿವರಾತ್ರಿ, ಮೊಹರಂ, ಕಾರಹುಣ್ಣಿಮೆ,
ಯುಗಾದಿ ಎಳ್ಳಮವಾಸಿ, ನಾಗರಪಂಚಮಿ ಮತ್ತು ಕಾಮದಹನ ಮುಂ. ಹಬ್ಬ ಹರಿದಿನಗಳ ಬಣ್ಣನೆ ಇದೆ.


ದೇವರು-ದಿಂಡರು:


ಸೂರ್ಯ ಚಂದ್ರ, ಚುಕ್ಕಿ, ಹುಣ್ಣಿವೆ,ಅಮವಾಸಿಗಳ ವರ್ಣನೆಗಳ ಜೊತೆಗೆ ದೇವರಿಗೆ ನಡೆದುಕೊಳ್ಳುವ ಸಹ ಜನಗಳ ಭಕ್ತಿಯನ್ನು ಒರೆಗೆ ಹಚ್ಚುತ್ತಿದ್ದರು. ಕಲ್ಬುರ್ಗಿ ಶರಣಬಸವ, ಸಾವಳಗಿ ಶಿವ
ಲಿಂಗೇಶ್ವರ ಚುಂಚರ ಮಹಾಪುರ ತಾಯಿ ಖತಲ ಸಾಬಪೀಠ
 ಕೆಳಗೇರಿ ಮರಗಮ್ಮ ಹಣಮಪ್ಪ ಲಕ್ಷೀ ಗೋಳ್ಯಾದ ಲಕ್ಕವ ನಾಗವಿ ಎಲ್ಲಮ್ಮ ಗುಡ್ಡದ ಮಲ್ಲಯ್ಯ ಮತ್ತು ಖಾಜಾ ಬಂದೇ
ನವಾಜ ಮುಂತಾದ ದೇವರುಗಳ ಜೋತೆಗೆ ಜನರ ಭಕ್ತಿ ಕಾಣಸಿಗುತ್ತದೆ.


ಈ ಕಾದಂಬರಿ ಆರಭದಿಂದ ಅಂತ್ಯದವರೆಗೂ ಸಿಂದಿಗೊಬ್ಬಿಗಳ ಬಗ್ಗೆ ಬಹಳಷ್ಟು ಹೇಳಲಾಗಿದೆ. ಇಂದಿನ ರಮ್, ವಿಸ್ಕಿ, ಬ್ರಾಂಡಿ
ಗಳ ಮಧ್ಯದಲ್ಲಿಯು ಸಹ ಸಿಂದಿಗಳು ಬಹಳಷ್ಟು ಪ್ರಸಿದ್ಧವಾಗಿವೆ. ಸಿಂದಿಗಳ ಬರಿಯ ಬುರುಗಿನಂತೆ ಇದ್ದು ಇದರ ರುಚಿ ಹೇಗಿದೆ ಎಂಬುದನ್ನು ನೋಡಲು ಈಗ ಸಿಂದಿ ಸಿಗುವದಿಲ್ಲ ಸಿಗುವದಿಲ್ಲ ಸಿಂದಿ ಮಗಿಗಳು ಸಹ ಎಲ್ಲೂ ಕಾಣುವುದಿಲ್ಲ ಈಚಲು ಮರಗ
ಳಂತೂ ಈಗ ಬರಿ ಪುಸ್ತಕದ ಚಿತ್ರವಾಗಿದೆ.


ಆಮಾದಾರ ಮಲ್ಲಪ್ಪನ ಮನೆಯಲ್ಲಿ ಎಲ್ಲರೂ ದೊಡ್ಡವರ ಸಣ್ಣ
ವರೆಂಬುದು ಇಲ್ಲದೆ ಅಂಗಳದಲ್ಲಿ ಕುಳಿತು ಕುಡಿಯುತ್ತಿದ್ದರೆ. ಆದ
ರೆ ಈಗ ಜನ ಸಿಂದಿ ಬಗ್ಗೆ ಹೇಳಿದರೆ ಸಾಕು ಸಿಂದಿ ಅನ್ನುವ ಶಬ್ದದ ಪರಿಚಯವೆ ಇಲ್ಲವೆಂದು ತೋರುತ್ತದೆ.


ಶಿವಳ್ಳಿಯ ಜಮಾದಾರ ಮಲ್ಲಪ್ಪ ಅವನ ಹೆಂಡತಿ ಮಲ್ಲಮ್ಮನ ಶಿವಳ್ಳಿಯ ಕೆಳಗೇರಿ ಓಣಿಯಲ್ಲಿ ಇವದೊಂದು ಮನೆ ಇತ್ತು. ಒಂ
ದು ತೋಟವು ಸಹ ಇತ್ತು. ಸರ್ಕಾರ ಕೊಟ್ಟ ಜಮೀನು ಇತ್ತು. ಮಲ್ಲಪ್ಪ ಇವರು ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ. ಮೊದಲನೆ ಮಗಳು ಶಾಣಮ್ಮ ಈಕೆಯನ್ನು ಗುಲ್ಬರ್ಗಾ ಶಹ
ರದ ಬಟ್ಟಿ ಗಿರಣಿಯಲ್ಲಿ ಕೆಲಸ ಮಾಡುವ ಹಾಲಪ್ಪನೊಂದಿಗೆ ಮದುವೆ ಮಾಡಿಕೊಡಲಾಯಿತ್ತು. ಗಂಡ-ಹೆಂಡತಿ ಇಬ್ಬರು ಸಂತೋಷದಿಂದ ಇದ್ದರು. ಇವರಿಬ್ಬರ ಮಕ್ಕಳೆ ಬೆಳ್ಳಿ ಮತ್ತು ಶಿವು.


ಜಮಾದಾರ ಮಲ್ಲಪ್ಪ ಶಿವಳ್ಳಿಯಲ್ಲಿ ಕೆಳಗೇರಿಯಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ. ಎಲ್ಲ ಧರ್ಮ ಕಾರ್ಯಗಳು ಜಾತ್ರೆ ಮುಂ
ತಾದ ಹಬ್ಬ ಹರಿದಿನಗಳನ್ನು ಸಂತೋಷದಿಂದ ಆಚರಿಸು
ತ್ತಿದ್ದನು. ಮಲ್ಲಪ್ಪನ ಸಹಾಯಕನಾಗಿ ಪತರು ಎಂಬ ಮುಸ್ಲಿಂ ಯುವಕನಿದ್ದನು. ಅವನ ತಂದೆಯಾಗಿ ಸ್ವಂತ ಮಗನಂತೆ ಬೆಳೆಸಿದ. ಮಲ್ಲಪ್ಪನ ಮನೆಯಲ್ಲಿ ಜಾತಿ ಭೇದ ಮಾಡದೆ ಎಲ್ಲರನ್ನು ಸಮಾನನಾಗಿ ನೋಡಿಕೊಂಡಿದ್ದ ಮನೆಯವರ ಎಲ್ಲರು ಚೆಂದದಿಂದ ಅಂಗಳದಿಂದಲ್ಲಿ ಕುಳಿತು ಊಟ ಮಾಡು
ತ್ತದ್ದರು ಈಚಲು ಮರದ ಸಿಂದಿಗಳನ್ನು ಕುಡಿಯುತ್ತಿದ್ದರು.


ಈ ಮಲ್ಲಪ್ಪನ ಎರಡನೆಯ ಮಗಳೆ ಕಾಶಮ್ಮ ಕಪ್ಪು ಮುಖದ ಚಲುವೆ. ಈಕೆ ಎಂದು ದಿನ ತೋಟದಿಂದ ಬರಬೇಕಾದರೆ ಆ ಶಿವಳ್ಳಿಯ ಸಾವುಕಾರನ ಮಗ ಲಿಂಗರಾಜ ಎದುರಾಗುತ್ತಾನೆ. ಆಕಸ್ಮಿಕ ಬೇಟಿಯ ಪ್ರೀತಿಗೆ ತಿರುಗಿ ಪ್ರಣಯಕ್ಕೆ ತಿರುಗಿತು ಇದರ ವಿಷಯ ತಿಳಿದ ಸಾವುಕಾರ ಲಿಂಗರಾಜಪ್ಪನ ಅಪ್ಪ ಮಲ್ಲ
ಪ್ಪನನ್ನು ಕರೆದು ಹಿಯಾಳಿಸಿ ಮಾತನಾಡಿ ಕಳುಹಿಸುತ್ತಾನೆ. ಇದರಿಂದ ಮನೆಯರೆಲ್ಲ ಮನನೊಂದ ದು:ಖಕ್ಕಿಡಾಗುತ್ತಾರೆ. ಹೇಗಾದರು ಮಾಡಿ ಕಾಶಮ್ಮಳನ್ನು ಬೇರೆ ಮದುವೆ ಮಾಡ
ಬೇಕು ಎಂದು ನಿಶ್ಚಯಿಸುತ್ತಾರೆ. ಆದರಿಂದ ಮಲ್ಲಪ್ಪನ ಮಗ ಕಲ್ಯಾಣಿ ಮತ್ತು ಪತರನ ಜೊತೆ ಕಲ್ಬುರ್ಗಿಯ ಹಾಲಪ್ಪನ ಮನೆಗೆ ಕಾಶಮ್ಮಳನ್ನು ಕಳುಹಿಸುತ್ತಾರೆ.


ಕಾಶಮ್ಮಳನ್ನು ಕಲ್ಬುರ್ಗಿಯಲ್ಲೆ ಯಾರಾದರು ವರ ನೋಡಿ ಕೊಡಬೇಕೆಂದು ನಿಶ್ಚಯಿಸುತ್ತಾರೆ. ಆದರೆ ಕಲ್ಬುರ್ಗಿಯಲ್ಲೆ ಬಿಟ್ಟು ಮಲ್ಲಪ್ಪ ಕಲ್ಯಾಣಿ ಪತರುನನ್ನು ಊರಿಗೆ ಕರೆದುಕೊಂಡು ಬರು
ತ್ತಾನೆ. ಮುಂದೆ ಕೆಲ ದಿನಗಳ ನಂತರ ಕಾಶಮ್ಮ ತನ್ನ ಹಳೆಯ ಸಂಪೂರ್ಣ ನೆನಪುಗಳನ್ನು ಮರೆತು ಹೊಗುತ್ತಾಳೆ. ಹಾಲಪ್ಪ ಸ್ನೇಹಿತ ಮಾರ್ತಾಂಡ ಸೋಲ್ಲಾಪುರದ ಬಟ್ಟೆಗಿರಣಿಯಲ್ಲಿ ಕೆಲ
ಸ ಮಾಡುತ್ತಿರುತ್ತಾನೆ. ಹುಡುಗನನ್ನು ನೋಡಿ ಕಾಶಮ್ಮ ಒಪ್ಪು
ತ್ತಾಳೆ. ಸಂತೋಷದಿಂದ ಎಲ್ಲರು ಕಾಶಮ್ಮ ಮಾರ್ತಾಂಡರ ವಿವಾಹ ಮಾಡಿ ಯುವ ಜೋಡಿಗಳನ್ನು ಸೋಲ್ಲಾಪುರಕ್ಕೆ ಕಳು
ಹಿಸುತ್ತಾರೆ. ಇಲ್ಲಿ ಎಲ್ಲರು ಸಂತೋಷದಿಂದ ಕಾಲ  ಕಳೆಯು
ತ್ತಾರೆ.


ಮಲ್ಲಪ್ಪನ ಮಗ ಕಲ್ಯಾಣಿ ತನ್ನ ಅಕ್ಕನ ಮಗಳಾದ ಬೆಳ್ಳಿಯನ್ನು ಪ್ರೀತಿಸುತ್ತಾನೆ. ಮತ್ತು ಮಲ್ಲಪ್ಪನ ಮಗಳಾದ ಶಾಣಮ್ಮಳು ಕೂಡಾ ಕಲ್ಯಾಣಿಗೆ ಬೆಳ್ಳಿಯನ್ನೇ ಕೊಟ್ಟು ತವರು ಮನೆ ಸಂ
ಬಂಧ ಗಟ್ಟಿ ಗೊಳಿಸಬೇಕೆಂದು ನಿರ್ಧರಿಸುತ್ತಾಳೆ. ಇದಕ್ಕೆ ಹಾಲ
ಪ್ಪನ ಸಮ್ಮತಿಯು ಸಹ ದೊರೆಯುತ್ತದೆ. ಆಗ ಎಲ್ಲರೂ ಸೇರಿ ಕಲ್ಯಾಣಿ ಮತ್ತು ಬೆಳ್ಳಿಯರ ಮದುವೆ ಮಾಡುತ್ತಾರೆ.


ಸೋಲ್ಲಾಪುರದಲ್ಲಿದ್ದ ಕಾಶಮ್ಮ ತನ್ನ ತವರು ಮನೆಯಾದ ಶಿವ
ಳ್ಳಿಗೆ ಯಾವ ಸಮಾರಂಭಕ್ಕೂ ಯಾವ ಕಾರ್ಯಕ್ಕೂ ಬಂದಿ
ರುವದಿಲ್ಲ ಈಗಲಾದರು ಕಾಶಮ್ಮನನ್ನು ಕರೆಯಲೇಬೆಕೆಂದು ನಿರ್ಧರಿಸುತ್ತಾನೆ. ಮಲ್ಲಪ್ಪ ಕಾರಹುಣ್ಣಿವೆ, ಮೊಹರಂ ಒಂದೇ ಸಾರಿ ಹಬ್ಬಗಳು ಬಂದಿರುವದರಿಂದ ಹಾಲಪ್ಪನನ್ನು ಮಲ್ಲಪ್ಪ ಕಾಶಮ್ಮನನ್ನು ಕರೆಯಲು ಸೋಲ್ಲಾಪುರಕ್ಕೆ ಕಳುಹಿಸುತ್ತಾನೆ. ಕಾಶಮ್ಮ ಮತ್ತು ಶಾಣಮ್ಮ ಇಬ್ಬರು ಹಬ್ಬಕ್ಕೆ ಬರುತ್ತಾರೆ.


ಹಬ್ಬದ ದಿನದಂದು ಅಲಯ ಪೀಠಗಳ ಮೆರವಣಿಗೆ ನಡೆ
ಯುವಾಗ ಕಾಶಮ್ಮ ಸಾವುಕಾರ ಲಿಂಗರಾಜನನ್ನು ನೋಡು
ತ್ತಾಳೆ. ನೋಡಿದ ಮರು ದಿನವೇ ಕಾಶಮ್ಮ ಲಿಂಗರಾಜನನ್ನು ಅವನ ತೋಟದ ಮನೆಯಲ್ಲಿ ಬೇಟಿಯಾಗಿ ಅವನನ್ನು ಬಿಗಿದಪ್ಪಿ ಅಳುತ್ತಾಳೆ. ಆದರೆ ಇವೆಲ್ಲ ಸನ್ನಿವೇಶ ಯಾರಿಗೂ ಗೊತ್ತಾ
ಗುವದಿಲ್ಲ. ಅದಾದ ಮರುದಿನವೇ ಕಾಶಮ್ಮ ಸೋಲ್ಲಾಪುರಕ್ಕೆ ಹೋಗುತ್ತಾಳೆ.


ಕಾಶಮ್ಮ ಸೋಲ್ಲಾಪುರಕ್ಕೆ ಹೋದನಂತರ ಕೆಲವು ವಾರಗಳ ನಂತರ ಲಿಂಗರಾಜು ಅಲ್ಲಿಗೆ ಬರುತ್ತಾನೆ. ಲಿಂಗರಾಜನಿಗೆ ಈ ಮೊದಲೆ ಬೇರೆ ಹುಡುಗಿಯೊಂದಿಗೆ ವಿವಾಹ ವಾಗಿರುತ್ತದೆ. ಆದರು ಕೂಡಾ ಕಾಶಮ್ಮಳೆ ಬೇಕೆಂದು ಮಾರ್ತಾಂಡನಲ್ಲಿ ಕೇಳಿಕೊಳ್ಳುತ್ತಾನೆ. ಆದರೆ ಏನು ಹೇಳದೆ ಅಸಹಾಯಕ ಸ್ಥಿತಿಯಲ್ಲಿರುವ ಮಾರ್ತಾಂಡನಿಗೆ ಹೇಳಿ ಕಾಶಮ್ಮ ಮತ್ತು ಲಿಂಗರಾಜ ಇಬ್ಬರು ಶಿವಳ್ಳಿಗೆ ಬರುತ್ತಾರೆ. ಲಿಂಗರಾಜ ಗುಟ್ಟಾಗಿ ಕಾಶಮ್ಮಳನ್ನು ಅವನ ತೋಟದ ಮನೆಯಲ್ಲಿಡುತ್ತಾನೆ. ಅಲ್ಲಿಯೆ ಅವಳೊಂದಿಗೆ ಸಂಸಾರ ನಡೆಸುತ್ತಾನೆ.


ಈ ಸುದ್ದಿ ಬರಸಿಡಿಲಿನಂತೆ ಮಲ್ಲಪ್ಪನ ಕುಟುಂಬಕ್ಕೆ ಬಂದೆರಗುತ್ತದೆ. ಸಿದ್ದಿ ಇಡಿ ಕುಟುಂಬವನ್ನೆ ತಲ್ಲಣ ಮಾಡುತ್ತದೆ. ಮನೆಯಲ್ಲಿ ದು:ಖದ ಕಟ್ಟೆಯೆ ಒಡೆದು ಹೋಗುತ್ತದೆ. ಮಲ್ಲಪ್ಪನಿಗಂತೂ ಎದೆ ಗುಂಡಿಗೆ ಒಡೆದು ಹೋಗುತ್ತದೆ. ಇದೇ ವಿಚಾರದಲ್ಲಿ ಮಲ್ಲಪ್ಪ ಚಿಂತೆಮಾಡುತ್ತಾ ತೋಟದಕಡೆ ತಿರುಗಾಡಿಕೊಂಡು ಬರಲು ಹೋಗಿ ಅಲ್ಲಿಯೇ ಕುಳಿತು ಸಿಂದಿಯನ್ನು ಕುಡಿಯುತ್ತಾನೆ. ಸಿಂದಿ ಕುಡಿದು ಮನೆಗೆ ಬರಲು ಸಿದ್ದನಾದಾಗ ತೆಲೆತಿರುಗಿದಂತಾಗುತ್ತದೆ. ಆಗೆಯೇ ಹಳ್ಳ ದಾಟುವಾಗ ಹಳ್ಳದ ರಭಸಕ್ಕೆ ಸಿಕ್ಕು ಮಲ್ಲಪ್ಪ ಅಸುನೀಗುತ್ತಾನೆ.


ಕಾಶಮ್ಮಳ ದು:ಖದಲ್ಲೆ ನೊಂದು ಬೆಂದಿರುವ ಮಲ್ಲಪ್ಪನ ಕುಟುಂಬಕ್ಕೆ ಮಲ್ಲಪ್ಪನ ಸಾವು ಈ ಕುಟುಂಬಕ್ಕೆ ದು:ಖ ತಡೆದುಕೊಳ್ಳುವ ಶಕ್ತಿ ಕೊಡಲಿಲ್ಲ. ಆ ದೇವರು ಕಲ್ಯಾಣಿ ಬೆಳ್ಳಿಯರ ಸುಖದ ಸಂಸಾರ ನೋಡವ ಮೊದಲೆ ಮಲ್ಲಪ್ಪನ ಸಾವು ಮನೆಯವರನ್ನು ಕಾದತೊಡಗಿತು. ಇದರ ನೆನಪಲ್ಲೆ ಮಲ್ಲವ್ವ ಹಾಸಿಗೆ ಹಿಡಿದು ದಿನಗಳನ್ನು ಎಣಿಸತೊಡಗಿದಳು. ದೆವ್ವ ಪಿಶಾಚಿಗಳು ಬಡಿವೆ ಎಂಬ ಭ್ರಾಂತಿಯಿಂದ ಮಲ್ಲವ್ವ ಚಿಂತೆ ಮಾಡತೊಡಗಿದಳು. ಮಲ್ಲವ್ವ ದಿನೆ ದಿನೆ ಕೃಶಳಾಗ ತೊಡಗಿದಳು. ಮೊದಲು ಸಂತೋಷ ಸಂಭ್ರಮದಿಂದ ತುಂಬಿ ತುಳುಕುತಿದ್ದ ಮನೆ ಬರಿದಾಯಿತು. ಬರಿ ನೋವು ದು:ಖ ತುಂಬಿದ ಮನೆ ಬಣಗುಡತೊಡಗಿತು.


ಕಲ್ಯಾಣಿ ತನ್ನ ಅಪ್ಪ ಮಲ್ಲಪ್ಪ ಸತ್ತ ನಂತರ ಜಮಾದಾರಕೆಯನ್ನು ಬಿಡಬೇಕೆಂದು ನಿರ್ಧರಿಸಿ ಆಫೀಸಿಗೆ ಹೋಗಿ ಜಮಾದಾರತನವನ್ನು ಬೇಡವೆಂದು ಸಹಿ ಮಾಡಿದ ಒಕ್ಕಲುತನ ಮಾಡಬೇಕೆಂದು ತಿರ್ಮಾನಿಸಿದ. ಸರಕಾರ ಉಂಬಳಿಯಾಗಿ ಕೊಟ್ಟ ಜಮೀನು ಮರಳಿ ಪಡೆದುಕೊಂಡಿತು. ಕಲ್ಯಾಣಿ ತೋಟದಲ್ಲೆ ದುಡಿಯುವೆನೆಂದು ತಿರ್ಮಾನಿಸಿದ ಪತರುನು ಸಹ ಮೊದಲೆ ಕೆಲೆಸ ಮಾಡಲು ತೋಟದ ಮನೆಯಲ್ಲಿಯೆ ಉಳಿದಳು.


ಕಲ್ಯಾಣಿ ಒಂದು ದಿನ ಸಿಂದಿ ಅಂಗಡಿ ಮುಂದೆ ಕುಂತು ಕುಡಿಯುತ್ತಿರುವಾಗ ಅಲ್ಲಿದ್ದ ಒಬ್ಬ ಕಾಶಮ್ಮಳ ಬಗ್ಗೆ ಅಸಡ್ಡೆಯಾಗಿ ಮಾತನಾಡುತ್ತಾನೆ. ಸಿಟ್ಟಿಗೆದ್ದ ಕಲ್ಯಾಣಿ ಜೋರಾಗಿ ಅವನಿಗೆ ಒದ್ದಾಗ ಬಿದ್ದು ತಲೆ ಕಲ್ಲಿಗೆ ಬಡಿದಾಗ ಅವನು ಅಸುನೀಗುತ್ತಾನೆ. ಪೋಲಿಸರು ಬಂದು ಕಲ್ಯಾಣಿಯನ್ನು ಜೈಲಿಗೆ ಹಾಕುತ್ತಾರೆ. ಕೋರ್ಟನಲ್ಲಿ ಕಲ್ಯಾಣಿಗೆ ೧೪ ವರ್ಷ ಜೈಲುವಾಸವಾಗುತ್ತದೆ. ಅದರ ನೋವಲ್ಲೆ ಮಲ್ಲವ್ವ ಹಾಸಿಗೆ ಹಿಡಿಯುತ್ತಾಳೆ. ಜೈಲು ವಾಸ ಕಡಿಮೆ ಮಾಡಲು ವಕೀಲನನ್ನು ನೆಮಿಸುತ್ತಾಳೆ. ದುಡ್ಡಿಗಾಗಿ ಒಂದು ಹೊಲವನ್ನು ಮಾರುತ್ತಾಳೆ. ಆದರು ಪ್ರಯೋಜವಾಗುವದಿಲ್ಲ. ನಂತರ ತೋಟವನ್ನು ಮಾರಬೇಕೆಂದು ಬೆಳ್ಳಿ ನಿರ್ಧರಿಸುತ್ತಾಳೆ. ಆಗ ಕಾಶಮ್ಮ ತೋಟ ಮಾರುವದು ಬೇಡ ನಾನು ದುಡ್ಡು ಕೊಡುತ್ತೆನೆ ಎಂದು ಹೇಳಿ ದುಡ್ಡು ಕೊಡುತ್ತಾಳೆ.


ಇಂಥ ದು:ಖದ ನಡುವೆ ಅಂದರೆ ಕಲ್ಯಾಣಿಯು ಜೈಲಿಗೆ ಹೋದ ನಂತರ ಬೆಳ್ಳಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಮಲ್ಲವ್ವ ಮೊಮ್ಮಗನೊಂದಿಗೆ ಸಂತೋಷವಾಗಿ ಇರುತ್ತಾಳೆ. ಆದರೆ ನಡುವೆ ಅನಾರೋಗ್ಯದ ಕಾರಣ ಅಸುನಿಗುತ್ತಾಳೆ.


ಇತ್ತ ಕಲ್ಯಾಣಿ ಜೈಲಿನಲ್ಲಿ ಹಳೆಯ ನೆನಪುಗಳನ್ನು ಕೆದಕಿ ದು:ಖದಿಂದ ಬಳಲುತ್ತಿರುತ್ತಾನೆ. ಅವನ ಪ್ರಾಮಾಣಿಕತೆ ಮತ್ತು ನಿಷ್ಟೆಗೆ ೮ ವರ್ಷಗಳ ನಂತರ ಅವನನ್ನು ೧೨ ವರ್ಷಕ್ಕೆ ಬಿಡುಗಡೆ ಮಾಡುವದೆಂದು ಜೈಲಿನ ಮುಖ್ಯ ಅಧಿಕಾರಿ ಹೇಳುತ್ತಾನೆ. ಇದರಿಂದ ಬೆಳ್ಳಿ ಅವರ ಅವ್ವ ಎಲ್ಲರಿಗೂ ಸ್ವಲ್ಪ ಸಮಾಧಾನವಾಗಿರುವಂತೆ ಸಂತೋಷವಾಗಿರುತ್ತಾರೆ.


ಬಹಳ ದಿನಗಳ ನಂತರ ಮಾರ್ತಾಂಡ ಶಿವಳ್ಳಿಗೆ ಬರುತ್ತಾನೆ. ಅವನು ಮೊದಲಿನಂತಿರದೆ ಗಿರಣಿ ಬಿಟ್ಟು ಸನ್ಯಾಸಿಯಾಗಿದ್ದ. ಖಾವಿ ಬಟ್ಟೆ ಉಟ್ಟು ಉದ್ದನೆಯ ಗಡ್ಡ ಬಿಟ್ಟು ಕಲ್ಯಾಣಿಯ ತೋಟಕ್ಕೆ ಬಂದ ಅಲ್ಲಿ ಪತರು ಕಾಶಮ್ಮಳನ್ನು ಕರೆಯಿಸಿದ. ಅಲ್ಲಿ ಅವರಿಬ್ಬರು ಕೆಲ ಹೊತ್ತು ಮಾತನಾಡಿದರು. ಕಾಶಮ್ಮಳನ್ನು ಮತ್ತೆ ಬಾ ಎಂದು ಕರೆಯುತ್ತಾನೆ ಆದರೆ ಅವಳು ಒಲ್ಲೆ ಎನ್ನುತ್ತಾಳೆ ಅಲ್ಲಿಂದ ಅವರು ಹೋಗುತ್ತಾರೆ ಆದರೆ ಮರುದಿನ ಮಾರ್ತಾಂಡ ಶವವಾಗಿ ಹಳ್ಳದ ದಂಡೆಯಲ್ಲಿ ಅವನು ಬಿದ್ದಿರುತ್ತಾನೆ.


ಈ ನಡುವೆ ಕಲ್ಯಾಣಿ ಜೈಲಿನಿಂದ ಬಿಡುಗಡೆಯಾಗಿ ಅವನು ಊರಿಗೆ ಬರುತ್ತಾನೆ. ಆದರೆ ಅವನ ಮಗ ಶಿವಮಲ್ಲು ಮಾತ್ರ ಅಪ್ಪನನ್ನು ಅಸಡ್ಡೆಯಿಂದ ನೋಡಿ ಕಲ್ಬುರ್ಗಿಯಲ್ಲೆ ಉಳಿದ ಕಲ್ಯಾಣಿಯು ಮನ ನೊಂದು ತಿರ್ಥಯಾತ್ರೆಗೆ ತೆರಳಲು ಬೆಳ್ಳಿ ಕಲ್ಯಾಣಿ ತಯಾರಾಗುತ್ತಾರೆ. ಎಲ್ಲರೂ ಬಿಳ್ಕೋಟ್ಟ ನಂತರ ಅವರು ತೆರಳುತ್ತಾರೆ. ಆದರೆ ಅವರು ತೀರ್ಥಯಾತ್ರೆ ಮುಗಿಸಿ ಬರುವಾಗ ಬಸ್ಸು ಅಪಘಾತಕ್ಕೀಡಾಗಿ ಬೆಳ್ಳಿ ಮತ್ತು ಕಲ್ಯಾಣಿ ಅವರು ಅಲ್ಲೆ ಅಸುನೀಗುತ್ತಾರೆ.
ಒಟ್ಟು ಈ ಕಾದಂಬರಿ ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ; ಕನ್ನಡಕ್ಕೆ ಗೀತಾ ನಾಗಭೂಷಣ ಅವರು ನೀಡಿದ ಅರ್ಥಪೂರ್ಣ ಕಾಣಿಕೆಯಾಗಿದೆ.
ಶರಣಬಸವ ಚಿಂಚೋಳಿ ಬಿ. ಎ. ೨

ಹಗರಟಗಿಯ ಅಪೂರ್ವ ದೇವಾಲಯಗಳು




ಹಗರಟಗಿಯು ತಾಲೂಕು ಕೇಂದ್ರವಾದ ಸುರಪುರದಿಂದ ನೈ‌ಋತ್ಯಕ್ಕೆ ೪೮ ಕಿ.ಮೀ.ದೂರದಲ್ಲಿ ದೋಣಿಯ ಎಡ ದಂಡೆಯ ಮೇಲಿರುವ ಚಾರಿತ್ರಿಕ ಮಹತ್ವದ ಪ್ರಾಚೀನ ಕೇಂದ್ರ. ಬೃಹತ್ ಶಿಲಾಯುಗ ಸಂಸ್ಕೃತಿಯ ನೆಲೆಯೂ ಆಗಿದ್ದು ಇದು ಶಾತವಾಹನರ ಕಾಲದ ಅವಶೇಷಗ ಳನ್ನು ಹೊಂದಿದ್ದರೂ ಐತಿಹಾಸಿಕ ದಾಖಲೆಗಳಲ್ಲಿ ನಿಖರವಾಗಿ ಗೋಚರಿಸಲಾರಂಭಿಸುವುದು ಹನ್ನೊಂದನೆಯ ಶತಮಾನದಿಂದೀಚೆಗೆ. ಸುಮಾರು ೧೧- ೧೨ ನೇ ಶತಮಾನದ ಹತ್ತಾರು ಶಿಲಾಶಸನಗಳಲ್ಲಿ ‘ಪಗಲಟ್ ೩೦೦’, ‘ಪಗರಿಟೆಗಾಡು’, ‘ಹಗರಟ್ಟಿಗೆ -೩೦೦’ ಎಂದೇ ಉಲ್ಲೇಖಿತಗೊಂಡು ೩೦೦ ಹಳ್ಳಿಗಳ ಆಡಳಿತ ಕೇಂದ್ರವಾಗಿ , ಧಾರ್ಮಿಕ ಕೇಂದ್ರವಾಗಿ ಮತ್ತು ಶೈಕ್ಷಣಿಕ ಕೇಂದ್ರವಾಗಿ ಮೆರೆದಿರುವ ಈ ಊರಿನಿಂದ ಈವರೆಗೆ೧೨ ಶಾಸನಗಳು ವರದಿಯಾಗಿವೆ. ಇವುಗಳಲ್ಲಿ ೬ ಕಲ್ಯಾಣ ಚಾಲುಕ್ಯರಿಗೂ, ಒಂದು ಕಳಚೂರ್ಯರಿಗೂ ಸೇರಿದ್ದು ಉಳಿದವು ದೇವಗಿರಿಯ ಯಾದವರ ಕಾಲದ್ದಾಗಿವೆ.



ಈ ಮೇಲಿನ ಆಧಾರಗಳಿಂದ ಹಗರಟಗಿಯು ಹಿಂದೆ ಸಾಮರಸ್ಯದ ಉತ್ತಮ ಅಗ್ರಹಾರವಾಗಿದ್ದು ೫೦೦ ಮಹಾಜನರನ್ನು ಹೊಂದಿದ್ದು, ಪಾಂಡವ ದತ್ತಿ ಊರೆಂದು ಪ್ರಸಿದ್ಧವಾಗಿತ್ತೆಂದು ತಿಳಿದುಬರುತ್ತದೆ. ಇವುಗಳಲ್ಲಿ ೬ನೇ ವಿಕ್ರಮಾದಿತ್ಯನ ಆಳ್ವಿಕೆಗೆ ಸೇರಿದ ೧೦೯೨ ರ ಶಾಸನವೇ‌ಅತ್ಯಂತ ಪ್ರಾಚೀನ ಶಾಸನವಾಗಿದ್ದು ಮಹಾಪ್ರಧಾನ ದಂಡನಾಯಕ ಅಹಮಲ್ಲರಸನ ಹಗರಟ್ಟಿಗೆಯ ನಖರೇಶ್ವರ ದೇವರಿಗೆ ೩೦೦ ಮತ್ತರು ಭೂಮಿಯನ್ನು ದಾನಮಾಡಿದ ಅಂಶವನ್ನು ಅರುಹಿದರೆ, ಕರ್ಣನ ಗುಡಿಯ ಮುಂದಿರುವ ೧೧೨೩ ರ ತೃಟಿತ ಶಾಸನ ಅದೇ ನಖರೇಶ್ವರ ದೇವರಿಗೆ ಅಲ್ಲಿನ ಮಾಹಾಜನಗಳೂ ಸೇರಿದಮ್ತೆ ಇತರರು ನೀಡಿದ ವಿವಿಧ ದಾನಗಳ ಬಗ್ಗೆ ಹೇಳುತ್ತದೆ. ಊರ ಪಶ್ಚಿಮದಲ್ಲಿರುವ ಕಳ್ಳರ ಗುಡಿ ಮುಂದಿರುವ ೧೧೨೯ ರ ಭಾಗಶಃ ಹಾಳಾಗಿರುವ ಶಾಸನವು ಮಲ್ಲಿಕಾರ್ಜುನ ಗುಡಿಯ ನಿರ್ಮಾಣದ ಬಗ್ಗೆ ಪ್ರಾಸ್ತಾಪಿಸುತ್ತ ಸಾಂದರ್ಭಿಕವಾಗಿ ಲಕ್ಕಣೇಶ್ವರ ದೇವಾಲಯದ ಬಗೆಗೂ ಹೇಳುತ್ತದೆ.



ಆರನೇ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ ಹಗರಟಗಿಯ ಮತ್ತೊಂದು ಶಾಸನ ಭೋಗಾರ ನಖರ ಸಂಘದ ೧೨೦ ಒಕ್ಕಲುಗಳು ಕೂಡಿ ಶಿವಾಲಯವನ್ನು ನಿರ್ಮಿಸಿ, ಅನೇಕ ದಾನಗಳನ್ನು ನೀಡಿದ ಅಂಶವನ್ನು ಹೇಳುತ್ತದೆ. ಊರ ಹೊರಗಿರುವ ಬಸವಣ್ಣನ ಗುಡಿಯಲ್ಲಿ ೩ ಶಾಸನಗಳಿದ್ದು ಇವುಗಳಲ್ಲಿ ಇಮ್ಮಡಿ ಜಗದೇಕಮಲ್ಲನ ಕಾಲಕ್ಕೆ ಸೇರಿದ ೧೧೪೪ ರ ಶಾಸನ ಹಗರಟಗಿಯ ಮಹಾಜನರು ಹಾಗೂ ಐಹೊಳೆ- ೫೦೦ ಶ್ರೇಣಿಯು ಸೇರಿದಂತೆ ವಿವಿಧ ವರ್ಗದವರು ತಾವೇ ನಿರ್ಮಿಸಿದ ಗವರೇಶ್ವರ ದೇವರ ಅಂಗಭೋಗಕ್ಕೆಂದು ಮಾಣಿಕೇಶ್ವರದ ಕೋಲಲ್ಲಿ ೫ ಮತ್ತರು ಭೂಮಿಯೂ ಸೇರಿದಂತೆ ವಿವಿಧ ಸುಂಕಗಳನ್ನು ದಾನಬಿಟ್ಟ ವಿಷಯವನ್ನು ತಿಳಿಸುತ್ತದೆ. ಮತ್ತೊಂದು ಶಾಸನ ಕೊಳಗದ ಮಲ್ಲಿಮಯ್ಯ ತಾನು ಮಾಡಿಸಿದ ಮಲ್ಲಿಕಾರ್ಜುನ ದೇವರಿಗೆಂದು ಭೂಮಿಯನ್ನು ಕೊಂಡು ಗವರೇಶ್ವರ ದೇವಾಲಯದ ಆಚಾರ್ಯ ಸೂರ್ಯರಾಶಿ ಪಂಡಿತರಿಗೆ ಧಾರೆಯೆರೆದ ಅಂಶವನ್ನು ಹೇಳುತ್ತದೆ. ಇದೇ ಗುಡಿಯಲ್ಲಿರುವ ೧೧೬೬ ರ ಮೂರನೇ ಶಾಸನ ಕಳಚೂರ್ಯ ಸುಂಕಮದೇವನಾಗಿದ್ದು ,ಅಲ್ಲಿನ ವರ್ತಕರು ಗವರೇಶ್ವರ ಪೂಜೆ ಪುನಸ್ಕಾರಕ್ಕೆಂದು ಭೂಮಿಯನ್ನು ಖರೀದಿಸಿ ದಾನಬಿಟ್ಟ ವಿಷಯವನ್ನು ಹೇಳುತ್ತದೆ. ಅವರು ಖರೀದಿಸಿದ ಭೂಮಿ ಸತ್ರದ ತ್ರೀಕೂಟೇಶ್ವರ ದೇವಾಲಯಕ್ಕೆ ಸೇರಿದ್ದೆಂಬ ಮಹತ್ವದ ವಿಷಯವನ್ನು ತಿಳಿಸುತ್ತದೆ. ಜೊತೆಗೆ ಅಲ್ಲಿಯ ಭೈರವ ದೇವರಿಗೆಂದು ಪ್ರತ್ಯೇಕ ಭೂದಾನ ಬಿಟ್ಟ ಅಂಶವನ್ನು ತಿಳಿಸುತ್ತದೆ.



ಭೀಮನ ಗುಡಿಮುಂದೆ ಬಿದ್ದಿರುವ ಶಿಲಾಶಾಸನವು ಯಾದವ ಇಮ್ಮಡಿ ಸಿಂಘನದೇವ ಆಳ್ವಿಕೆಗೆ ಸೇರಿದ್ದು ೧೨೧೮ ರ ಹಗರಟಗಿಯ ಮಹಾಜನರು ಸೆಟೆಗುತ್ತ,ರಾಮಿಸೆಟ್ಟಿ,ಮಮ್ಮರಿದಂಡರು ಹಾಗೂ ಬಿಲ್ಲ ಮುನ್ನೂರ್ವರು ಮಹಾಸಭೆಯಾಗಿ ನೆರೆದು ಅಲ್ಲಿಯ ಸ್ವಯಂಭು ಭೀಮೇಶ್ವರ ದೇವರ ಸ್ಥಾನಾಚಾರ್ಯ ಬ್ರಹ್ಮರಾಶಿ ಪಂಡಿತರಿಗೆ ದಾನಕೊಟ್ಟ ವಿಷಯ ತಿಳಿಸುತ್ತದೆ.



ತ್ರಿಕೂಟೇಶ್ವರ ,ಸಿಡಿಲಭಾವಿ,ರಾಮನಥಸಿದ್ಧ ಪಂಚಸ್ಥಾನ, ನಖರೇಶ್ವರ, ಗವರೇಶ್ವರ ಹಾಗೂ ಭೈರವನ ದೇವಾಲಯ :


ಈ ಎಲ್ಲ ದೇವಾಲಯಗಳನ್ನು ಇಂದು ಹಗರಟಗಿಯಲ್ಲಿ ಗುರುತಿಸಬಹುದಾಗಿದೆ. ಹಗರಟಗಿಯು ಕೋಟೆಯಿಂದಾವೃತವಾಗಿದ್ದು , ನಾಲ್ಕೂ ದಿಕ್ಕಿನಲ್ಲೂ ಅಗಸೆಗಳನ್ನು ಹೊಂದಿದೆ. ಹಿಂದೆ ರಾಜಕೀಯ ಪ್ರಾಮುಖಪಡೆದ ಈ ಊರು ಇಂದು ಹಾಳಾಗಿದೆ. ಶಾಸನೋಕ್ತ ದೇವಾಲಯಗಳು ಊರಹೊರಗೆ ಶಿಥಿಲಾವಸ್ಥೆಯಲ್ಲಿ ನಿಂತಿವೆ.



ಊರ ಆಗ್ನೇಯಕ್ಕೆ ಬೂದಿಹಾಲ ರಸ್ತೆಯಲ್ಲಿ ನೀಲಕಂಠಗೌಡರ ಹೊಲದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಸನಸ್ಥ ನಖರೇಶ್ವರ ಗುಡಿಯನ್ನು ಇಂದು ಸ್ಥಳಿಕರು ‘ಕರ್ಣನ ಗುಡಿ’ ಯೆಂದು ಕರೆಯುತ್ತಾರೆ. ಪೂರ್ವಾಭಿಮುಖವಾಗಿರುವ ಈ ಗುಡಿಯು ಗರ್ಭಗೃಹ ,ಅಂತರಾಳ,ನವರಂಗಗಲನ್ನು ಹೊಂದಿದೆ. ನಿರಾಡಂಬರವಾಗಿರುವ ಈ ಗುಡಿಯ ಗರ್ಭಗುಡಿಯು ಬರಿದಾಗಿದ್ದು ,ಇದರ ಬಾಗಲವಾಡವು ಸರಳವಾದ ಮೂರು ಶಾಖೆಗಳನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮಿ ಇದೆ. ನವರಂಗದಲ್ಲಿ ಎರಡು ದೇವ ಕೋಷ್ಟಕಗಳಿದ್ದು ಒಂದರಲ್ಲಿ ನಾಗಶಿಲ್ಪವಿದೆ. ಕದಂಬ ನಾಗರ ಶಿಖರವುಳ್ಳ ಈ ಗುಡಿಯ ಮುಂದಿರುವ ತ್ರುಟಿತ ಶಾಸನ ಉಲ್ಲೇಖಿಸುವ ನಖರೇಶ್ವರ ಗುಡಿ ಇದಾಗಿದ್ದು ಹಿಂದೆ ವರ್ತಕರ ಆರಾದ್ಯ ದ್ವೆವವಾಗಿತ್ತು.

ಬೂದಿಹಾಳ ರಸ್ತೆಯಯಲ್ಲಿ ಸ್ವಲ್ಪ ಎಡಕ್ಕೆ ಇರುವ “ಮೂರು ಕಳಸದ ಗುಡಿ” ಕೂಡಾ ಪೂರ್ವಕವಾಗಿದ್ದು,ಪಶ್ಚಿಮ,ಉತ್ತರ ಹಾಗೂ ದಕ್ಷಿಣದಲ್ಲಿ ಪ್ರತ್ಯೇಕ ಗರ್ಭಗೃಹ ಹಾಗೂ ಅರ್ದ ಮಂಟಪಗಳನ್ನು ಹೊಂದ್ದಿದ್ದು ಇವುಗಳಿಗೆ ಒಂದೇ ನವರಂಗವಿದೆ. ಗರ್ಭಗುಡಿಯ ಬಾಗಿಲವಾಡವು ಸರಳವಾಗಿದ್ದು, ಇಕ್ಕೆಲದಲ್ಲಿ ಪೂರ್ಣ ಕಳಸಗಳಿದ್ದು, ಲಲಾಟವು ನಿರಡಂಬರವಾಗಿದೆ. ಈ ತ್ರಿಕೂಟ ದೇವಾಲಯದ ದಕ್ಷಿಣ ಭಾಗವು ಪೂರ್ಣ ಶಿಥಿಲವಾಗಿದ್ದು, ಕದಂಬ ನಾಗರ ಶೈಲಿಯ ಶಿಖರಗಳು ಉಳಿದೆರಡು ಗರ್ಭಗೃಹಗಳನ್ನು ಅಲಂಕರಿಸಿವೆ.


ಹರಿಜನ ಇರುವ ಕೇರಿಯ “ವೆಕಂಬರಮಣ ಗುಡಿಯ” ಬಳಿ ಇರುವ ಶಾಸನವು ಯಾದವ ಇಮ್ಮಡಿ ಸಿಂಘಣನ ಆಳ್ವಿಕೆಗೆ ಸೇರಿದ್ದು, ೧೨೨೦ ರಲ್ಲಿ ಸಮುಖದಲ್ಲಿ ತ್ರಿಪುರಾಂತಕದೇವ, ದೇವ, ಉಮಾಭವ ಹಾಗೂ ಕೇರವ ದೇವರ ಸೆವೆಗೆಂದು ಚಂದ್ರಶಿವ ಪಂಡಿತರಿಗೆ ನಾಲ್ಕು ಮತ್ತ್ರುರು ಭೂಮಿಯನ್ನು ದಾನ ಬಿಟ್ಟ್ ವಿಷಯನ್ನು ತಿಳಿಸುತ್ತದೆ. ಊರ ಅಗಸಿ ಬಾಗಿಲ ಗೋಡೇಯಲ್ಲಿ ಸೇರಿರುವ ೧೨೨೪ರ ನಿಶಿದ ಶಾಸಾನವು ಜೈನ ಧರ್ಮಕ್ಕೆ ಸೇರಿದ್ದು, ಇಂಗಳೇಶ್ವರಕ್ಕೆ ಅಧಿನವಾಗಿದ್ದ ಮೂಲ ಮೂಲಸಂಘ ಪುಸ್ತಕ ಗಚ್ಚ, ದೇಶಿಯ ಗಣದ ಕೊಂಡಕುಂದ್ರಯಾದ್ರಿಯ ದೇವಚಂದ್ರ ಮುನಿಗಳು ಸಲ್ಲೇಖನ ವೃತವನ್ನು ಆಚರಿಸಿ ನಿರ್ವಾಣ ಹೊಂದಿದ ವಿಚಾರವನ್ನು ತಿಳಿಸುತ್ತದೆ. ಈ ನಿಷಿದೆಗೆಯನ್ನು ಒಬ್ಬರ ಕಾಳಿಸೆಟ್ಟಿ ಮೂಡಿಸಿದನೆಂದು ಹೇಳುತ್ತದೆ. ಇದರಿಂದ ಹಗರಟಗಿಯು ಹಿಂದೆ ಜೈನರ ನೆಲೆಯಾಗಿತ್ತೆಂದು ತಿಳಿದು ಬರುತ್ತದೆ.



ಊರ ಹನುಮಂತನ ಗುಡಿಯಲ್ಲಿ ಇರುವ ೧೨೨೯ರ ಶಾಸನವು ಯಾದವ ಇಮ್ಮಡಿ ಸಿಂಘಣನ ಕಾಲದ್ದಾಗಿದೆ. ಹಗರಟಗಿಯ ಕೇತಗಾವುಂಡನ ಇಬ್ಬರು ಮಕ್ಕಳಾದ ರಾಮಗಾವುಂಡ ಹಾಗೂ ಸಿಂಘಗಾವುಂಡ , ತಾವು ಪ್ರತಿಷ್ಠೆ ಮಾಡಿದ ಸಿಡಿಲ ಬಾವಿ ರಾಮನಾಥ, ಐನೂರೇಶ್ವರ, ಬಾಚೇಶ್ವರ,ಕೇತೇಶ್ವರ ಹಾಗೂ ಚೌಡೇಶ್ವರ ದೇವರುಗಳಿದ್ದ ಪಂಚ ಸ್ಥಾನದ ಎಲ್ಲ ದೇವರುಗಳಿಗೆಂದು ಭೂದಾನಮಾಡಿದ ಸಂದರ್ಭದಲ್ಲಿ ಅಲ್ಲಿಯ ತೊಂಭತ್ತೆರಡು ಜೇಡ ಪಟ್ಟೇಗಾರರು ಆದೇವರಿಗೆ ಚೈತ್ರ-ಪವಿತ್ರಕ್ಕೆಂದು ಒಕ್ಕಲಿಗೆ ಒಂದೊಂದರಂತೆ ಹಾಗೂ ದಾನಕೊಟ್ಟ ಅಂಶವನ್ನು ತಿಳಿಸುತ್ತದೆ. ಭೀಮನಗುಡಿ ಮುಂದೆ ನಾಲ್ಕಾರು ವೀರಗಲ್ಲುಗಳಿದ್ದು ಅವುಗಳಲ್ಲೊಂದರ ಮೇಲಿನ ಶಾಸನವು ತುರುಕಾಳಗದಲ್ಲಿ ಮಡಿದ ತನ್ನಣ್ಣನಿಗಾಗಿ ಈ ಕಲ್ಲನ್ನು ರೇವಣ್ಣ ನಿಲ್ಲಿಸಿದರೆಂದು ಹೇಳುತ್ತದೆ. ಹಗರಟಗಿಯ ಸಾಂಸ್ಕ್ರತಿಕ ಇತಿಹಾಸವನ್ನು ಸ್ವಯಂಭರಿ ಭಿಮೇಶ್ವರ ಲಕ್ಷ್ಮೇನೆಶವರ, ಮಲ್ಲಿಕಾರ್ಜುನ, ತ್ರಿಪುರಾಂತರ, ಇದು ತ್ರಿಕೂಟವಾಗಿದ್ದು, ಹಿಂದೆ ಇಲ್ಲಿ ಶಿಕ್ಷಣ ವ್ಯವಸ್ಥೆ ಇರುತ್ತಿತ್ತು.


ಸಂಗನಗೌಡ ಪೋಲಿಸ ಪಾಟೀಲರ ಹೊಲದಲ್ಲಿರುವ ‘ನಾರಾಯಣ ಗುಡಿ’ ( ಕಳ್ಳರ ಗುಡಿ)ಯು ಗರ್ಭಗ್ರುಹ ತೆರೆದ ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ಪೂರ್ವಾಭಿಮುಖವಾಗಿದ್ದು ಶಿಖರವೂ ಸೇರಿದಂತೆ ಹಲವಾರು ಭಾಗಗಳು ಕಣ್ಮರೆಯಾಗಿವೆ. ಶಿಥಿಲಾವಸ್ಥೆಯಲ್ಲಿರುವ ಕಂಬಗಳು ಆಕರ್ಷಕವಾಗಿವೆ. ನವರಂಗದಲ್ಲಿ ದೇವ ಕೋಷ್ಟಗಳಿದ್ದು ಬರಿದಾಗಿವೆ. ಈ ದೇವಾಲಯದ ಮುಂಭಾಗದಲ್ಲಿ ಹೊಂಡವಿದೆ. ಶಾಸನೋಕ್ತ ‘ಮಲ್ಲಿಕಾರ್ಜುನ ಗುಡಿ ‘ ಇದೇ ಆ‌ಅಗಿರಬಹುದು. ಈ ಗುಡಿಯ ಸಮೀಪದಲ್ಲಿಯೆ ಪೂರ್ವಾಭಿಮುಖವಾಗಿ ಗಂಗಾಧರೇಶ್ವರ ಗುದಿ ಇದೆ. ಗರ್ಭಗೃಹ ,ತೆರೆದ ಅಂತರಾಳ, ನವರಂಗ ಹಾಗೂ ನಂದಿ ಮಂತಪಗಳನ್ನುಳ್ಳ ಇದರ ಗರ್ಭಗೃಹದ ಬಾಗಿಲವಾಡವು ನಾಲ್ಕು ಶಾಖೆಗಳನ್ನು ಹೊಂದಿದ್ದು ,ಲಲಾಟದಲ್ಲಿ ಗಜಲಕ್ಷ್ಮಿ ಇದೆ. ಈ ಗುಡಿಗೆ ಪಾರ್ಶ್ವದಿಂದ ಪ್ರವೇಶವಿದೆ. ಜೀರ್ಣಾವಸ್ಥೆಯಲ್ಲಿರುವ ಈ ಗುಡಿಗೆ ಕದಂಬನಾಗರ ಶಿಖರವಿದ್ದು , ಶಾಸನೋಕ್ತಲಕ್ಷ್ಮಣೇಶ್ವರ ಗುಡಿ ಇದೇ ಆಗಿರಬಹುದೆನಿಸುತ್ತದೆ. ಈ ಗುಡಿಯ ಎಡಬದಿಯಲ್ಲಿ ಪುಷ್ಕರಣಿ ಇದೆ.


ಇಲ್ಲಿಯ ಮತ್ತೊಂದು ದೇವಾಲಯವಾದ ಧರ್ಮಲಿಂಗೇಶ್ವರ ಗುಡಿಯು ಪೂರ್ಣ ಜೀರ್ಣೋದ್ಧಾರಗೊಂಡಿದ್ದರೂ ಬೃಹತ್ತಾದ ಬಲಹರಿ ಲಿಂಗವನ್ನು ಒಳಗೊಂಡಿದೆ. ಆಕರ್ಷಕವಾದ ಬಾಗಿಲವಾಡ, ಚಂದ್ರಶಿಲೆ, ಮಕರತೋರಣ,ಭೈರವ, ನಾಗಶಿಲ್ಪ.ಉಮಾಮಹೇಶ್ವರರ ಬಿಡಿ ಶಿಲ್ಪಗಳು ಮುಂ.ಶಿಲ್ಪಾವಶೇಷಗಳನ್ನು ಕಾಣಬಹುದಾಗಿದೆ. ಇಲ್ಲಿಯ ಬಾಗಿಲವಾಡವು ಸುಮಾರು ೧೫ ಅಡಿ ಎತ್ತರವಿದ್ದು, ಸಪ್ತ ಶಾಖೆಗಳನ್ನು ಹೊಂದಿದ್ದು , ಉತ್ತರಾಂಗದಲ್ಲಿ ಕ್ರಮವಾಗಿ ಆದಿತ್ಯ, ಗಣಪ, ಬ್ರಹ್ಮ,ವಿಷ್ಣು, ಶಿವ, ಕಾರ್ತಿಕೇಯ ಹಾಗೂ ಸೂರ್ಯನ ಕಿರು ಶಿಲ್ಪಗಳುಳ್ಳ ಏಳು ಕಿರು ಮಂಟಪಗಳಿದ್ದು ಅವುಗಳ ಶಿಖರಗಳು ವೈವಿಧ್ಯಮಯವಾಗಿವೆ.



ಊರ ಉತ್ತರಕ್ಕಿರುವ ಹನಮಂತನ ಗುಡಿಯು ಕಲ್ಯಾಣದ ಚಾಲುಕ್ಯರ ಕಾಲದ ಕಂಬಗಳನ್ನು ಬಳಸಿ ಅನಂತರದಲ್ಲಿ ನಿಲ್ಲಿಸಿರುವ ದೇವಾಲಯವಾಗಿದೆ. ಈ ಗುಡಿಯಲ್ಲಿರುವ ಶಾಸನ ಉಲ್ಲೇಖಿಸುವ ಸಿಡಿಲಬಾವಿ ‘ಋಷಿಗುಂಡ’ ಎಂದು ಕರೆಯಲ್ಪಡುತ್ತದೆ. ಊರ ಪೂರ್ವಕ್ಕೆ ಸುಮಾರು ಒಂದೂವರೆ ಕಿ.ಮೀ.ದೂರದಲ್ಲಿ ನೀರ್ಚಿಲುಮೆಯೊಂದ ಬಳಿಯಿದ್ದು ಪೂರ್ಣ ಶಿಥಿಲವಾಗಿದೆ.


ಊರ ಉತ್ತರಕ್ಕೆ ಇರುವ ಬಸವಣ್ಣನ ಗುಡಿಯೇ ಶಾಸನೋಕ್ತ ಗವರೇಶ್ವರ ದೇವಾಲಯವಾಗಿದ್ದು , ಗರ್ಭಗೃಹ,ತೆರೆದ ಆಂತರಾಳ ಹಾಗೂ ನವರಂಗಗಳನ್ನು ಹೊಂದಿ ಪೂರ್ವಾಭಿಮುಖವಾಗಿದೆ.

ಚಿದಾನಂದ ಹಿಕ್ಕಲಗುತ್ತಿ ಬಿ.ಎ. ೨